ಬೆಂಗಳೂರಿನಲ್ಲಿ ಹಣವಿಲ್ಲದ ಎಟಿಎಂಗಳ ಅಂತ್ಯಸಂಸ್ಕಾರ
ಬೆಂಗಳೂರು, ಡಿಸೆಂಬರ್ 9: ಇದು ಸ್ವಲ್ಪ ಭಿನ್ನವಾದ ಪ್ರತಿಭಟನೆ. ಜೆಡಿಯು ಸದಸ್ಯರಿಗೆ ಇಂಥದ್ದೊಂದು ಅದ್ಭುತವಾದ ಆಲೋಚನೆ ಬಂದಿದೆ. ಅಪನಗದೀಕರಣದ ಘೋಷಣೆಯಾದ ಒಂದು ತಿಂಗಳ ಮೇಲೆ ಒಂದು ದಿನಕ್ಕೆ ಅಂದರೆ ಡಿಸೆಂಬರ್ 9ರ ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹಲವು ಎಟಿಎಂಗಳು ಔಟ್ ಆಫ್ ಸರ್ವೀಸ್, ಹಣವಿಲ್ಲದಂಥ ಬಿಲೆ ಹಾಳೆ ಹೊದ್ದು ಮಲಗಿವೆ. ಅವುಗಲ ಅಣುಕು ಅಂತ್ಯಸಂಸ್ಕಾರ ಮಾಡುವ ಮೂಲಕ ಜೆಡಿಯು ಕಾರ್ಯಕರ್ತರು ಅಪನಗದೀಕರಣದಿಂದ ಜನರಿಗಾಗಿರುವ ತೊಂದರೆಗೆ ಆಕ್ರೋಶ ದಾಖಲಿಸಿದ್ದಾರೆ. ಎಟಿಎಂಗಳಳಿಗೆ ಹೂಗುಚ್ಛ ಇಟ್ಟು, ಪುರೋಹಿತರಿಂದ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಮಾಡಿಸಿದ್ದಾರೆ.
ಇವೆಲ್ಲ ಒಂದು ತೂಕವಾಯಿತು. ಜತೆಗೆ ಎಟಿಎಂ ಯಂತ್ರಗಳಿಗೆ ಪಿಂಡ ಪ್ರಧಾನ ಮಾಡಿದ್ದಾರೆ. ಒಂದು ಗಂಟೆಗಳ ಕಾಲ ಈ ರೀತಿ ಪ್ರತಿಭಟನೆ ನಡೆದಿದೆ. "ಎಟಿಎಂನಿಂದ ಹಣ ಬರುವುದಿಲ್ಲ ಅಂತಾದರೆ ಅದು ನಿರುಪಯುಕ್ತ. ಅದು ಸಾವಿಗೆ ಸಮಾನ" ಎಂದು ಪ್ರತಿಭಟನಾನಿರತರೊಬ್ಬರು ಹೇಳಿದ್ದಾರೆ.
ದೇಶದಲ್ಲಿ ಹಣವಿಲ್ಲದ ಎಟಿಎಂಗಲ ಸ್ಥಿತಿಯ ಬಗ್ಗೆ ಗಮನ ಸೆಳೆಯುವುದಕ್ಕೆ ಅಂತ್ಯಸಂಸ್ಕಾರದ ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸುವುದಾಗಿ ಪ್ರತಿಭಟನಾನಿರತರು ತಿಳಿಸಿದರು.