ವಿಧಾನಸೌಧದಲ್ಲಿ ಎಚ್ಎಸ್ ದೊರೆಸ್ವಾಮಿ ಪ್ರತಿಭಟನೆ
ಮಂಗಳವಾರ ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಎಚ್.ಎಸ್.ದೊರೆಸ್ವಾಮಿ ಮತ್ತು ಕೆಲವು ಕಾರ್ಯಕರ್ತರು, ಸರ್ಕಾರ ಭೂ ಮಾಫಿಯಾದ ವಿರುದ್ಧ ಮೃಧು ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಭೂ ಮಾಫಿಯಾಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಸರ್ಕಾರ ಬೆಂಗಳೂರು ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಭೂ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿಬಿ ಜಯಚಂದ್ರ ಅವರ 327ನೇ ಕೊಠಡಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. [ಇಂಧನ ಸಚಿವರ ವಿರುದ್ಧ ದೊರೆಸ್ವಾಮಿ ಪತ್ರ]
ಬೆಂಗಳೂರಿನಲ್ಲಿ ಹಲವಾರು ಕೆರೆಗಳನ್ನು ಭೂ ಮಾಫಿಯಾದವರು ಕಬಳಿಸಿ ಕಟ್ಟಡ ನಿರ್ಮಿಸಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಭೂ ಮಾಫಿಯಾದವರು ಸರ್ಕಾರಿ ಜಮೀನುಗಳನ್ನೇ ಕಬಳಿಸಿದ್ದಾರೆ. ಆದರೆ, ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಭೂ ಮಾಫಿಯಾಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೊರೆಸ್ವಾಮಿ ಆರೋಪಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ.ಜಯಚಂದ್ರ ಅವರು ಭೂ ಮಾಫಿಯಾಕ್ಕೆ ಕಡಿವಾಣ ಹಾಕುತ್ತೇವೆ ಎಂದು ಭರವಸೆ ನೀಡಬೇಕು. ಅಲ್ಲಿಯ ತನಕ ಹೋರಾಟ ನಡೆಸುತ್ತೇವೆ ಎಂದು ದೊರೆಸ್ವಾಮಿ ಘೋಷಿಸಿದರು. ವಿಧಾನಸೌಧದ ನೌಕರರು ದೊರೆಸ್ವಾಮಿ ಮನವೊಲಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಸಚಿವ ಟಿವಿ ಜಯಚಂದ್ರ ಸದ್ಯದಲ್ಲೇ ಸ್ಥಳಕ್ಕೆ ಬರುವ ನಿರೀಕ್ಷೆ ಇದೆ.