ಕಾಂಗ್ರೆಸ್ ತೊರೆದ ಮಾಜಿ ಸಚಿವ ಕುಮಾರ ಬಂಗಾರಪ್ಪ
ಮಾಜಿ ಸಚಿವ ಕುಮಾರ ಬಂಗಾರಪ್ಪ ಕಾಂಗ್ರೆಸ್ ತೊರೆದಿದ್ದಾರೆ. ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಬಹಳ ದಿನದಿಂದ ಹರಿದಾಡುತ್ತಿತ್ತು. ಶುಕ್ರವಾರ ಪತ್ರಿಕಾಗೋಷ್ಠಿ ಮಾಡಿ, ಕಾಂಗ್ರೆಸ್ ತೊರೆಯುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ
ಬೆಂಗಳೂರು, ಮಾರ್ಚ್ 3: ಕಾಂಗ್ರೆಸ್ ಪಕ್ಷ ತೊರೆದಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ವೇಳೆ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಮಾರ ಬಂಗಾರಪ್ಪ ಬಿಜೆಪಿ ಸೇರುವ ಬಗ್ಗೆ ಸುದ್ದಿ ದಟ್ಟವಾಗಿ ಹಬ್ಬಿತ್ತು. ಈ ಬಗ್ಗೆ ಪ್ರಶ್ನಿಸಿದಾಗೆಲ್ಲ, "ಯಾವುದೇ ನಿರ್ಧಾರ ಅಂತಿಮವಾಗಿಲ್ಲ" ಎಂದು ಅವರು ಹೇಳುತ್ತಿದ್ದರು. ಅದರೆ ಈಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಜನ್ಮದಿನದಂದು ಅವರಿಗೆ ಶುಭ ಕೋರಿದ್ದ ಕುಮಾರ ಬಂಗಾರಪ್ಪ, ಬಿಎಸ್ ವೈ ಅವರನ್ನು ಹೊಗಳಿದ್ದರು.[ಕುಮಾರ ಬಂಗಾರಪ್ಪ ಜತೆ ಒನ್ಇಂಡಿಯಾ ಕನ್ನಡ ವಿಶೇಷ ಸಂದರ್ಶನ]
ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ನ ಬಿಡುವಂತೆ ಸಲಹೆ ನೀಡಿದ್ದಾರೆ. ಆದರೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ. ಏಕೆಂದರೆ, ಕೆಲವು ನಿರ್ಧಾರಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದ ವೇಳೆ ಅವರು ಹೇಳಿದ್ದರು. ಇದೀಗ ಕುಮಾರ್ ಕಾಂಗ್ರೆಸ್ ತೊರೆದಿದ್ದು, ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.[ಕುಮಾರ್ ಅಂಬುಲೆನ್ಸ್, ವೈದ್ಯರ ಜೊತೆ ಬಿಜೆಪಿಗೆ ಸೇರಲಿ, ಮಧು ಬಂಗಾರಪ್ಪ]
ಶ್ರೀನಿವಾಸ್ ಪ್ರಸಾದ್, ಎಸ್ಸೆಂ ಕೃಷ್ಣ ನಂತರ ಹಿಂದುಳಿದ ವರ್ಗದ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್ ತೊರೆಯುತ್ತಿರುವುದು ಪಕ್ಷದ ಪಾಲಿಗೆ ಹಿನ್ನಡೆ ಎಂಬಂತೆ ಆಗಿದೆ.
ಪರಮೇಶ್ವರ ಪ್ರತಿಕ್ರಿಯೆ: ಕುಮಾರ ಬಂಗಾರಪ್ಪ ಕಾಂಗ್ರೆಸ್ ತೊರೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಪಕ್ಷ ಬಿಡುವವರು ಇರಬಹುದು. ಆದರೆ ಇತರ ಪಕ್ಷಗಳಿಂದ ಕಾಂಗ್ರೆಸ್ ಗೆ ಬರುವವರ ಸಂಖ್ಯೆಯೂ ದೊಡ್ಡದಿದೆ ಎಂದಿದ್ದಾರೆ.