ಬಿಜೆಪಿ ವಕ್ತಾರ ರಮೇಶ್ ಗೆ ಫೇಸ್ ಬುಕ್ ಮೂಲಕ ಜೀವ ಬೆದರಿಕೆ
ಸಚಿವ ಎಂ ಕೃಷ್ಣಪ್ಪ ಅವರ ಭೂಹಗರಣವನ್ನು ಬಯಲಿಗೆಳೆದ ನನಗೆ ಜೀವ ಬೆದರಿಕೆ ಬಂದಿದೆ. ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬ ನನ್ನನ್ನು ಕೊಲ್ಲುವುದಾಗಿ ಎಚ್ಚರಿಸಿದ್ದಾನೆ ಎಂದು ಯಡಿಯೂರು ವಾರ್ಡಿನ ಮಾಜಿ ಕಾರ್ಪೊರೇಟರ್, ಬಿಜೆಪಿ ವಕ್ತಾರ ಎನ್.ಆರ್ ರಮೇಶ್
ಬೆಂಗಳೂರು, ಮೇ 09: ಸಚಿವ ಎಂ ಕೃಷ್ಣಪ್ಪ ಅವರ ಭೂಹಗರಣವನ್ನು ಬಯಲಿಗೆಳೆದ ನನಗೆ ಜೀವ ಬೆದರಿಕೆ ಬಂದಿದೆ. ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬ ನನ್ನನ್ನು ಕೊಲ್ಲುವುದಾಗಿ ಎಚ್ಚರಿಸಿದ್ದಾನೆ ಎಂದು ಯಡಿಯೂರು ವಾರ್ಡಿನ ಮಾಜಿ ಕಾರ್ಪೊರೇಟರ್, ಬಿಜೆಪಿ ವಕ್ತಾರ ಎನ್.ಆರ್ ರಮೇಶ್ ಅವರು ಹೇಳಿದ್ದಾರೆ. ಈ ಕುರಿತಂತೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
'ಹರೀಶ್ ತಲಹರಿ ಎಂಬುವರು ಫೇಸ್ಬುಕ್ನಲ್ಲಿರುವ ಪೋಸ್ಟ್ ಪ್ರಕಾರ'ಲೋ ರಮೇಶ್, ಪಕ್ಕಾ ನೀನು ಮರ್ಡರ್ ಆಗ್ತಿಯಾ. ಕಾಂಗ್ರೆಸ್ ಅವರನ್ನೇ ಟಾರ್ಗೆಟ್ ಮಾಡ್ತಿದ್ದಿಯಾ. ಹುಷಾರ್. ಕೆಲಸಾ ಕೊಟ್ರೆ. ನೀನು ಹುಡುಕಿದರೂ ಸಿಗಲ್ಲ' ಎಂದು ಬೆದರಿಕೆ ಕಾಮೆಂಟ್ ಇದೆ.
ಸಚಿವ ಎಂ.ಕೃಷ್ಣಪ್ಪ ಅವರ ಮೇಲಿನ ಆರೋಪ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ್ದೆ. ಹೀಗಾಗಿ ನನ್ನ ವಿರುದ್ಧ ಬೆದರಿಕೆ ಬಂದಿದೆ. ಮಂಗಳವಾರ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬಳಿಕ ಪೊಲೀಸ್ ಕಮಿಷನರ್ ಅವರಿಗೂ ದೂರು ಕೊಡುತ್ತೇನೆ ಎಂದು ಎನ್ ಆರ್ ರಮೇಶ್ ಹೇಳಿದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟ ರಸ್ತೆಯಲ್ಲಿರುವ 350 ಕೋಟಿ ರು ಮೌಲ್ಯದ 4.20 ಎಕರೆ ಸರ್ಕಾರಿ ಸ್ವತ್ತನ್ನು ಸಚಿವ ಎಂ ಕೃಷ್ಣಪ್ಪ ಅವರು ಕಬಳಿಸಿ, ಖಾಸಗಿ ಸಂಸ್ಥೆಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎನ್ ಆರ್ ರಮೇಶ್ ಅವರು ಆಗ್ರಹಿಸಿದ್ದರು.