ಬೆಂಗ್ಳೂರಲ್ಲಿ ಇನ್ನೆರಡು ದಿನ ಮಳೆ, ನೀವೇನು ಮಾಡ್ಬೇಕು?
ಬೆಂಗಳೂರು, ಜುಲೈ, 29: ಒಂದು ದಿನದ ಮಳೆಗೆ ಬೆಂಗಳೂರು ಬೆಚ್ಚಿ ಬಿದ್ದಿದೆ. ಆದರೆ ಇದರೊಂದಿಗೆ ಇನ್ನು ಎರಡು ದಿನದ ಭಾರೀ ಮಳೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ದಕ್ಷಿಣ ತಮಿಳುನಾಡು ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಬೆಂಗಳೂರು ಸುತ್ತ ಮುತ್ತ ಭಾರೀ ಮಳೆಯಾಗಲಿದೆ ಹವಾಮಾನ ಇಲಾಖೆ ನಿರ್ದೇಶಕಿ ಡಾ. ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.[ಬೆಂಗಳೂರಲ್ಲಿ ಮಳೆ ಅವಾಂತರ ಹೇಗಿತ್ತು?]
ಒಂದು ದಿನದ ಮಳೆಗೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಮಹಾನಗರ ಪಾಲಿಕೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕರ ದೂರು ಸ್ವೀಕರಿಸಲು 10 ಪ್ರಮುಖ ನಿಯಂತ್ರಣ ಕೊಠಡಿಗಳು ಕೆಲಸ ಮಾಡಲಿವೆ. ಧಾರಾಕಾರ ಮಳೆ ಮುಂದುವರಿದರೆ ಬಿಬಿಎಂಪಿ ಮತ್ತು ಸರ್ಕಾರದ ಮೇಲೆ ಆರೋಪ ಮಾಡುವ ಬದಲು ನಮ್ಮ ಎಚ್ಚರಿಕೆಯನ್ನು ನಾವು ತೆಗೆದುಕೊಳ್ಳುವುದು ಒಳ್ಳೆಯದು.
61 ತಾತ್ಕಾಲಿಕ ನಿಯಂತ್ರಣ ಕೊಠಡಿ
ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗುವ ಸಂದರ್ಭದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ತಾತ್ಕಾಲಿಕವಾಗಿ 61 ನಿಯಂತ್ರಣ ಕೊಠಡಿ ಸ್ಥಾಪಿಸಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ಮೇಯರ್ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.
ಪಾಲಿಕೆ ನಿಯಂತ್ರಣ ಕೊಠಡಿಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲ ವಲಯಗಳಿಗೆ ಸಂಬಂಧಿಸಿ ಸಹಾಯವಾಣಿಯನ್ನು ತೆರೆದಿದ್ದು ನಾಗರಿಕರು ದೂರುಗಳ ಸಲ್ಲಿಕೆ ಮಾಡಬಹುದು.
ಎಚ್ಚರಿಕೆ ವಹಿಸಿ
ದುರ್ಬಲಗೊಂಡು, ಬೀಳುವ ಹಂತದಲ್ಲಿ ಇರುವ ರಸ್ತೆ ಬದಿಯ ಮರಗಳ ಹಾಗೂ ವಿದ್ಯುತ್ ತಂತಿಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಂಜುನಾಥ್ ರೆಡ್ಡಿ ವಿನಂತಿ ಮಾಡಿದ್ದಾರೆ.
ಬಿಗಡಾಯಿಸಲಿದೆ ಪರಿಸ್ಥಿತಿ
ಒಂದು ವೇಳೆ ಮಹಾನಗರದಲ್ಲಿ ನಾಳೆ ಮತ್ತು ನಾಡಿದ್ದು ಧಾರಾಕಾರ ಮಳೆ ಸುರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದರಲ್ಲಿ ಅನುಮಾನ ಇಲ್ಲ.
ರಕ್ಷಣಾ ಕಾರ್ಯ
ಧಾರಾಕಾರ ಮಳೆ ಪರಿಣಾಮ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಬಿಟಿಎಂ ಲೇಔಟ್, ಕೋಡಿಚಿಕ್ಕನಹಳ್ಳಿ, ಬನ್ನೆರುಘಟ್ಟ ರಸ್ತೆಗೆ ಸಂಬಂಧಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಮುಂದುವರಿಸಲಾಗಿದೆ.