ಪ್ರವಾಹ ತಡೆಗೆ ಬಿಬಿಎಂಪಿಯಿಂದ 61 ಕಂಟ್ರೋಲ್ ರೂಂ
ನೆರೆ ಸೇರಿದಂತೆ ಮಳೆಗೆ ಸಂಬಂಧಿಸಿದ ತುರ್ತು ಅವಘಡಗಳನ್ನು ನಿಭಾಯಿಸಲು ಎಲ್ಲಾ 61 ಉಪವಿಭಾಗಗಳಲ್ಲೂ ಕಂಟ್ರೋಲ್ ರೂಂಗಳನ್ನು ಸ್ಥಾಪನೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಬೆಂಗಳೂರು, ಮೇ 21: ಮಳೆಗಾಲ ಎದುರಿಸಲು ಬಿಬಿಎಂಪಿ ಸಜ್ಜಾಗಿದೆ. ಎಲ್ಲಾ ಬಗೆಯ ಮಳೆಗಾಲದ ಪರಿಸ್ಥಿತಿಗಳನ್ನು ನಿಭಾಯಿಸಲು ಎಲ್ಲಾ 61 ಉಪ ವಿಭಾಗಗಳಲ್ಲೂ ಕಂಟ್ರೋಲ್ ರೂಂ ಸ್ಥಾಪನೆ ಮಾಡಲು ನಿರ್ಧರಿಸಿದೆ.
ಈಗಾಗಲೇ ನೆರೆ ಬರಬಹುದಾದ 299 ಸ್ಥಳಗಳನ್ನು ಗುರುತಿಸಲಾಗಿದೆ. ಸಂಚಾರಿ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡದಿಂದ ಮಾಹಿತಿ ಪಡೆದು ಈ ಸಾಂಭಾವ್ಯ ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಇದರಲ್ಲಿ 253 ಪ್ರದೇಶಗಳಲ್ಲಿ ಪ್ರವಾಹ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಕಿ ಉಳಿದ 46 ಪ್ರದೇಶಗಳಲ್ಲಿ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ.[ಧಾರಾಕಾರ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿಹೋದ ಬಿಬಿಎಂಪಿ ಕಾರ್ಮಿಕ]
ಇದಲ್ಲದೆ ಎಲ್ಲಾ ರೀತಿಯ ತುರ್ತು ಅವಘಡಗಳನ್ನು ನಿಭಾಯಿಸಲು 61 ಕಂಟ್ರೋಲ್ ರೂಂಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ಎಲ್ಲಾ ಉಪ ವಿಭಾಗಗಳಲ್ಲೂ ತುರ್ತು ನಿರ್ವಹಣೆ ವಾಹನಗಳನ್ನು ಅಗತ್ಯ ಸಲಕರಣೆಗಳೊಂದಿಗೆ ಸಜ್ಜಾಗಿಡುವಂತೆ ಆದೇಶ ನೀಡಲಾಗಿದೆ. ಸದ್ಯ ಬಿಬಿಎಂಪಿಯ 8 ವಲಯಗಳು ಹಾಗೂ ಮಲ್ಲೇಶ್ವರಂನ ಐಪಿಪಿ ಕೇಂದ್ರ ಜಾಗೂ ಬಿಬಿಎಂಪಿಯ ಕೇಂದ್ರ ಕಚೇರಿಗಳ ಕಂಟ್ರೋಲ್ ರೂಂ ಗಳಿಂದ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಸದ್ಯದಲ್ಲೇ ಈ 61 ಕಂಟ್ರೋಲ್ ರೂಂಗಳು ಕಾರ್ಯಾರಂಭ ಮಾಡಲಿವೆ.
ಇದಲ್ಲದೆ 160ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಮಳೆಗಾಲದಲ್ಲಿ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹಾದುಹೋಗಲು ಅನುಕೂಲವಾಗುವಂತೆ ಈ ಸುರಸ್ತಿ ಕಾಮಗಾರಿಯನ್ನುಕೈಗೊಳ್ಳಲಾಗಿದೆ.[ವಾರಾಂತ್ಯದ ಮಳೆಗೆ ಕಂಗಾಲಾದ ಬೆಂಗಳೂರಿಗರು, ನೆಲ ಕಂಡ ಮರಗಳು]
ಸದ್ಯಕ್ಕೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಿಂತಿದೆಯಾದರೂ ನರೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿಯನ್ನು ಸಂಪುರ್ಣವಾಗಿ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.