ಆನೇಕಲ್: ಕುಟುಂಬಕ್ಕೆ ವಿಷಉಣಿಸಿ ತಾನೂ ಬೆಂಕಿ ಇಟ್ಕೊಂಡ
ಬೆಂಗಳೂರು, ಡಿ. 14: ಅದೊಂದು ಘೋರ ಘಟನೆ, ಮನೆಯವರಿಗೆಲ್ಲ ವಿಷ ಉಣಿಸಿದ ಯಜಮಾನ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಳ್ಳುತ್ತಾನೆ. ಕಿರುಚಾಟ ಕೇಳಿ ಅಕ್ಕ ಪಕ್ಕದವರು ಮನೆಗೆ ಬಂದರೆ ಸ್ವತಃ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಹೌದು ಇಂಥದದ್ದೊಂದು ಘೋರ ದುರಂತ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ಕೋನಸಂದ್ರದಲ್ಲಿ ನಡೆದಿದೆ. ಸಾಲದ ಹೊರೆ ಮತ್ತು ಕೌಟುಂಬಿಕ ಕಲಹದಿಂದ ಬೇಸತ್ತ ಇಡೀ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿದೆ.[ಹುಬ್ಬಳ್ಳಿ ಸಮೀಪ ನೇಣಿಗೆ ಶರಣಾದ ಶಿರಸಿ ಪ್ರೇಮಿಗಳು]
ಕೋನಸಂದ್ರದ ನಿವಾಸಿ ಫಯಾಜ್ ಪಾಷ (36) ತನ್ನ ಪತ್ನಿ ರೇಷ್ಮಾ (28), ಮಕ್ಕಳಾದ ಮೆಹಬೂಬ್ (5), ಉಸ್ಮಾ (2) ಸಾದಿಕ್ (1) ಅವರಿಗೆ ರಾತ್ರಿ ವಿಷವುಣಿಸಿದ್ದಾನೆ. ನಂತರ ತಾನೂ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಪಂಚವನ್ನು ಇನ್ನು ನೋಡದ ಹಸುಗೂಸುಗಳು ಬಲಿಯಾಗಿವೆ.
ಶಿರಾ ಮೂಲದ ಫಯಾಜ್ಪಾಷ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಬೇಗೂರಿನ ರೇಷ್ಮಾ ಪ್ರೀತಿಸಿ ವಿವಾಹವಾಗಿದ್ದ. ಫಯಾಜ್ ಪಾಷನ ತಂದೆ ಸೌದಿ ಅರೆಬಿಯಾದಲ್ಲಿ ಕೆಲಸ ಮಾಡಿ ಶಿರಾಕ್ಕೆ ಹಿಂದಿರುಗಿದ್ದರು. ಅಲ್ಲದೇ ಇಲ್ಲಿ ಸ್ವಲ್ಪಪ್ರಮಾಣದ ಆಸ್ತಿ ಸಂಪಾದನೆ ಮಾಡಿದ್ದರು.[ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!]
ಪ್ರೇಮ ವಿವಾಹವಾದ ಫಯಾಜ್ ತನಗೆ ಮನೆಯೊಂದನ್ನು ನೀಡುವಂತೆ ತಾಯಿ ಬಳಿ ಕೇಳಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಬೇಸತ್ತ ಫಯಾಜ್ ಬೆಂಗಳೂರಿನಲ್ಲಿ ವಾಸವಾಗಿದ್ದ. ಅಲ್ಲದೇ ತನ್ನ ಕುಟುಂಬದಿಂದ ಸಂಪರ್ಕವನ್ನು ಕಳೆದುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.