'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ'ನ ವಾರ್ಷಿಕೋತ್ಸವ ಸಂಭ್ರಮ
ಬೆಂಗಳೂರು, ಸೆಪ್ಟೆಂಬರ್ 28 : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಶುಚಿಯಾಗಿಡಬೇಕೆಂಬ ಉದ್ದೇಶದಿಂದ ಅಕ್ಟೋಬರ್ 2ರಂದು ಆರಂಭಿಸಿದ್ದ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನಕ್ಕೆ ಈಗ ವರ್ಷದ ಸಂಭ್ರಮ. ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥನಾರಾಯಣ ಸಿಎನ್ ಅವರೇ ಈ ಯೋಜನೆಯ ರೂವಾರಿ.
ಸ್ವಚ್ಛ ಭಾರತ ಅಭಿಯಾನದ ಭಾಗವಾಗಿರುವ 'ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ'ನ ಈ ಸಂಭ್ರಮವನ್ನು ಕ್ಷೇತ್ರದ ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಅಕ್ಟೋಬರ್ 2, ಗಾಂಧಿ ಜಯಂತಿಯಂದು ಮಲ್ಲೇಶ್ವರದಲ್ಲಿ ಮತ್ತು ಯಶವಂತಪುರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. [ಹೆಮ್ಮೆ ತಂದ ಮೈಸೂರಿಗೆ ಕ್ಲೀನ್ಸಿಟಿ ಪ್ರಶಸ್ತಿ ಪ್ರದಾನ]
ಮೊದಲಿಗೆ, ಮಲ್ಲೇಶ್ವರದಲ್ಲಿರುವ ಮಹಾರಾಣಿ ಅಮ್ಮಣ್ಣಿ ಕಾಲೇಜು ಬಳಿಯಿರುವ ಸರ್ಕಲ್ ಮಾರಮ್ಮ ವೃತ್ತದಲ್ಲಿ ಬೆಳಿಗ್ಗೆ 9.30ಕ್ಕೆ 'ಸ್ವಚ್ಛ ಭಾರತ ಲಾಂಛನ'ವನ್ನು ಬಿಡುಗಡೆ ಮಾಡಲಾಗುತ್ತಿದೆ. ['ಸ್ಮಾರ್ಟ್ ಸ್ವಚ್ಛ ಮಲ್ಲೇಶ್ವರಂ' ಅಭಿಯಾನದ ರೂವಾರಿಗಳು ಯಾರು?]
ನಂತರ, ಯಶವಂತಪುರದ ದೀವಾನರಪಾಳ್ಯದ ಎಚ್ಎಂಟಿ ರಸ್ತೆಯಲ್ಲಿರುವ ಚಂದ್ರೋದಯ ಶಾಲೆಯ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ, ಕಳೆದ ಒಂದು ವರ್ಷದಲ್ಲಿ ಪೂರೈಸಿದ ಸಾಧನೆಗಳನ್ನು ನಾಗರಿಕರೊಂದಿಗೆ ಹಂಚಿಕೊಳ್ಳುವ ಕಾರ್ಯಕ್ರಮ ಆಯೋಜಿಸಲಾಗಿದೆ. [ಗಿರಿನಗರದಲ್ಲಿ ಪುಟಾಣಿಗಳಿಗಾಗಿ ಸ್ವಚ್ಛ ಬಾಲ ಅಭಿಯಾನ]
ಈ ಕಾರ್ಯಕ್ರಮದಲ್ಲಿ ಮಲ್ಲೇಶ್ವರಂನ ಶಾಸಕ ಡಾ. ಅಶ್ವತ್ಥನಾರಾಯಣ, ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಷನ್, ಮೈ ಕ್ಲೀನ್, ಮಲ್ಲೇಶ್ವರಂ ಅಭಿಯಾನ, ಮಲ್ಲೇಶ್ವರಂನ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಚಿತ್ರನಟ ಯಶ್ ಕೂಡ ಈ ಅಭಿಯಾನದ ರಾಯಭಾರಿಯಾಗಿದ್ದಾರೆ. [ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥ ನಾರಾಯಣ ಸಂದರ್ಶನ]