ಡಿಕೆ ರವಿ ಕೇಸ್ : 'ರಿಯಲ್' ಸ್ಟೋರಿ ಹೊರಗೆಳೆಯುವುದೆ ಇಡಿ?
ಬೆಂಗಳೂರು, ಮೇ. 20 : ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣದ ತನಿಖೆ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ರವಿ ಅವರ ಅಸಹಜ ಸಾವಿನ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಸೇರಿಕೊಂಡಿದ್ದರಿಂದ ಜಾರಿ ನಿರ್ದೇಶನಾಲಯ ಕೂಡ ಸಿಬಿಐನೊಂದಿಗೆ ತನಿಖೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಾರ್ಚ್ 16ರಂದು, ಸೋಮವಾರ ಬೆಳಿಗ್ಗೆ ಸೇಂಟ್ ಜಾನ್ ವುಡ್ ಅಪಾರ್ಟ್ಮೆಂಟಿನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಡಿಕೆ ರವಿ ಅವರ ಶವ ಸಿಕ್ಕಿತ್ತು. ರವಿ ಅವರ ನಿಗೂಢ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿದ್ದ ಸಿದ್ದರಾಮಯ್ಯ ಸರಕಾರ, ವಿರೋಧ ಪಕ್ಷದ ಒತ್ತಾಯ, ಸಾರ್ವಜನಿಕರ ಹೋರಾಟಕ್ಕೆ ಮಣಿದು ಕೊನೆಗೂ ಸಿಬಿಐ ತನಿಖೆಗೆ ಒಪ್ಪಿಸಿದೆ.
ಕೋಲಾರದಲ್ಲಿ ಮರಳು ಮಾಫಿಯಾ ವಿರುದ್ಧ ಮತ್ತು ತೆರಿಗೆಗಳ್ಳರ ವಿರುದ್ಧ ತಿರುಗಿಬಿದ್ದಿದ್ದ ರವಿ ಅವರ ಸಾವಿಗೆ ಕಾರಣವಾಗಿದ್ದಾದರೂ ಏನು ಎಂಬುದನ್ನು ಸಿಬಿಐ ಹಲವಾರು ಕೋನಗಳಿಂದ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆ ಇನ್ನೂ ಯಾವುದೇ ಖಚಿತವಾದ ತೀರ್ಮಾನಕ್ಕೆ ಬಂದಿಲ್ಲ. [ಡಿಕೆ ರವಿ ಕೇಸ್ ಟೈಮ್ ಲೈನ್]
ಆದರೆ, ಡಿಕೆ ರವಿ ಅವರ ಹೆಸರು ಆರ್ ಅಂಡ್ ಎಚ್ ಪ್ರಾಪರ್ಟೀಸ್ ರಿಯಲ್ ಎಸ್ಟೇಟ್ ಕಂಪನಿಯ ಜೊತೆ ತಳಕುಹಾಕಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಹಲವಾರು ಹಣಕಾಸು ವ್ಯವಹಾರಗಳು ಕಂಪನಿ ಹೆಸರಲ್ಲಿ ನಡೆದಿವೆ. ಇದರಲ್ಲಿ ರವಿ ಅವರ ಕೈವಾಡ ಎಷ್ಟಿತ್ತು, ಅವರು ನೇರವಾಗಿ ಭಾಗಿಯಾದ್ದರಾ ಎಂಬುದನ್ನು ತಿಳಿಯಲು ಜಾರಿ ನಿರ್ದೇಶನಾಲಯ ತನಿಖೆ ನಡೆಸುವ ಸಾಧ್ಯತೆಯಿದೆ. [ಸಿಬಿಐ ತನಿಖೆಯ ಮೊದಲ ಪುಟ]
ತನಿಖೆ ಇನ್ನೂ ಜಾರಿಯಲ್ಲಿದೆ
ದೆಹಲಿಯ ಸಿಬಿಐ ಅಧಿಕಾರಿಗಳು ಒನ್ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದೇನೆಂದರೆ, ತನಿಖೆ ಇನ್ನೂ ಮುಗಿದಿಲ್ಲ, ನಾವು ಯಾವುದೇ ಖಚಿತವಾದ ತೀರ್ಮಾನಕ್ಕೆ ಬಂದಿಲ್ಲ. ಈ ಸಾವಿನ ಹಲವಾರು ಮಗ್ಗಲುಗಳು ತೆರೆದುಕೊಳ್ಳುತ್ತಿವೆ. ಪ್ರಾಥಮಿಕ ಹಂತದಲ್ಲಿ ದಕ್ಕಿದ ಕೆಲ ಮಾಹಿತಿಗಳು ಮತ್ತಷ್ಟು ತನಿಖೆಗೆ ಇಂಬು ನೀಡುತ್ತಿವೆ. ಮುಂದಿನ ದಿನಗಳಲ್ಲಿ ತನಿಖೆ ಇನ್ನಷ್ಟು ತ್ವರಿತಗೊಳ್ಳಲಿದೆ. [ವಾಟ್ಸಾಪ್ ಸಂದೇಶದಲ್ಲಿ ಏನಿದೆ?]
ಸಿಬಿಐ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿರುವುದೇನು
ಒಂದು ತಿಂಗಳಿಂದ ತನಿಖೆಯಲ್ಲಿ ಮುಳುಗಿರುವ ಸಿಬಿಐ, ಪ್ರಾಥಮಿಕ ತನಿಖೆಯನ್ನು ಪೂರೈಸಿದ್ದು, ರವಿ ಅವರ ಸಾವು ನೇಣು ಹಾಕಿಕೊಂಡಿದ್ದರಿಂದ ಆಗಿದೆ ಎಂದು ತಿಳಿಸಿದೆ. ಮತ್ತೊಮ್ಮೆ ಅಟಾಪ್ಸಿ ಪರೀಕ್ಷೆ ನಡೆಸಬೇಕು ಮತ್ತು ರವಿ ದೇಹದ ಅಂಗಗಳ ಮರುಪರೀಕ್ಷೆಯನ್ನು ಕೇಂದ್ರ ವಿಧಿವಿಜ್ಞಾನ ಸಂಸ್ಥೆಯಿಂದ ನಡೆಸಬೇಕೆಂದು ನಿರ್ಣಯಕ್ಕೆ ಬಂದಿದೆ.
ಅಲ್ಲದೆ, ರವಿ ಅವರ ರಿಯಲ್ ಎಸ್ಟೇಟ್ ಮತ್ತು ಅವರ ಸ್ನೇಹಿತ ಹರಿ ಎಂಬುವವರು ನಡೆಸುತ್ತಿದ್ದ ಆರ್ ಅಂಡ್ ಎಚ್ ಪ್ರಾಪರ್ಟೀಸ್ ವ್ಯವಹಾರಗಳ ಲೆಕ್ಕಪತ್ರಗಳ ಅಧ್ಯಯನ ನಡೆಸುತ್ತಿದೆ. ರವಿ ಅವರು 50 ಎಕರೆ ಜಮೀನು ಖರೀದಿಸಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರೆಂದು ಆರೋಪಿಸಲಾಗಿದೆ. ಈ ಜಮೀನನ್ನು ಎಸ್ಸಿ/ಎಸ್ಟಿ ಕೋಟಾದಡಿ ನೀಡಿರುವುದು ಕೂಡ ವಿವಾದಕ್ಕೆ ಕಾರಣವಾಗಿದೆ.
ದಕ್ಷ ಅಧಿಕಾರಿಯಾಗಿದ್ದ, ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದ, ಸಾರ್ವಜನಿಕರ ಪಾಲಿಗೆ ಜನಪ್ರಿಯ ಅಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವು ವೈಯಕ್ತಿಕ ಕಾರಣಗಳಿಂದಾಗಿ ಸಂಭವಿಸಿತೋ, ಅಥವಾ ಭೂಗಳ್ಳರ ಕೈವಾಡ ಸಾವಿನ ಹಿಂದೆಯೋ ಎಂಬುದು ಸಮಗ್ರ ತನಿಖೆಯಿಂದ ಬಹಿರಂಗವಾಗಬೇಕಿದೆ.