ತೂರಿ ಬರುವ ದೀಪಾವಳಿ ರಾಕೆಟ್ ತಡೆಯುವವರು ಯಾರು?
ಬೆಂಗಳೂರು, ಅ.25: ಮನೆಯ ಮೂರನೇ ಮಹಡಿಯಲ್ಲಿ ನಿಂತುಕೊಂಡು ಪೋನ್ ನಲ್ಲಿ ಮಾತನಾಡುತ್ತಿದ್ದೀರಿ, ಆಗ ಇದಕ್ಕಿದ್ದಂತೆ ಬೆಂಕಿ ಉಗುಳುತ್ತ ಬಂದ ದೀಪಾವಳಿ ರಾಕೆಟ್ ವೊಂದು ನಿಮ್ಮ ಸಮೀಪದಲ್ಲೇ ಹಾದು ಹೋಗುತ್ತದೆ. ಸಂಜೆ ಕೆಲಸ ಮುಗಿಸಿ ಬೈಕ್ ನಲ್ಲಿ ಮನೆಗೆ ಆಗಮಿಸುತ್ತಿದ್ದೀರಿ, ಆಗ ನಿಮ್ಮ ವಾಹನದ ಟೈರ್ ಅಡಿಗೆ ಆಟಂ ಬಾಂಬ್ ವೊಂದು ಸ್ಫೋಟವಾಗುತ್ತದೆ ಇಂಥ ಅನುಭವಗಳು ಕಳೆದರಡು ದಿನದಲ್ಲಿ ನಿಮಗೆ ಆಗಿರಲೇ ಬೇಕು ಯಾಕಂದ್ರೆ ಇದು ದೀಪಾವಳಿ!
ಜಯನಗರದಿಂದ ಕತ್ರಿಗುಪ್ಪೆಗೆ ಬೈಕ್ ನಲ್ಲಿ ತಲುಪಲು ಎಷ್ಟು ಸಮಯ ಬೇಕು? ಅಬ್ಬಬ್ಬಾ ಎಂದರೆ ಅರ್ಧ ಗಂಟೆ, ಟ್ರಾಫಿಕ್ ಇದೇ ಅನ್ಕೊಳ್ಳಿ ಮುಕ್ಕಾಲು ಗಂಟೆ. ಆದರೆ ಈಗ ಬರೋಬ್ಬರಿ ಒಂದು ತಾಸು ಹಿಡಿಯುತ್ತಿದೆ. ಇದು ಕೇವಲ ಜಯನಗರ-ಕತ್ರಿಗುಪ್ಪೆ ಕತೆಯಲ್ಲ. ನಗರದ ವಿವಿಧೆಡೆ ಸಂಚರಿಸುವವರು ಇದೇ ಅನುಭವಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಪಟಾಕಿ!
ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಮುಗಿದಿದೆ. ಆದರೆ ಪಟಾಕಿ ಸದ್ದು ಅಡಗಿಲ್ಲ. ಹೌದು ಪ್ರತಿವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ಆರ್ಭಟ ಕೊಂಚ ತಗ್ಗಿದೆ ಎಂದೇ ಹೇಳಬಹುದು. ಪರಿಸರ ಜಾಗೃತಿ, ಸಂಜೆ ಕಾಣಿಸಿಕೊಳ್ಳುವ ಮಳೆ ಇದಕ್ಕೆ ಕಾರಣವಾಗಿರಬಹುದು. ಪಟಾಕಿ ಸುಡಲು ಹೋಗಿ, ಹತ್ತಿರ ನಿಂತು ಇಲ್ಲವೇ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಹೊಡೆದ ಪಟಾಕಿ ಸಿಡಿದು ಕಣ್ಣು ಕಳೆದುಕೊಂಡವರು, ಮ-ಕೈ ಸುಟ್ಟಕೊಂಡವರು ಆಸ್ಪತ್ರೆ ಸೇರಿದ್ದು ಗೊತ್ತೆ ಇದೆ.[ದೀಪಾವಳಿ ಪಟಾಕಿಯೊಂದಿಗೆ ನಮ್ಮ 'ಇಗೋ' ಸುಟ್ಟರೆ ಹೇಗೆ?]
ಸಂಜೆ ಬಿಳುತ್ತಿರುವ ಮಳೆ ಪಟಾಕಿ 'ಹುಚ್ಚಾಟ'ಕ್ಕೆ ಕೊಂಚ ಬ್ರೇಕ್ ಹಾಕಿದ್ದರೂ ಭೂ ಚಕ್ರಗಳು ರಸ್ತೆಯಲ್ಲಿ ತಿರುಗುತ್ತಲೇ ಇವೆ. ಆನೆ ಪಟಾಕಿ ಸದ್ದಿಗೆ ಯಾವ ವಾಹನದ ಹಾರ್ನ್ ಕೇಳಲ್ಲ ಬಿಡಿ. ಸಂಜೆ ಮನೆಗೆ ತೆರಳುವರ ಪೇಚಾಟದ ಬಗ್ಗೆ ಹೇಳಲೇಬೇಕು(ವಿಶೇಷವಾಗಿ ಬೈಕ್ ಮತ್ತು ಕಾರು). ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎಂದು ಒಳ ರಸ್ತೆಗಳಿಗೆ ನುಗ್ಗಿದಿರೋ ನಿಮ್ಮ ಕತೆ ಮುಗಿದಂತೆ. ಅಪಾರ್ಟಮೆಂಟ್ ಎದುರಿಗೆ, ಮನೆ ಗಳ ಎದುರಿಗೆ, ಫುಟ್ ಪಾತ್ ಮೇಲೆ ಎಲ್ಲೆಂದರಲ್ಲಿ ರಾಕೆಟ್ ಉಡಾವಣೆ ಯಾಗುತ್ತಿರುತ್ತದೆ.
ಆನೆ ಪಟಾಕಿಗಳು, ಲಕ್ಷ್ಮೀ ಪಟಾಕಿಗಳ ಸಾಲು ಹಾವಿನಂತೆ ಬಿದ್ದುಕೊಂಡಿರುತ್ತವೆ. ಅರ್ಧ ಸುಟ್ಟ, ಇನ್ನರ್ಧ ಹಾಗೆ ಇರುವ ಪಟಾಕಿ ತ್ಯಾಜ್ಯದ ಮೇಲೆ ವಾಹನ ಚಲಾಯಿಸದಿದ್ದರೆ ಮನೆ ಸೇರುವುದು ಮಧ್ಯರಾತ್ರಿಯೇ. ಹೊಗೆ ತಿನ್ನುತ್ತ, ಕೆಮ್ಮುತ್ತ ಸಾಗುವ ಕರ್ಮ ಯಾರಿಗೆ ಬೇಕು? ಎಂದು ಒಂದೆಡೆ ನಿಂತುಕೊಳ್ಳುವಂತೆಯೂ ಇಲ್ಲ. ವರುಣದೇವ ಯಾವಾಗ ವಿಸಿಟ್ ನೀಡುತ್ತಾನೋ ಅದೂ ಗೊತ್ತಾಗಲ್ಲ.
ಮೊನ್ನೆ ಎಂದಿನಂತೆ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿದ್ದೆ. ಪಕ್ಕದಲ್ಲೆ ಆಟಂ ಬಾಂಬ್ 'ಢಂ' ಎಂದಿತ್ತು. ನನ್ನ ಕೈಲಿದ್ದ ತಟ್ಟೆ ಕೆಳಕ್ಕೆ ಬಿದ್ದಿತ್ತು. ದಿಢೀರ್ ಎದುರಾದ ಶಬ್ಧಕ್ಕೆ ಹೆದರಿ ಹೋಗಿದ್ದೆ. ಸುತ್ತಲಿದ್ದವರು, ಪಟಾಕಿ ಹಚ್ಚಿ ಕೇಕೆ ಹಾಕುತ್ತಿದ್ದವರು ನನ್ನ ನೋಡಿ ನಕ್ಕಿದ್ದು ಗೊತ್ತಾದರೂ ಏನೂ ಮಾಡಲಾಗಲಿಲ್ಲ. ಹಾಗೆಂದ ಮಾತ್ರಕ್ಕೆ ನಾನೇನು ಪಟಾಕಿಗೆ ಹೆದರುತ್ತೇನೆ ಅಥವಾ ಪಟಾಕಿ ಹಚ್ಚಿಲ್ಲ ಎಂದೇನೂ ಇಲ್ಲ. ಸಾಕಷ್ಟು ಭೂ ಚಕ್ರಗಳನ್ನು, ಲಕ್ಷ್ಮೀ ಪಟಾಕಿಯನ್ನು ಸುಟ್ಟಿದ್ದೇನೆ. ಇಲ್ಲಿ ಒಮ್ಮೆಲೆ ಎದುರಾದ ಶಬ್ಧ ನನ್ನನ್ನು ಭಯ ಬೀಳುವಂತೆ ಮಾಡಿತ್ತು.
ಇನ್ನು ಮೂರನೆ ಮಹಡಿಯಲ್ಲಿದ್ದವರ ತಾಪತ್ರಯ ಯಾರಿಗೂ ಬೇಡ. ನಾಲ್ಕು ದಿಕ್ಕಿನಿಂದ ಬರುವ ರಾಕೆಟ್ ಗಳು ಎಲ್ಲಿ ಮನೆಯನ್ನೇ ಸೀಳುತ್ತವೆಯೋ ಅನ್ನಿಸಿಬಿಡುತ್ತದೆ. ಒಮ್ಮೊಮ್ಮೆ ಬಾಂಬ್ ಹಾಕುವ ಉಗ್ರಗಾಮಿಗಳಿಗಿಂತ ಪಟಾಕಿ ಹೊಡೆಯುವ ಮಕ್ಕಳೆ ಕ್ರೂರಿಗಳಾಗಿ ಕಾಣಿಸುತ್ತಾರೆ.
ಬೆಳಗ್ಗೆಯ ವಾಕಿಂಗ್ ಗೆ ಕೆಲ ದಿನ ಗುಡ್ ಬೈ ಹೇಳೋದು ಒಳ್ಳೆಯದು. ಸಂಜೆ ಮತ್ತು ರಾತ್ರಿ ಸುಟ್ಟ ಪಟಾಕಿ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ, ಅಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತೆನೋ, ರಾಕೆಟ್ ಬಿಡಲು ತಂದ ಬಿಯರ್ ಬಾಟಲಿ ಅಲ್ಲೆಲ್ಲೋ ಚೂರು ಚೂರಾಗಿ ಬಿದ್ದಿರುತ್ತೆ, ಕಾಲಿಟ್ಟರೆ ನೀವು ಆಸ್ಪತ್ರೆ ಸೇರೋದು ಗ್ಯಾರಂಟಿ. ವಾತಾವರಣದೊಂದಿಗೆ ಸೇರಿಕೊಂಡ ಪಟಾಕಿ ಮದ್ದು ನಿಮ್ಮ ಶ್ವಾಸಕೋಶಕ್ಕೂ ತೊಂದರೆ ನೀಡಬಹುದು.
ಪೌರ
ಕಾರ್ಮಿಕರಿಗೂ
ಒವರ್
ಡ್ಯೂಟಿ
ಮಹಾನಗರದ
ಎಲ್ಲೆಡೆ
ಬಿದ್ದ
ಪಟಾಕಿ
ತ್ಯಾಜ್ಯವನ್ನು
ಗುಡಿಸಿ
ಮುಗಿಸುವದರೊಳಗೆ
ಪೌರ
ಕಾರ್ಮಿಕರು
ಹೈರಾಣವಾಗಿ
ಹೋಗಿರುತ್ತಾರೆ.
ಒಂದೆರಡು
ರಸ್ತೆಯಾಗಿದ್ದರೆ
ಒಕೆ
ಎನ್ನಬಹುದಿತ್ತೆನೋ.
ಆದರೆ
ಎಲ್ಲಾ
ರಸ್ತೆಗಳು,
ಗಲ್ಲಿಗಳ
ಪರಿಸ್ಥಿತಿಯೂ
ಅಷ್ಟೇ.
ಮಳೆ
ಬಂದಿದ್ದರೆ
ಮತ್ತಷ್ಟು
ಎಡವಟ್ಟಾಗಿರುತ್ತೆ.
ಸಂಜೆಯಿಂದ ರಾತ್ರಿವರೆಗೆ ಪಟಾಕಿ ಸದ್ದು ಕೇಳಿ ಕೇಳಿ ಸುಸ್ತಾಗಿ ಎಲ್ಲೋ ಅಡಗಿ ಕುಳಿತುಕೊಂಡಿದ್ದ ಬೀದಿ ನಾಯಿಗಳು ಮಧ್ಯರಾತ್ರಿಯಾಗುತ್ತಲೇ ತಮ್ಮ ಬಾಲ ಬಿಚ್ಚುತ್ತವೆ. ಮುಂಜಾನೆಯೇ ವಾಹನ ಚಲಾಯಿಸುವವರ ಮೇಲೆ ಎಗರುವುದು ಉಂಟು.
ಪಟಾಕಿ ಕೇವಲ ಕಣ್ಣಿನ ದೃಷ್ಟಿ ಬಲಿ ತೆಗೆದೊಕೊಳ್ಳೋದು ಮಾತ್ರವಲ್ಲ. ಇಂಥ ಸೈಡ್ ಎಫೆಕ್ಟ್ ಗಳನ್ನು ಮಾಡುತ್ತದೆ. ಜನರಲ್ಲಿ ಜಾಗೃತಿ ಮೂಡಿದೆ, ಪಟಾಕಿ ಕಡಿಮೆಯಾಗಿದೆ ಎಲ್ಲಾ ಸರಿ, ನಾವು ಪಟಾಕಿ ಹಚ್ಚಲ್ಲ ಅದೂ ಸರಿ. ಆದರೆ ಎಲ್ಲಿಂದಲೋ ತೂರಿ ಬರುವ ರಾಕೆಟ್ ಗಳನ್ನು ತಡೆಯುವವರು ಯಾರು?