ಎಐಎಡಿಎಂಕೆ ಚಿಹ್ನೆಗಾಗಿ ಲಂಚ, ಪರಮೇಶ್ವರ್ ಆಪ್ತ ಪ್ರಕಾಶ್ ಗೆ ಸಮನ್ಸ್
ಎಐಎಡಿಎಂಕೆ ಪಕ್ಷಕ್ಕೆ ಎರಡೆಲೆ ಚಿಹ್ನೆ ಕೊಡಿಸುವುದಾಗಿ ಹಣ ಪಡೆದ ಆರೋಪದ ಮೇಲೆ ಗೃಹ ಸಚಿವ ಜಿ.ಪರಮೇಶ್ವರ್ ಆಪ್ತ, ಎನ್ನಾರೈ ವೇದಿಕೆಯ ಉಪಾಧ್ಯಕ್ಷ ವಿಸಿ ಪ್ರಕಾಶ್ ಗೆ ಸಮನ್ಸ್ ನೀಡಲಾಗಿದೆ.
ಬೆಂಗಳೂರು, ಮೇ 16: ಎಐಎಡಿಎಂಕೆ ಪಕ್ಷಕ್ಕೆ ಎರಡೆಲೆ ಚಿಹ್ನೆ ಕೊಡಿಸುವುದಾಗಿ ಹಣ ಪಡೆದ ಆರೋಪದ ಮೇಲೆ ಎನ್ನಾರೈ ವೇದಿಕೆಯ ಉಪಾಧ್ಯಕ್ಷ ವಿಸಿ ಪ್ರಕಾಶ್ ಗೆ ಸಮನ್ಸ್ ನೀಡಲಾಗಿದೆ.
ಕರ್ನಾಟಕ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಎಐಎಡಿಎಂಕೆಯ ಟಿವಿವಿ ದಿನಕರನ್ ಅವರಿಗೆ ಪ್ರಕಾಶ್ ಅವರನ್ನು ದೆಹಲಿಯ ಕ್ರೈಂ ವಿಭಾಗದ ಪೊಲೀಸರು ಒಂದು ಸುತ್ತಿನ ವಿಚಾರಣೆಗೊಳಪಡಿಸಿರುವ ಮಾಹಿತಿಯೂ ಹೊರ ಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿ ಪರಮೇಶ್ವರ ಅವರು, ನನಗೆ ಬಹಳಷ್ಟು ಮಂದಿ ಆಪ್ತರಿದ್ದಾರೆ. ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದಿದ್ದಾರೆ.
ಬೆಂಗಳೂರು ನಿವಾಸಿಯಾದ ವಿ.ಸಿ.ಪ್ರಕಾಶ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಎನ್ಆರ್ಐ ಫೋರಂ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು. ತಮಿಳುನಾಡಿನ ಎಐಎಡಿಎಂಕೆ ಪಕ್ಷಕ್ಕೆ ಎರಡೆಲೆ ಚಿಹ್ನೆ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಪ್ರಕಾಶ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಯಾಗಿತ್ತು.
ಟಿವಿವಿ ದಿನಕರನ್, ಸುಕೇಶ್ ಚಂದ್ರಶೇಖರನ್ ಹಾಗೂ ಮಲ್ಲಿಕಾರ್ಜುನ ಅವರ ವಿಚಾರಣೆ ವೇಳೆ ವಿಸಿ ಪ್ರಕಾಶ್ ಹೆಸರು ಕೇಳಿ ಬಂದಿತ್ತು. ಟಿವಿವಿ ದಿನಕರನ್ ಹಾಗೂ ಸುಕೇಶ್ ಚಂದ್ರಶೇಖರನ್ ನಡುವಿನ ಸಂಭಾಷಣೆಯ ವಾಯ್ಸ್ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲು ತನಿಖಾ ತಂಡ ಮುಂದಾಗಿದೆ. ಎನ್ನಾರೈಗಳ ಪೈಕಿ ಜನಪ್ರಿಯತೆ ಹಾಗೂ ಅಧಿಕಾರ ಪಡೆದುಕೊಂಡು ಪ್ರಭಾವಿ ಎನಿಸಿರುವ ಪ್ರಕಾಶ್ ಅವರು ಈ ಜಾಲದಲ್ಲಿ ಮಹತ್ವದ ಪಾತ್ರವಹಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.