'ಹೆದ್ದಾರಿಗಳಲ್ಲಿ ಪ್ರತಿ 40 ಕಿ.ಮೀ.ಗೊಂದು ಗಸ್ತು ವಾಹನ, ಆಂಬ್ಯುಲೆನ್ಸ್'
ಬೆಂಗಳೂರು, ಮಾರ್ಚ್. 21 : ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ ಟೋಲ್ ಗೇಟ್ ಳಿಂದ ಸುಮಾರು 40 ಕಿ.ಮೀ ವ್ಯಾಪ್ತಿಗೆ ಒಂದರಂತೆ ಗಸ್ತು ವಾಹನ, ಅಂಬ್ಯುಲೆನ್ಸ್ ಮತ್ತು ಕ್ರೇನ್ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ತಿನ ಕಲಾಪದಲ್ಲಿ ಬಸವನಗೌಡ ಆರ್. ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಅನುಪಸ್ಥಿತಿಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ನಿಯಂತ್ರಣಕ್ಕಾಗಿ ಹೈವೇ ಗಸ್ತು ವಾಹನಗಳನ್ನು ಹಗಲು-ರಾತ್ರಿ ಕರ್ತವ್ಯಕ್ಕೆ ನೇಮಿಸಲಾಗಿದೆ ಎಂದರು.
ಹೆಚ್ಚುವರಿಯಾಗಿ ಆಯಾ ಪೊಲೀಸ್ ಕಂಟ್ರೋಲ್ ರೂಂ ವಾಹನಗಳನ್ನು ಸಹ ಗಸ್ತಿಗಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಹಾಗೂ ಗಸ್ತು ವಾಹನಗಳಿಗೆ ಜಿ.ಪಿ.ಎಸ್. ಟ್ರ್ಯಾಕಿಂಗ್ ಅಳವಡಿಸಲಾಗುವುದು.
ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳಲ್ಲಿ ಸಾವನ್ನಪ್ಪುವ ಪ್ರಾಣಿಗಳ ಕಳೇಬರವನ್ನು ತೆರವುಗೊಳಿಸಲು ಸಂಬಂಧಪಟ್ಟ ಹೆದ್ದಾರಿ ನಿರ್ವಹಣೆ ಗುತ್ತಿಗೆದಾರರ ಜವಾಬ್ದಾರಿಯಾಗಿದೆ ಎಂದು ಸಚಿವರು ಪರಿಷತ್ತಿಗೆ ತಿಳಿಸಿದರು.
ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಸ್ತು ವಾಹನಗಳನ್ನು ಹಾಗೂ ಸಿಬ್ಬಂದಿಗಳನ್ನು ನೇಮಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.