ಪಂಚನಾಮೆ ಬಂದ ನಂತರ ದಾಳಿಯ ವಿವರ ನೀಡುವೆ: ಡಿಕೆಶಿ ಮಾತು
ಐಟಿ ದಾಳಿಯ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್. ಸದ್ಯಕ್ಕೆ ಏನೂ ಮಾತನಾಡುವುದಿಲ್ಲ, ದಾಳಿಯ ಬಗೆಗಿನ ದಾಖಲೆಗಳು ಕೈ ಸೇರಿದ ನಂತರ ಮಾತನಾಡುವೆ ಎಂದ ಶಿವಕುಮಾರ್.
ಬೆಂಗಳೂರು, ಆಗಸ್ಟ್ 5: ''ಸದ್ಯಕ್ಕೆ ನಾನು ಏನೂ ಮಾತನಾಡುವುದಿಲ್ಲ. ಐಟಿ ಇಲಾಖೆಯಿಂದ ಪಂಚನಾಮೆ ಬಂದ ನಂತರ ಮಾತನಾಡುವೆ. ಅದರಲ್ಲೂ ವಿಶೇಷವಾಗಿ ದೆಹಲಿ ನಿವಾಸದಲ್ಲಿ ಸಿಕ್ಕಿದೆ ಎಂದು ಹೇಳಲಾಗಿವ ದಾಖಲೆಗಳು, ಹಣದ ಬಗ್ಗೆ ಆನಂತರ ಮಾತನಾಡುವೆ'' - ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ ಮಾತಿದು.
ಮ್ಮ ಹಾಗೂ ಸಂಬಂಧಿಗಳ ನಿವಾಸಗಳ ಮೇಲೆ ಐಟಿ ದಾಳಿ ನಡೆದ ನಂತರ, ಇದೇ ಮೊದಲ ಬಾರಿಗೆ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಕಾನೂನಿನ ಚೌಕಟ್ಟಿನಿಲ್ಲಿ ನಿಂತೇ ಮಾತನಾಡಿದರು.
ಐಟಿ ದಾಳಿ : 4ನೇ ದಿನವೂ ದಾಖಲೆಗಳ ಪರಿಶೀಲನೆ
ಮಾತು ಆರಂಭಿಸುತ್ತಲೇ ಮಾಧ್ಯಮಗಳಿಗೆ ಧನ್ಯವಾದ ಹೇಳಿದ ಶಿವಕುಮಾರ್, ಸದ್ಯಕ್ಕೆ ತಾವು ಮಾತನಾಡುವ ಪರಿಸ್ಥಿತಿಯಲ್ಲಿಲ್ಲ ಎಂದು ಪದೇ ಪದೇ ಹೇಳಿದರು. ಐಟಿ ಇಲಾಖೆಯಿಂದ ದಾಖಲೆಗಳು ಸಿಕ್ಕ ನಂತರ, ನಾನೇ ಖುದ್ದು ಸುದ್ದಿಗೋಷ್ಠಿಯನ್ನು ಕರೆದು ನಿಮ್ಮೊಂದಿಗೆ (ಮಾಧ್ಯಮಗಳೊಂದಿಗೆ) ಹಂಚಿಕೊಳ್ಳುತ್ತೇನೆ ಎಂದರು. ತಮ್ಮ ನಿವಾಸದಲ್ಲಿ ತನಿಖೆ ಮುಕ್ತಾಯವಾಗಿರುವುದನ್ನೂ ಸ್ಪಷ್ಟಪಡಿಸಿದರು.
ಇದೇ ವೇಳೆ, ''ನನ್ನ ಕಷ್ಟಕಾಲದಲ್ಲಿ ನನ್ನ ಬಗ್ಗೆ ಸಹಾನುಭೂತಿ ತೋರಿದ, ನನ್ನ ಬಗ್ಗೆ ಕಳಕಳಿಯ ಮಾತುಗಳನ್ನಾಡಿದ ಪಕ್ಷದ ಮುಖಂಡರು, ಕಾರ್ಯಕರ್ತರು, ದೇಶದ ಎಲ್ಲಾ ರಾಜಕೀಯ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ'' ಎಂದು ತಿಳಿಸಿದರು. ಇದರ ಜತೆಗೆ, ಮಾಧ್ಯಮದವರಿಗೂ, ಪೊಲೀಸ್ ಇಲಾಖೆಗೂ ಧನ್ಯವಾದ ಅರ್ಪಿಸಿದರು.
ಶನಿವಾರದಂದು ತಮ್ಮ ಕೆಲಸ ಕಾರ್ಯಗಳ ಸಂಕ್ಷಿಪ್ತ ವಿವರಣೆ ನೀಡಿದ ಅವರು, ''ಸದ್ಯಕ್ಕೆ ನಾನು ನನ್ನ ಆರಾಧ್ಯ ದೇವರ ಸನ್ನಿಧಾನಕ್ಕೆ ತೆರಳುತ್ತಿದ್ದೇನೆ. ಇದಾದ ನಂತರ, ಈಗಲ್ಟನ್ ರೆಸಾರ್ಟ್ ನಲ್ಲಿ ನನಗಾಗಿ ಕಾಯುತ್ತಿರುವ ಗುಜರಾತ್ ಶಾಸಕರನ್ನು ಮಾತನಾಡಿಸಲು ಹೋಗುತ್ತೇನೆ'' ಎಂದು ತಿಳಿಸಿದರು.