ಬಿಬಿಎಂಪಿ ವಿಭಜನೆ : ಸೋಮವಾರದ 6 ಪ್ರಮುಖ ಬೆಳವಣಿಗೆಗಳು
ಬೆಂಗಳೂರು, ಏ. 21 : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಬೇಕು ಎಂದು ಸರ್ಕಾರ ಪಟ್ಟು ಹಿಡಿದಿದೆ. ಸೋಮವಾರ ಇದಕ್ಕಾಗಿ ಸರ್ಕಾರ ವಿಶೇಷ ಅಧಿವೇಶನವನ್ನು ಕರೆದಿತ್ತು. ಅತ್ತ ಹೈಕೋರ್ಟ್ ಪಾಲಿಕೆ ಚುನಾವಣಾ ದಿನಾಂಕ ಘೋಷಣೆಗೆ ತಡೆಯಾಜ್ಞೆ ನೀಡಿದೆ.
ಸೋಮವಾರ ನಡೆದ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ವನ್ನು ಮಂಡಿಸಿತ್ತು. ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಂಡಿದೆ. ಆದರೆ, ಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಗೊಂಡಿಲ್ಲ.[ಸೋಮವಾರದ ಕಲಾಪ ಮುಖ್ಯಾಂಶಗಳು]
ಏ.23ರಂದು ವಿಧಾನಪರಿಷತ್ ಕಲಾಪ ನಡೆಯಲಿದ್ದು ಅಂದು ಒಪ್ಪಿಗೆ ಸಿಗುವುದೇ? ಎಂದು ಕಾದು ನೋಡಬೇಕು. ಪರಿಷತ್ತಿನಲ್ಲಿ ಒಪ್ಪಿಗೆ ಸಿಕ್ಕರೂ ವಿಧೇಯಕಕ್ಕೆ ಅಂತಿಮ ಸಹಿಯನ್ನು ರಾಜ್ಯಪಾಲರು ಹಾಕಬೇಕು. ಆದರೆ, ಅವರು ರಜೆಯ ಮೇಲೆ ತೆರಳಿದ್ದು, ಏ.27ರಂದು ವಾಪಸ್ ಆಗಲಿದ್ದಾರೆ. [ಬಿಬಿಎಂಪಿ ವಿಭಜನೆ ಹೇಗೆ?, ಇಲ್ಲಿದೆ ಮಾಹಿತಿ]
ಬಿಬಿಎಂಪಿ ಚುನಾವಣೆ ದಿನಾಂಕವನ್ನು ಘೋವಣೆ ಮಾಡದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಈ ಅರ್ಜಿಯ ವಿಚಾರಣೆ ಏ.22ರಂದು ನಡೆಯಲಿದ್ದು ಅಂದು ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ. ಸೋಮವಾರ ಏನೇನಾಯ್ತು ಇಲ್ಲಿದೆ ಮಾಹಿತಿ
ವಿಧಾನಸಭೆಯಲ್ಲಿ ವಿಧೇಯಕ ಮಂಡನೆ
ಸೋಮವಾರ ನಡೆದ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ವನ್ನು ಸದನಲ್ಲಿ ಮಂಡಿಸಿದರು.
ಪ್ರತಿಪಕ್ಷಗಳ ವಿರೋಧದ ನಡುವೆ ಅಂಗೀಕಾರ
ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ ಸಂಜೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡು ಅದನ್ನು ವಿಧಾನಪರಿಷತ್ತಿನಗೆ ಕಳುಹಿಸಿಕೊಟ್ಟಿದೆ.
ವಿಧಾನಪರಿಷತ್ ಕಲಾಪ ಮುಂದೂಡಿಕೆ
ವಿಧಾನಪರಿಷತ್ತಿನಲ್ಲಿ ವಿಧೇಯಕದ ಕುರಿತು ಚರ್ಚೆ ಆರಂಭಿಸಿದ ವಿ. ಸೋಮಣ್ಣ ಅವರು ಪಾಲಿಕೆ ವಿಭಜನೆ ವಿರುದ್ಧ ಒಂದು ಗಂಟೆ ಮಾತನಾಡಿದರು. ಉಳಿದ ಸದಸ್ಯರಿಗೂ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಸದಸ್ಯರು ಮುಂದಿಟ್ಟಾಗ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಕಲಾಪವನ್ನು ಏ.23ರ ಗುರುವಾರಕ್ಕೆ ಮುಂದೂಡಿದರು.
ಏ.23ರಂದು ವಿಶೇಷ ಅಧಿವೇಶನ
ಒಂದು ವೇಳೆ ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರವಾಗದಿದ್ದರೆ ಪುನಃ ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ಸಿದ್ಧವಾಗಿತ್ತು. ಇದಕ್ಕಾಗಿ ವಿಧಾನಸಭೆ ಕಲಾಪವನ್ನು ಕೆಲಕಾಲ ಮುಂದೂಡಲಾಗಿತ್ತು. ಆದರೆ, ಪರಿಷತ್ ಕಲಾಪ ಗುರುವಾರಕ್ಕೆ ಮುಂದೂಡಿದ ನಂತರ ವಿಧಾನಸಭೆ ಕಲಾಪವನ್ನು ಏ.23ಕ್ಕೆ ಮುಂದೂಡಲಾಯಿತು.
ಚುನಾವಣೆ ಘೋಷಣೆ ಮಧ್ಯಂತರ ತಡೆಯಾಜ್ಞೆ
ಮೇ 30ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ್ದ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿಗಳ ವಿಭಾಗೀಯ ಪೀಠ ಚುನಾವಣಾ ದಿನಾಂಕ ಘೋಷಣೆ ಮಾಡದಂತೆ ಏ.22ರವರೆಗೆ ತಡೆಯಾಜ್ಞೆ ನೀಡಿದೆ.
ರಜೆ ಮೇಲೆ ತೆರಳಿದ ರಾಜ್ಯಪಾಲರು
ಒಂದು ವೇಳೆ ವಿಧಾನಪರಿಷತ್ತಿನಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದರೂ ಸರ್ಕಾರ ರಾಜ್ಯಪಾಲರ ಸಹಿಗಾಗಿ ಏ.287ರ ವರೆಗೆ ಕಾಯಬೇಕು. ರಾಜ್ಯಪಾಲ ವಜುಭಾಯಿ ವಾಲಾ ಅವರು ರಜೆಯ ಮೇಲೆ ತೆರಳಿದ್ದು ಏ.27ರಂದು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. ಏ.22ರಂದು ಹೈಕೋರ್ಟ್ ಚುನಾವಣಾ ದಿನಾಂಕ ಘೋಷಿಸಲು ಒಪ್ಪಿಗೆ ನೀಡಿದರೆ ಸರ್ಕಾರಕ್ಕೆ ಹಿನ್ನಡೆ ಉಂಟಾಗಲಿದೆ.