'ಯಶವಂತಪುರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ರೈಲು'
ಬೆಂಗಳೂರು, ಆಗಸ್ಟ್ 1 : ಯಶವಂತಪುರದಿಂದ ಕೆಂಪೇಗೌಡ ವಿಮಾನ ನಿಲ್ದಾಣದ ವರೆಗೆ ನೇರ ರೈಲು ಸಂಪರ್ಕ ಕಲ್ಪಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಇಂದು (ಮಂಗಳವಾರ) ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಮನಗರದಿಂದ ಕೆಂಗೇರಿ, ತುಮಕೂರಿನಿಂದ ಯಶವಂತಪುರ, ವೈಟ್ ಫಿಲ್ಟ್ ನಿಂದ ಬೈಯಪ್ಪನಹಳ್ಳಿದ ವರೆಗೆ ಸಬ್ ಅರ್ಬನ್ ರೈಲು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಇದರ ಜತೆಗೆ ಮೆಟ್ರೋ 2ಎ ಯೋಜನೆ ಡೈರಿ ವೃತ್ತದಿಂದ ಕೆ.ಆರ್.ಪುರದವರೆಗೆ ವಿಸ್ತರಿಸಲು ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳುತ್ತೇವೆ.
ನಾಗವಾರದಿಂದ ವಿಮಾನ ನಿಲ್ದಾಣದವರೆಗೆ ಮೆಟ್ರೋ ವಿಸ್ತರಣೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಯಶವಂತಪುರದಿಂದ ಯಲಹಂಕದವರೆಗೂ ಹಳಿ ಜೋಡಣೆ ಅಸಾಧ್ಯ.
ಹಾಗಾಗಿ ಅಲ್ಲಿಯವರೆಗೆ ಎತ್ತರಿಸಿದ ಎಲಿವೇಟೆಡ್ ಹಳಿ ಜೋಡಣೆ ಮಾಡಿ ಅಲ್ಲಿಗೆ ಸಂಪರ್ಕ ಕಲ್ಪಿಸಲು 1600 ಕೋಟಿ ಹಣ ಮೀಸಲಿರಿಸಿದ್ದು, ಸಾಧಕ-ಬಾಧಕಗಳ ನಂತರ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.