ಐಟಿ ಅಧಿಕಾರಿಗಳ ವಿರುದ್ಧ ಎಂಎಲ್ ಸಿ ಗೋವಿಂದರಾಜ್ ದೂರು ದಾಖಲು
ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಐಟಿ ದಾಳಿ ನಡೆದ ಒಂದು ವರ್ಷದ ನಂತರ ದೂರು ದಾಖಲಾಗಿದ್ದು, ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ
ಬೆಂಗಳೂರು, ಮಾರ್ಚ್ 3: ಬೆಂಗಳೂರಿನ ತಮ್ಮ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆದ ಒಂದು ವರ್ಷದ ಮೇಲೆ ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಐಟಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಫೆಬ್ರವರಿ 28ರಂದು ದೂರು ದಾಖಲಿಸಿರುವ ಗೋವಿಂದರಾಜ್, ಆದಾಯ ಇಲಾಖೆ ಅಧಿಕಾರಿಗಳು ತನ್ನದಲ್ಲದ ಡೈರಿಯೊಂದನ್ನು ತನ್ನದು ಎಂಬಂತೆ ಬಿಂಬಿಸಿದ್ದಾರೆ. ಜತೆಗೆ ಆ ಡೈರಿಯಲ್ಲಿ ಮಾಹಿತಿಗಳು ವಂಚನೆಯಿಂದ ಕೂಡಿವೆ. ಮತ್ತು ಅದರ ರಹಸ್ಯ ಕಾಪಾಡುವ ಬದಲು ಮಾಹಿತಿ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.[ಡೈರಿ ಬಗ್ಗೆ ಗೊತ್ತಿದ್ದರೂ ಲೋಕಾಯುಕ್ತ ಸಂಸ್ಥೆ ಸುಮ್ಮನಿದೆ ಏಕೆ?]
ಕಾಂಗ್ರೆಸ್ ಎಂಎಲ್ ಸಿ ಗೋವಿಂದರಾಜ್ ಅವರಿಗೆ ಸೇರಿದ ಡೈರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ವಿವರಗಳಿವೆ ಎಂದು ಮಾಹಿತಿ ಬಹಿರಂಗವಾದ ನಂತರವಷ್ಟೇ ದೂರು ದಾಖಲಿಸಿದ್ದಾರೆ. ಆ ಡೈರಿಯಾಗಲಿ ಅದಲ್ಲಿನ ಹಸ್ತಾಕ್ಷರವಾಗಲಿ ತನ್ನದಲ್ಲ ಎಂದು ಗೋವಿಂದರಾಜ್ ಅವರೇನೋ ಸಮರ್ಥನೆ ನೀಡಿದ್ದಾರೆ.
ಅದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗೋವಿಂದರಾಜ್ ಅವರ ಮನೆ ಮೇಲೆ ದಾಳಿ ನಡೆಸಿದ ಒಂದು ವರ್ಷದ ನಂತರ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಗೋವಾದಲ್ಲಿ ತನ್ನನ್ನು ತಪ್ಪಾದ ರೀತಿಯಲ್ಲಿ ವಶಕ್ಕೆ ಪಡೆದರು. ತಪ್ಪು ಸಾಕ್ಷ್ಯಗಳನ್ನು ನನ್ನ ವಿರುದ್ಧ ಸೃಷ್ಟಿಸಿ, ಅದರ ಮಾಹಿತಿಯನ್ನು ಎದುರಾಳಿಗಳಿಗೆ ಬೇಕೆಂತಲೇ ನೀಡಿದ್ದಾರೆ ಎಂದು ಗೋವಿಂದರಾಜ್ ದೂರಿದ್ದಾರೆ.[ಕಾಂಗ್ರೆಸ್ ಡೈರಿ ಬೆಂಕಿಗೆ ದಿನೇಶ್ ಅಮಿನ್ ಮಟ್ಟು ತುಪ್ಪ]
ಒಂದು ವರ್ಷದಿಂದ ಗೋವಿಂದರಾಜ್ ಏಕೆ ದೂರು ನೀಡಿಲ್ಲ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆ. ಅಂದಹಾಗೆ, ಈ ಬಗ್ಗೆ ಇಂದಿರಾನಗರ್ ಪೊಲೀಸ್ ಠಾಣೆಯಲ್ಲಿ 166(a), 193, 182, 341, 109, 406, 218, 409, 457, 120B, 34, 380, 472 ಮತ್ತು 471ರ ಅಡಿಯಲ್ಲಿ ಎಫ್ ಐಆರ್ ಆಗಿದೆ.