ಇದು ದೇವೇಗೌಡ ಪೆಟ್ರೋಲ್ ಬಂಕ್ ಫ್ಲೈ ಓವರ್ ಕಥೆ...ವ್ಯಥೆ
ಬೆಂಗಳೂರು, ಜೂ.24 : ಇಲ್ಲೇನು ಮೆಟ್ರೋ ಬರುತ್ತಾ?, ಫ್ಲೈ ಓವರ್ ಕಟ್ತಾರಾ?, ಒಂದು ವರ್ಷದಿಂದಿ ನೋಡ್ತಿದ್ದೀನಿ ಮುಗೀತಾನೆ ಇಲ್ಲ. ಮೊದ್ಲೆ ಇಲ್ಲಿ ಟ್ರಾಫಿಕ್ ಜೊತೆಗೆ ಇದು ಬೇರೆ. ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬಿಎಂಟಿಸಿ ಬಸ್ಸಿನಲ್ಲಿ ಕೇಳಿಬರುವ ಮಾತುಗಳಿವು.
ಮೈಸೂರು ರಿಂಗ್ ರಸ್ತೆಯಲ್ಲಿರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಸುಮಾರು 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್ ಕಾಮಗಾರಿ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. 2014ರಲ್ಲಿ ಆರಂಭವಾದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಂತಿಮ ಗಡುವು ಮುಗಿಯಲು ಮೂರು ತಿಂಗಳು ಮಾತ್ರ ಬಾಕಿ ಇದೆ. [ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆಗಳೇನು?]
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂ. ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಕಾಮಗಾರಿಯ ಗುತ್ತಿಗೆ ನೀಡಿದ್ದು, 2014ರ ಮಾರ್ಚ್ನಲ್ಲಿ ಕಾಮಗಾರಿ ಆರಂಭವಾಗಿದೆ. ಟೆಂಡರ್ನಲ್ಲಿ ನೀಡಿರುವ ಷರತ್ತಿನ ಅನ್ವಯ 18 ತಿಂಗಳಿನಲ್ಲಿ ಕಾಮಗಾರಿ ಮುಗಿಯಬೇಕು. ಒಂದು ವರ್ಷ ಕಳೆದರೂ ಫ್ಲೈ ಓವರ್ ಇರಲಿ, ಒಂದು ಕಂಬದ ನಿರ್ಮಾಣ ಸಹ ಪೂರ್ಣಗೊಂಡಿಲ್ಲ. [ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!]
ಈ ಫ್ಲೈ ಓವರ್ ಪೂರ್ಣಗೊಂಡರೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ವಾಹನ ಸಂಚಾರ ದಟ್ಟಣೆ ಶೇ 65ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕದಿರೇನಹಳ್ಳಿ ಮೂಲಕ ರಿಂಗ್ ರಸ್ತೆಯಲ್ಲಿ ಬರುವ ವಾಹನಗಳು ಫ್ಲೈ ಓವರ್ ಮೇಲೆ ಸಾಗಲಿವೆ, ಪದ್ಮನಾಭನಗರ, ಉತ್ತರಹಳ್ಳಿ ಕಡೆಗೆ ಹೋಗುವ ವಾಹನಗಳು ಕೆಳಗೆ ಸಂಚರಿಸಲಿವೆ.
ಫ್ಲೈ ಓವರ್ ಅಲ್ಲ, ಪಿಲ್ಲರ್ ಸಹ ಆಗಿಲ್ಲ
ಮೈಸೂರು ರಿಂಗ್ ರಸ್ತೆಯಲ್ಲಿರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್ ಕಾಮಗಾರಿ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. 2014ರಲ್ಲಿ ಆರಂಭವಾದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಯ ಅಂತಿಮ ಗಡುವು ಮುಗಿಯಲು ಮೂರು ತಿಂಗಳು ಮಾತ್ರ ಬಾಕಿ ಇದೆ. ಫ್ಲೈ ಓವರ್ ಅಲ್ಲ, ಒಂದು ಪಿಲ್ಲರ್ ನಿರ್ಮಾಣವೂ ಪೂರ್ಣಗೊಂಡಿಲ್ಲ.
ಜಲಮಂಡಳಿ, ಬೆಸ್ಕಾಂ ಕೆಲಸ ಮುಗಿಸಿವೆ
2014ರ ಮಾರ್ಚ್ನಲ್ಲಿ ಎಂ. ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಮರಗಳನ್ನು ಕಡಿದು ಕಾಮಗಾರಿ ಆರಂಭಿಸಿತು. ಕಾಮಗಾರಿಗೆ ಅಡ್ಡವಾಗಿದ್ದ ಜಲಮಂಡಳಿ ಹಾಗೂ ಬೆಸ್ಕಾಂ ಮಾರ್ಗಗಳ ಸ್ಥಳಾಂತರವೂ ಪೂರ್ಣಗೊಂಡಿದೆ. ಆದರೆ, ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.
ವಾಹನ ಸಂಚಾರ ದಟ್ಟಣೆ ಶೇ 65ರಷ್ಟು ಕಡಿಮೆ
ಈ ಫ್ಲೈ ಓವರ್ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಪೆಟ್ರೋಲ್ ಬಂಕ್ ಬಳಿ ಶೇ 65ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪದ್ಮನಾಭನಗರ ಮತ್ತು ಉತ್ತರಹಳ್ಳಿ ಸುತ್ತಲಿನ ಪ್ರದೇಶಗಳಿಗೆ ತೆರಳುವ ವಾಹನಗಳು ಫ್ಲೈ ಓವರ್ ಕೆಳಗೆ ಸಂಚರಿಸಲಿವೆ. ಕಾಮಾಕ್ಯ, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ನಾಯಂಡಳ್ಳಿ, ವಿಜಯನಗರ ಕಡೆ ಸಾಗುವ ವಾಹನಗಳು ಫ್ಲೈ ಓವರ್ ಮೇಲೆ ಸಂಚರಿಸಲಿವೆ.
ಕಾಮಗಾರಿಗೆ ಅಡ್ಡಿಯಾಗಿರುವುದೇನು?
ಪುಟ್ಟ ನಿವೇಶನದ ಸ್ವಾಧೀನ ವಿವಾದ, ಒಳಚರಂಡಿ ನಿರ್ಮಾಣ, ವಿದ್ಯುತ್ ಮಾರ್ಗ ಸ್ಥಳಾಂತರ, ಅಕಾಲಿಕ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಂತಿಮ ಗಡುವು ಮುಗಿದ ಬಳಿಕ 4ರಿಂದ 6 ತಿಂಗಳಿನಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಗಳು ಭರವಸೆ ಕೊಡುತ್ತಾರೆ.
ಗಂಟೆಗೆ 10,237 ವಾಹನ ಸಂಚಾರ
ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬೆಳಗ್ಗೆ ಗಂಟೆಗೆ ಸರಾಸರಿ 10,237 ವಾಹನಗಳು, ಸಂಜೆ 6 ರಿಂದ 7ರ ಅವಧಿಯಲ್ಲಿ ಸರಾಸರಿ 9,099 ವಾಹನಗಳು ಸಂಚಾರ ನಡೆಸುತ್ತವೆ ಎಂದು ಅಧ್ಯಯನ ವರದಿ ಹೇಳುತ್ತದೆ. ಈ ಫ್ಲೈ ಓವರ್ ನಿರ್ಮಾಣವಾದರೆ, ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಸವಾರರು ನಿಟ್ಟುಸಿರು ಬಿಡಬಹುದು.
ಫ್ಲೈ ಓವರ್ ನಿರ್ಮಾಣದಲ್ಲೂ ರಾಜಕೀಯ
ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಫ್ಲೈ ಓವರ್ ನಿರ್ಮಾಣ ಮಾಡುವುದು 5 ವರ್ಷಗಳ ಹಿಂದಿನ ಆಲೋಚನೆ. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ, ರಾಜಕೀಯ ಕಾರಣಗಳಿಂದಾಗಿ 2014ರ ಮಾರ್ಚ್ನಲ್ಲಿ ಕಾಮಗಾರಿ ಆರಂಭವಾಯಿತು.
ಭೂ ಸ್ವಾಧೀನ ಪೂರ್ಣ
ಫ್ಲೈ ಓವರ್ ನಿರ್ಮಾಣಕ್ಕಾಗಿ ಒಟ್ಟಾರೆ 2,000 ಚದರ ಮೀಟರ್ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಎರಡೂ ಕಡೆ ರಾಜಾ ಕಾಲುವೆ ಇದ್ದು, ಅದರ ನಿರ್ಮಾಣ ಕಾರ್ಯ ಸದ್ಯ ನಡೆಯುತ್ತಿದೆ. ಪೆಟ್ರೋಲ್ ಬಂಕ್ ಬಳಿ ಇದ್ದ ಬಸ್ ನಿಲ್ದಾಣ ಸ್ಥಳಾಂತರ ಮಾಡಲಾಗಿದೆ, ದೊಡ್ಡ-ಡೊಡ್ಡ ಮರಗಳನ್ನು ಕತ್ತರಿಸಲಾಗಿದೆ.
ಫಿಲ್ಲರ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ
ಎರಡೂ ಕಡೆ ಫಿಲ್ಲರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ, ಯಾವುದೇ ಫಿಲ್ಲರ್ ಸಹ ಪೂರ್ಣಗೊಂಡಿಲ್ಲ. ರಾಜಾ ಕಾಲುವೆ ಕಾಮಗಾರಿ ಮುಗಿದರೆ, ಫಿಲ್ಲರ್ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಳ್ಳಲಿದೆ ಎನ್ನುತ್ತಾರೆ ಅಧಿಕಾರಿಗಳು.
ಸಿದ್ದರಾಮಯ್ಯ ಭೇಟಿ ನೀಡಿದ್ದರು
ಮೇ ತಿಂಗಳಿನಲ್ಲಿ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸುತ್ತಾ ಪೆಟ್ರೋಲ್ ಬಂಕ್ ಬಳಿ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಮಗಾರಿಯನ್ನು ಚುರುಕುಗೊಳಿಸಿ ಎಂದು ಸೂಚನೆ ನೀಡಿದ್ದರು.
ಡಿಸೆಂಬರ್ನಲ್ಲಿ ಪೂರ್ಣಗೊಳ್ಳುವ ಭರವಸೆ
ಬಿಬಿಎಂಪಿ ಯಾವ ಯೋಜನೆಗಳೂ ಕಾಲಮಿತಿಯಲ್ಲಿ ಮುಗಿಯುವುದಿಲ್ಲ ಎಂದು ಜನರು ಹೇಳುವ ಮಾತು ಈ ಕಾಮಗಾರಿಗೂ ಅನ್ವಯವಾಗುತ್ತದೆ. 2015ರ ಡಿಸೆಂಬರ್ ಅಂತ್ಯದ ವೇಳೆಗೆ ಫ್ಲೈ ಓವರ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.