ಮೈತ್ರಿ ಕಸರತ್ತು, ಸೆ.2ರಂದು ದೇವೇಗೌಡ ನೇತೃತ್ವದಲ್ಲಿ ಸಭೆ
ಬೆಂಗಳೂರು, ಆ.30 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಾಗಿ ನಡೆದಿರುವ ಪೈಪೋಟಿ ರಾಜ್ಯದ ಗಡಿದಾಟಿದ್ದು ಕೇರಳಕ್ಕೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 2ರಂದು ದೇವೇಗೌಡರು ಜೆಡಿಎಸ್ ನಾಯಕರ ಸಭೆ ಕರೆದಿದ್ದು, ಅಂದು ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಆರು ಪಕ್ಷೇತರ ಸದಸ್ಯರು, ಇಬ್ಬರು ಕಾಂಗ್ರೆಸ್ ಶಾಸಕರು ಕೇರಳದ ಅಲೆಪ್ಪಿಯ ಲೇಕ್ ಪ್ಯಾಲೇಸ್ ರೆಸಾರ್ಟ್ಗೆ ತೆರಳಿದ್ದಾರೆ. 14 ಜೆಡಿಎಸ್ ಸದಸ್ಯರು ಮತ್ತು ಇಬ್ಬರು ಶಾಸಕರು ಕೊಚ್ಚಿಯ ರೆಸಾರ್ಟ್ನಲ್ಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. [ಮೈತ್ರಿ ಮಾತುಕತೆ : ಯಾರು, ಏನು ಹೇಳಿದರು?]
ಎಲ್ಲವೂ ಅಂದುಕೊಂಡಂತೆ ನಡೆದು ಮೈತ್ರಿಯಾದರೆ ಕಾಂಗ್ರೆಸ್ನಿಂದ ಮೂರು ಬಾರಿ ಕಾರ್ಪೊರೇಟರ್ ಆಗಿರುವ ಮಡಿವಾಳ ವಾರ್ಡ್ನ ಮಂಜುನಾಥ ರೆಡ್ಡಿ ಅವರು ಮೇಯರ್ ಆಗುವ ಸಾಧ್ಯತೆ ಇದೆ. ಉಪ ಮೇಯರ್ ಸ್ಥಾನ ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರ ಪಾಲಾಗಲಿದೆ ಎಂಬುದು ಸದಸ್ಯದ ಮಾಹಿತಿ. [ಕೊಚ್ಚಿಗೆ ತೆರಳಿದ ಜೆಡಿಎಸ್ ಸದಸ್ಯರು]
ಸಭೆ ಕರೆದ ದೇವೇಗೌಡ : ಕಾಂಗ್ರೆಸ್ ಜೊತೆಗಿನ ಮೈತ್ರಿ ಕುರಿತು ಚರ್ಚೆ ನಡೆಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೆ.2ರಂದು ಸಭೆ ಕರೆದಿದ್ದಾರೆ. ಬಿಬಿಎಂಪಿ ಸದಸ್ಯರು, ಪಕ್ಷದ ಶಾಸಕರು, ಹಿರಿಯ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆ.2ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ನಲ್ಲಿ ಸಭೆ ನಡೆಯಲಿದೆ. ಅಲ್ಲಿಯ ತನಕ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ರೆಸಾರ್ಟ್ನಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.
ಚಿಕ್ಕಮಗಳೂರಿಗೆ ತೆರಳಿದ ಎಚ್ಡಿಕೆ : ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ರಾಂತಿಗಾಗಿ ಚಿಕ್ಕಮಗಳೂರಿಗೆ ತೆರಳಿದ್ದು, ಅಲ್ಲಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇತ್ತ ದೇವೇಗೌಡರು ಸೆ.2ರಂದು ಅಂತಿಮ ನಿರ್ಧಾರ ಎಂದು ಹೇಳಿದ್ದಾರೆ.