ಬಿಬಿಎಂಪಿಗೆ ಸವಾಲೊಡ್ಡುವಂತೆ ಬೆಂಗಳೂರಲ್ಲಿ ವರ್ಷಧಾರೆ
ಬೆಂಗಳೂರು, ಮೇ 18 : ಬುಧವಾರ ಇಡೀ ದಿನ ಸೂರ್ಯನ ಕಿರಣಗಳು ಬೆಂಗಳೂರಿನೊಳಗೆ ನುಸುಳದಂತೆ ಆವರಿಸಿಕೊಂಡಿದ್ದ ಮೋಡಗಳು, ಸಂಜೆ ಆರೂವರೆ ಸುಮಾರಿಗೆ ಮಳೆಗಾಲವನ್ನು ಎದುರಿಸಲು ಸನ್ನದ್ಧವಾಗಿದ್ದೇನೆ ಎಂದು ಹೇಳುತ್ತಿರುವ ಬಿಬಿಎಂಪಿಗೆ ಸವಾಲೊಡ್ಡುವಂತೆ ವರ್ಷಧಾರೆ ಸುರಿಸುತ್ತಿವೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರ ಪರಿಣಾಮ ಬೆಂಗಳೂರಿನ ಮೇಲೆಯೂ ಆಗಿದೆ. ಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶ ಮತ್ತು ಓರಿಸ್ಸಾದ ಕರಾವಳಿಯುದ್ದಕ್ಕೂ ಚಂಡಮಾರುತವಾಗಿ ಬದಲಾಗಲಿದ್ದು, ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬುಧವಾರ ಸಂಜೆ ಪಂಜಾಬ್ ವಿರುದ್ಧ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯವನ್ನು ವೀಕ್ಷಿಸಲು ಬಂದವರಿಗೆ ನಿರಾಶೆ ಗ್ಯಾರಂಟಿ. ಮಳೆ ಸುರಿದರೂ ಸಕಾಲದಲ್ಲಿ ನಿಂತು ಆರ್ಸಿಬಿ ವರ್ಸಸ್ ಪಂಜಾಬ್ ಪಂದ್ಯ ನಡೆಯಲಿ ಎಂದು ಸಹಸ್ರಾರು ಕ್ರಿಕೆಟ್ ಪ್ರೇಮಿಗಳು ವರುಣನನ್ನು ಪ್ರಾರ್ಥಿಸುತ್ತಿದ್ದಾರೆ. ಒಂದೊಂದು ಅಂಕ ಹಂಚಿಕೊಂಡರೂ ಆರ್ಸಿಬಿಗೆ ಕಷ್ಟಕಷ್ಟ. [ಹುಬ್ಬಳ್ಳಿಯಲ್ಲಿ ಮಳೆ ಆರ್ಭಟ, ಸಂಚಾರ ಅಸ್ತವ್ಯಸ್ತ]
ಬೆಂಗಳೂರಿನಲ್ಲಿ ಅಲ್ಪಕಾಲ ಮಳೆ ಸುರಿದರೂ ಭರ್ಜರಿ ಮಳೆಗೆ ರಸ್ತೆಗಳೆಲ್ಲ ತುಂಬಿ ಹರಿಯುತ್ತಿವೆ. ಚರಂಡಿಗಳು ಇನ್ನೂ ಕಸಕಡ್ಡಿ, ಪ್ಲಾಸ್ಟಿಕ್ಕು, ಹೂಳಿನಿಂದ ಮುಕ್ತವಾಗಿಲ್ಲ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಮುಂಗಾರು ಆಗಮಿಸುವುದರೊಳಗೆ ನಗರದ ಎಲ್ಲ ಚರಂಡಿಗಳು ನೀರಿನ ಹರಿವಿಗೆ ತೆರವಾಗಿರಬೇಕು ಮತ್ತು ರಸ್ತೆಗಳು ಕಸದಿಂದ ಮುಕ್ತವಾಗಿರಬೇಕು ಎಂದು ಸಿದ್ದರಾಮಯ್ಯ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಈ ಎಚ್ಚರಿಕೆಯನ್ನು ಬಿಬಿಎಂಪಿ ಅಧಿಕಾರಿಗಳು ಎಷ್ಟು ಕಿವಿಗೆ ಹಾಕಿಕೊಳ್ಳುತ್ತಾರೋ ಆ ದೇವರೇ ಬಲ್ಲ. ಈ ನಡುವೆ, ಜಯನಗರ, ವಸಂತನಗರ, ಮಲ್ಲೇಶ್ವರ, ಶಿವಾಜಿನಗರ, ಚಾಮರಾಜನಗರ ಮುಂತಾದ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ, ಚರಂಡಿಗಳು ತುಂಬಿ ಹರಿಯುತ್ತಿವೆ, ರೇನ್ ಕೋಟ್ ಅಥವಾ ಛತ್ರಿ ತರದವರು ಮನೆ ಹೇಗಪ್ಪಾ ಸೇರಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದಾರೆ.
ನಿರೀಕ್ಷೆಯಂತೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಮತ್ತು ಬಂಗಾಳಕೊಲ್ಲಿಯ ಕೆಲ ಭಾಗದಲ್ಲಿ ವಾಯವ್ಯ ಮುಂಗಾರು ಆಗಮಿಸಿದೆ. ಶ್ರೀಲಂಕಾದಲ್ಲಿ ಸುರಿದ ಜಡಿಮಳೆಗೆ ಮೂರು ಹಳ್ಳಿಗಳಲ್ಲಿ ಮಣ್ಣು ಕುಸಿದು 25ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಎರಡೂವರೆ ಲಕ್ಷಕ್ಕೂ ಹೆಚ್ಚು ನಿವಾಸಿಗಳು ನಿರ್ವಸಿತರಾಗಿದ್ದಾರೆ. [ಚಿತ್ರಗಳಲ್ಲಿ ನೋಡಿ : ಮಡಿಕೇರಿಯಲ್ಲಿ ಮಳೆ ತಂದ ಅವಾಂತರ]