ರಾಷ್ಟ್ರೀಯವಾದಿ ಪಕ್ಷ ಸೇರಲು ಮುಂದಾದ ಜೆಡಿಎಸ್ ಶಾಸಕರು
ಬೆಂಗಳೂರು, ಡಿಸೆಂಬರ್ 24: ನಾವೇನು ತಪ್ಪು ಮಾಡಿಲ್ಲ, ನಾವು ಪಕ್ಷದಲ್ಲಿ ಯಾರಿಗೂ ಬೇಡವಾಗಿದ್ದೇವೆ ಹೀಗಾಗಿ ಪಕ್ಷವನ್ನು ತ್ಯಜಿಸುವುದಾಗಿ ಜೆಡಿಎಸ್ ಬಂಡಾಯ ಮುಖಂಡರಾದ ಜಮೀರ್ ಅಹ್ಮದ್ ಖಾನ್ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ನಮ್ಮನ್ನು ಮತ್ತೆ ಸೇರಿಸಿಕೊಳ್ಳಬಹುದಿತ್ತು ಆದರೆ ಏಕೋ ಮನಸ್ಸು ಮಾಡಿದಂತಿಲ್ಲ. ಹೀಗಾಗಿ ನಾನು ಮತ್ತು ನನ್ನೊಂದಿಗೆ 7ಜನ ಅತೃಪ್ತ ಶಾಸಕರು ಜೆಡಿಎಸ್ ತ್ಯಜಿಸಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಸೇರುವುದಾಗಿ ಜಮೀರ್ ತಿಳಿಸಿದರು.[ಟ್ವಿಟ್ಟರ್ ಪಾರ್ಟಿ ಸೇರಿದ ಶಾಸಕ ಜಮೀರ್ ಅಹಮದ್ ಖಾನ್]
ನಾವು ತಪ್ಪು ಮಾಡಿಲ್ಲವೆಂದು ದೇವಾಲಯದಲ್ಲಿ ಆಣೆ ಪ್ರಮಾಣ ಮಾಡುತ್ತೇವೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯರು ಆಣೆ ಮಾಡಿ ನಾವು ತಪ್ಪು ಮಾಡಿರುವುದನ್ನು ಸಾಬೀತು ಪಡಿಸಲಿ ಎಂದು ಜಮೀರ್ ಸವಾಲು ಎಸೆದರು.
ಪ್ರಸ್ತುತ ಐದು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಕೆಲ ಕಾಂಗ್ರೆಸ್ ಶಾಸಕರು ಎನ್ ಸಿಪಿ ಸೇಲು ಒಲವು ತೋರುತ್ತಿದ್ದಾರೆ. ಹೀಗಾಗಿ ಎನ್ ಸಿಪಿ ಅಧ್ಯಕ್ಷ ಶರತ್ ಪವಾರ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಇನ್ನು ಜನವರಿ 8ರಂದು ಎನ್ ಸಿಪಿ ಮುಖ್ಯಸ್ಥ ಶರತ್ ಪವಾರ್ ಅವರೊಂದಿಗೆ ರಾಜ್ಯದಿಂದ ನಿಯೋಗ ಹೊರಟು ಪಕ್ಷಕ್ಕೆ ಸೇರುವ ಕುರಿತು ಚರ್ಚೆ ನಡೆಸುವುದಾಗಿ ಜಮೀರ್ ಅಹ್ಮದ್ ಖಾನ್ ತಿಳಿಸಿದರು.