ಸಾವಿನಲ್ಲೂ ಸಾರ್ಥಕತೆ ಮೆರೆದ ಯೂರೋ ಕಿಡ್ಸ್ ನಿರ್ದೇಶಕಿ
ಬೆಂಗಳೂರು, ಜು, ೦೪ : 'ಪರೋಪಕಾರರ್ಥಂ ಇದಂ ಶರೀರಂ' ಎಂಬ ನಾಣ್ನುಡಿ ನಿಮಗೆಲ್ಲಾ ಗೊತ್ತೇ ಇದೆ. ಬದುಕಿದ್ದಾಗ ನಾಲ್ಕು ಜನಕ್ಕಾದರೂ ಸಹಾಯ ಮಾಡಬೇಕು. ಸತ್ತ ಮೇಲೆ ನಾಲ್ಕು ಜನನಾದರೂ ನಮ್ಮನ್ನು ನೆನಸಿಕೊಳ್ಳಬೇಕು ಎಂಬುದು ಹಲವರ ಅಂಬೋಣ. ಆದರೆ ಅನುಸರಿಸೋದು ಕೆಲವೇ ಮಂದಿ ಮಾತ್ರ!
ಹೌದು. ದೈವಾಧೀನವಾದ ಮೇಲೂ ತನ್ನ ಇರುವಿಕೆಯನ್ನು ಭೂಮಿಯ ಮೇಲೆ ಮರು ಉಳಿಸಿಕೊಂಡ ಪರೋಕಾರದ ಸಾಕಾರಮೂರ್ತಿ ಮಂಗಳೂರಿನ ಯೂರೋ ಕಿಡ್ಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಲೀನಾ ಬಿನೋಯ್ (42). ಈಕೆ ಸಾವಿನಲ್ಲೂ ಹಲವು ಜೀವಗಳಿಗೆ ಬದುಕು ನೀಡಿದ ಮಹಾದಾನಿ.[ಬೆಂಗಳೂರಿನಲ್ಲಿ ಮಿಡಿದ ಮತ್ತೊಂದು ಜೀವಂತ ಹೃದಯ]
ಮಂಗಳೂರು ನಗರದ ಕಾಪ್ರಿಗುಡ್ಡದಲ್ಲಿ ನರ್ಸರಿ ನಡೆಸುತ್ತಿದ್ದ ಲೀನಾ ಬಿನೋಯ್ ಬುಧವಾರ ತಮ್ಮ ಮನೆಗೆ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿತು. ಈ ವೇಳೆ ನೆಲಕ್ಕೆ ಬಿದ್ದ ಲೀನಾ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ನಗರದ ಎ.ಜೆ. ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೆದುಳು ಗುರುವಾರ ನಿಷ್ಕ್ರಿಯಗೊಂಡು ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರು ಸ್ಪಷ್ಟಗೊಳಿಸಿದ ಬಳಿಕ ಅವರ ಅಭಿಲಾಷೆಯಂತೆ ಕುಟುಂಬ ಸದಸ್ಯರು ದೇಹದ ಅಂಗಾಂಗ ದಾನ ಮಾಡುವ ಮಹತ್ವದ ನಿರ್ಧಾರ ಕೈಗೊಂಡರು.
ಬದುಕಿನಲ್ಲಿ ಸಾರ್ಥಕತೆ ಮೆರೆದ ಬಿನೋಯ್ ಇವರ ಲಿವರ್ ಮತ್ತು ಕಿಡ್ನಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಬೇರ್ಪಡಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಂಗಳೂರಿನಿಂದ ಎ.ಜೆ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾದ ಪಿಎಂಎಸ್ಎಸ್ ವೈ ಆಸ್ಪತ್ರೆಗೆ ರವಾನಿಸಿ ಇಬ್ಬರಿಗೆ ಕಸಿ ಮಾಡುವ ಮೂಲಕ ಜೀವದಾನ ನೀಡಿದ ಘಟನೆ ಶುಕ್ರವಾರ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಂಥಹದೊಂದು ಕಸಿ ನಡೆದಿರುವುದು ಇದೇ ಮೊದಲು.[ಕುಡ್ಲದಲ್ಲಿ ಮಿಡಿದ ಜೀವಂತ ಹೃದಯ ಬೆಂಗಳೂರಿಗೆ]
ನೆರವಾದ ಝೀರೋ ಟ್ರಾಫಿಕ್: ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಯುತ್ತಿದ್ದಂತೆಯೇ ಅಂಗಾಂಗ ಸಾಗಿಸಲು ಬೇಕಾದ ಸಕಲ ವ್ಯವಸ್ಥೆ ಮಾಡಲಾಯಿತು. ಮುಖ್ಯವಾಗಿ ಆಸ್ಪತ್ರೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯನ್ನು ವಾಹನ ಮುಕ್ತವಾಗಿಸಲು ಮಂಗಳೂರು ಸಂಚಾರಿ ಪೊಲೀಸರಲ್ಲಿ ಮನವಿ ಮಾಡಲಾಯಿತು. 11.50ಕ್ಕೆ ಆಸ್ಪತ್ರೆ ಬಿಟ್ಟ ಆಂಬ್ಯುಲೆನ್ಸ್ 12.03ಕ್ಕೆ ವಿಮಾನ ನಿಲ್ದಾಣ ತಲುಪಿತು. ಅಲ್ಲಿಂದ 12.07ಕ್ಕೆ ಬಾಕ್ಸ್ ಅನ್ನು ವಿಮಾನದಲ್ಲಿರಿಸಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಮಧ್ಯಾಹ್ನ ನಂತರ ನಡೆದ ಮತ್ತೊಂದು ರವಾನೆ ಪ್ರಕ್ರಿಯೆಯಲ್ಲಿ ಒಂದು ಕಿಡ್ನಿಯನ್ನು 3.45ಕ್ಕೆ ಎ.ಜೆ.ಆಸ್ಪತ್ರೆಯಿಂದ ಕೊಂಡೊಯ್ಯಲಾಗಿದ್ದು, 4.30ರ ವಿಮಾನದಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕಿಡ್ನಿ ಮತ್ತಿತರ ಅಂಗಗಳ ಕಸಿ ಕಾರ್ಯ ನಡೆದಿದೆ. ಆದರೆ ಲಿವರ್ ಕಸಿ ಮಾಡಿರುವುದು ಇದೇ ಮೊದಲ ಪ್ರಯತ್ನವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಇದಕ್ಕೆ ದುಬಾರಿ ವೆಚ್ಚ ಆಗುತ್ತಿತ್ತು. ಇಲ್ಲಿ ಕಡಿಮೆ ಖರ್ಚಿನಲ್ಲಿ ಕಸಿ ನಡೆಸಲಾಗಿದೆ ಎಂದು ರಾಜ್ಯ ಅಂಗಾಂಗ ಕಸಿ ಸಮನ್ವಯ ಪ್ರಾದೇಶಿಕ ಸಮಿತಿ ಮುಖ್ಯಸ್ಥರಾದ ಮಂಜುಳ ತಿಳಿಸಿದ್ದಾರೆ.