ಆರ್ಕಿಡ್ಸ್ ಶಾಲೆಗೆ ಈಗ ಕ್ರಿಮಿನಲ್ ಕೇಸ್ ಭೀತಿ
ಬೆಂಗಳೂರು, ಅ.23: ಕರ್ನಾಟಕ ಶಿಕ್ಷಣ ಕಾಯ್ದೆ ಉಲ್ಲಂಘನೆ ಮಾಡಿ ಶಾಲೆ ನಡೆಸುತ್ತಿರುವ ಆರ್ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಯುಕ್ತ ಮಹಮ್ಮದ್ ಮೊಹಸೀನ್ ಹೇಳಿದ್ದಾರೆ.
ಶಾಲಾ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಆಯುಕ್ತ ಮೊಹಸೀನ್ ಭೇಟಿ ನೀಡಿದ್ದರು. ಶಾಲೆ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ಆರ್ಕಿಡ್ಸ್ ಆಡಳಿತ ಮಂಡಳಿ ಪ್ರೀ ನರ್ಸರಿ ಶಾಲೆ ನಡೆಸಲು ಅನುಮತಿ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
1 ರಿಂದ 4ನೇ ತರಗತಿ ತನಕ ಕನ್ನಡ ಮಾಧ್ಯಮ ಶಾಲೆ ನಡೆಸಲು ಅನುಮತಿ ನೀಡಲಾಗಿತ್ತು 5 ರಿಂದ 7 ತರಗತಿವರೆಗೂ ನಡೆಸುತ್ತಿದ್ದಾರೆ. ಕನ್ನಡ ಮಾಧ್ಯಮ ತರಗತಿಗೆ ಅನುಮತಿ ಪಡೆದು ಇಂಟರ್ ನ್ಯಾಷನಲ್ ಶಾಲೆ ಹೆಸರಿನಲ್ಲಿ ತರಗತಿ ನಡೆಸುತ್ತಿದ್ದಾರೆ.ಇದಕ್ಕಾಗಿ ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿಲ್ಲ.ಹೀಗಾಗಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಶಾಲೆ ವಿರುದ್ಧ ಸಮೀಪದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮೊಹಸೀನ್ ಹೇಳಿದ್ದಾರೆ. [ಅತ್ಯಾಚಾರ ಮಾಡಿದವನು ಗುಂಡಣ್ಣ?]
ಇದರ ಜೊತೆಗೆ ವಿವಾದಿತ ಆರ್ಕಿಡ್ಸ್ ಶಾಲೆಯ ಎಚ್ ಎಂಟಿ ಕಾಲೋನಿ, ಜಾಲಹಳ್ಳಿ ಶಾಖೆ ಅಲ್ಲದೆ, ನಾಗರಬಾವಿ, ಮೈಸೂರು ರಸ್ತೆ, ಸರ್ಜಾಪುರ ರಸ್ತೆ, ಬಿಟಿಎಂ ಲೇಔಟ್, ಹೊರಮಾವು, ಜೆಪಿನಗರ, ಮಾರತ್ ಹಳ್ಳಿ ಶಾಖೆಗಳಿಗೆ ನೀಡಲಾಗಿರುವ ಮಾನ್ಯತೆ ಪತ್ರ ಹಾಗೂ ಅನುಮತಿಗಳನ್ನು ಪರಿಶೀಲಿಸಲಾಗುವುದು ಎಂದು ಆಯುಕ್ತ ಮೊಹಸೀನ್ ಹೇಳಿದ್ದಾರೆ.
ಪೋಷಕರ ಸಭೆ : ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ಎಂಟಿ ಬಡಾವಣೆ ಬಳಿ ಇರುವ ಆರ್ಕಿಡ್ಸ್ ಶಾಲೆಯಲ್ಲಿ ಗುರುವಾರ ಆಡಳಿತ ಮಂಡಳಿ ಜೊತೆ ಪೋಷಕರ ಸಭೆ ನಡೆಸಲಾಯಿತು. ಪೊಲೀಸರು ನೀಡಿರುವ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ಆಡಳಿತ ಮಂಡಳಿಗೆ ಪೋಷಕರು ಒತ್ತಾಯಿಸಿದರು. ಶನಿವಾರ ಮತ್ತೊಮ್ಮೆ ಸಭೆ ನಡೆಸಲಾಗುತ್ತದೆ.
ತನಿಖೆ ಪ್ರಗತಿಯಲ್ಲಿದೆ: ಶಾಲೆಯ ಸಿಇಒ ಡಿಕೋಸ್ತಾ, ಹೈದರಾಬಾದ್ ಮೂಲದ ಶಾಲಾ ಮಾಲೀಕರಿಗೆ ಪೊಲೀಸರು ಸಮನ್ಸ್ ನೀಡಿದ್ದು ಇಬ್ಬರನ್ನು ಗುರುವಾರ ವಿಚಾರಣೆ ಮಾಡುವ ಸಾಧ್ಯತೆಯಿದೆ.[ಎಂಎನ್ ರೆಡ್ಡಿ ಹೇಳಿದ್ದೇನು?]
ಶಾಲಾ ಮಂಡಳಿ ಸ್ಪಷ್ಟನೆ: ಶಾಲೆಯಲ್ಲಿ ಸಾಕಷ್ಟು ಭದ್ರತೆ ಒದಗಿಸಲಾಗುತ್ತದೆ. ಇನ್ಮುಂದೆ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು. ವಿಬ್ ಗಯಾರ್ ಶಾಲೆ ಘಟನೆ ನಂತರ ಪೊಲೀಸರು ನೀಡಿರುವ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳನ್ನೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಶಾಲಾ ಮುಖ್ಯಸ್ಥ ವೆಂಕಟ ನಾರಾಯಣ ಭರವಸೆ ನೀಡಿದ್ದಾರೆ.
ಶಾಲಾ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಪೂರ್ಣ ವರದಿ ನೀಡಲು ಶನಿವಾರ ತನಕ ಕಾಲಾವಕಾಶ ಬೇಕು ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಘಟನೆಗೆ ಸಂಬಂಧಿಸಿದಂತೆ ಈಗಾಗಲೆ ಶಾಲೆಯ ಬೋಧಕೇತರ ಸಿಬ್ಬಂದಿ ಗುಂಡಣ್ಣ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಎಲ್ಲವೂ ಸರಿಯಾಗಿದೆ ಎನಿಸಿದರೆ ಮಾತ್ರ ಸೋಮವಾರದಿಂದ ಎಂದಿನಂತೆ ಶಾಲೆಗೆ ಮಕ್ಕಳನ್ನು ಕಳಿಸುತ್ತೇವೆ ಎಂದು ಪೋಷಕರು ಖಡಕ್ ಆಗಿ ಹೇಳಿದ್ದಾರೆ.