ಶಿವರಾಮ ಕಾರಂತ ಬಡಾವಣೆಯಲ್ಲಿ ಡಿನೋಟಿಫೈ, ಬಿಎಸ್ವೈ ಮೇಲೆ ಎಸಿಬಿಗೆ ದೂರು
ಬೆಂಗಳೂರು, ಜೂನ್ 13: ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾದ ನೂರಾರು ಕೋಟಿ ರೂಪಾಯಿಗಳ ಭೂಮಿಯನ್ನು ಡಿನೋಟಿಫೈ ಮಾಡಿ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಷ್ಟ ಉಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನ ಸಾಮಾನ್ಯರ ವೇದಿಕೆ ಇಂದು ಎಸಿಬಿಗೆ ದೂರು ನೀಡಿದೆ.
ಕಳೆದ ಆರು ದಿನಗಳಿಂದ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಬಸವಣ್ಣ ಅನುಭವ ಮಂಟಪದಲ್ಲಿ ಈ ಸಂಬಂಧ ಧರಣಿ ನಡೆಸುತ್ತಿರುವ ವೇದಿಕೆಯ ಕಾರ್ಯಕರ್ತರೊಂದಿಗೆ ವೇದಿಕೆಯ ಅಧ್ಯಕ್ಷರಾದ ಡಾ.ಡಿ.ಅಯ್ಯಪ್ಪದೊರೆ ಮತ್ತು ಸಂಚಾಲಕರಾದ ರವಿಕುಮಾರ್ ಅವರು ಇಂದು ಎಸಿಬಿಗೆ ಭೇಟಿ ನೀಡಿ ದೂರು ನೀಡಿದರು. ಅಲ್ಲದೆ, ಕೂಡಲೇ ಯಡಿಯೂರಪ್ಪ ಅವರ ವಿರುದ್ದ ಎಫ್ಐಆರ್ ದಾಖಲಿಸುವಂತೆ ಪ್ರತಿಭಟನೆ ನಡೆಸಿದರು.
ಯಡಿಯೂರಪ್ಪಗೆ ಮತ್ತೆ ಡಿನೋಟಿಫಿಕೇಶನ್ ಕಂಟಕ, ಎಸಿಬಿಗೆ ದೂರು
ಈ ಸಂದರ್ಭದಲ್ಲಿ ಮಾತನಾಡಿದ ಅಯ್ಯಪ್ಪ ದೊರೆ, "ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆಂದು ಬಿಡಿಎ 2008 ರಲ್ಲಿ ಬೆಂಗಳೂರು ಉತ್ತರ ತಾಲೂಕು ಮತ್ತು ಉತ್ತರ ಅಪರ ತಾಲೂಕಿನ 17 ಗ್ರಾಮಗಳ 3546 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆಗ ಸ್ವಾಧೀನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಸೇರಿ ಈ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಭೂಮಿಯ ಪೈಕಿ 257 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡುವಂತೆ ಆದೇಶ ನೀಡಿದ್ದರು," ಎಂದಿದ್ದಾರೆ.
ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿಯ ಎರಡು ಕನಸು
"ಮುಂದೆ ಈ ಬಗ್ಗೆ ಪರಿಶೀಲನೆ ನಡೆಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಆಯುಕ್ತರು, ಈ ಸದರಿ 257 ಎಕರೆ ಜಮೀನು ಉದ್ದೇಶಿತ ಶಿವರಾಮ ಕಾರಂತ ಬಡಾವಣೆಯ ಮಧ್ಯಭಾಗದಲ್ಲಿ ಬರುವುದರಿಂದ ಡೀನೋಟಿಫೈ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಬೇಕೆಂದು 2010 ರಲ್ಲಿ ಷರಾ ಬರೆದಿದ್ದರು," ಎಂದು ಹೇಳಿದ್ದಾರೆ.
"ಈ ಅಧಿಕಾರಿಯ ಷರಾವನ್ನು ಲೆಕ್ಕಿಸದೇ ಯಡಿಯೂರಪ್ಪ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸದರಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡುವಂತೆ ಆದೇಶ ನೀಡಿ ಆಗ 200 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಎಸಗಿದ್ದಾರೆ," ಎಂದು ಆರೋಪಿಸಿದರು.
ಈಗ ಈ ಭೂಮಿಯ ಬೆಲೆ 1000 ಕೋಟಿ ರೂಪಾಯಿಯನ್ನು ಮೀರುತ್ತದೆ. ಈ ಮೂಲಕ ಯಡಿಯೂರಪ್ಪ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಿಡಿಎಗೆ 200 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಷ್ಟ ಉಂಟು ಮಾಡಿದ್ದಾರೆ ಎಂದು ಅಯ್ಯಪ್ಪ ದೊರೆ ಆರೋಪಿಸಿದರು.
ಇದಾದ ಬಳಿಕ, ಮುಖ್ಯಮಂತ್ರಿಯಾದ ಡಿ.ವಿ.ಸದಾನಂದಗೌಡ ಅವರು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ ಅಕ್ರಮದ ಕುರಿತು ಸಿಐಡಿ ತನಿಖೆ ನಡೆಸುವ ಭರವಸೆ ನೀಡಿದ್ದರು. ಆದರೆ, ತನಿಖೆಗೆ ಮುಂದಾಗಿದ್ದ ಸಿಐಡಿ ಯಡಿಯೂರಪ್ಪ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಿಸಲು ತನಗೆ ಅವಕಾಶವಿಲ್ಲ. ಅದೇನಿದ್ದರೂ ಸರ್ಕಾರದ ಮಟ್ಟದಲ್ಲಿ ಆಗಬೇಕೆಂದು ಹೇಳಿ ಕೈತೊಳೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ಅಲ್ಲದೇ, ಒಂದು ಕೋಮಿನ ಹೆಸರು ಹೇಳಿಕೊಂಡು ಅದರ ನಾಯಕ ತಾನು ಎಂದು ಬಿಂಬಿಸಿಕೊಳ್ಳುತ್ತಿರುವ ಯಡಿಯೂರಪ್ಪ ಅವರ ಈ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಸವಣ್ಣನವರ ಅನುಭವ ಮಂಟಪದಲ್ಲಿಯೇ ಬಿಡುಗಡೆ ಮಾಡಿದ್ದೇವೆ ಎಂದು ಅಯ್ಯಪ್ಪ ದೊರೆ ತಿಳಿಸಿದರು.
ಸರ್ಕಾರ ಈ ಕೂಡಲೇ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಡಿನೋಟಿಫೈ ಮಾಡಿರುವ ಜಮೀನನ್ನು ವಶಪಡಿಸಿಕೊಂಡು ವಸತಿ ಯೋಜನೆಯನ್ನು ಮುಂದುವರೆಸಬೇಕೆಂದು ಅಯ್ಯಪ್ಪ ದೊರೆ ಮತ್ತು ರವಿಕುಮಾರ್ ರಾಯಸಂದ್ರ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.