ಅರ್ಕಾವತಿ ಪಾತ್ರದ ಅಕ್ರಮ ತೆರವಿಗೆ ಹೈ ಆದೇಶ
ಬೆಂಗಳೂರು, ನ. 29: ಅರ್ಕಾವತಿ ನದಿ ಪಾತ್ರ ಹಾಗೂ ತಿಪ್ಪಗೊಂಡನಹಹಳ್ಳಿ ಜಲಾಶಯದ ಸುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಬೇಕು. ನದಿ ಪಾತ್ರ ಗಡಿ ಗುರುತು ಕಾರ್ಯ ಮುಂದುವರಿಸಬೇಕು. ವಿವಾದಿತ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆ ನಡೆಸಬಾರದು ಎಂದು ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ಕೆ ಸೂಚನೆ ನೀಡಿದೆ.
ತಿಪ್ಪಗೊಂಡನಹಳ್ಳಿ ಜಲಾಶಯ ಸುತ್ತಲಿನ ಜಾಗ ಸಂರಕ್ಷಿತ ಪ್ರದೇಶದಲ್ಲಿ ಬರುತ್ತದೆ. ಇಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗುತ್ತಿವೆ ಎಂದು ಟಿ. ರಾಜಕುಮಾರ್ ಎಂಬುವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾ. ಆರ್.ಬಿ. ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಈ ಕುರಿತು ತಹಸೀಲ್ದಾರರು ನೋಟಿಸ್ ನೀಡಿದ್ದರೂ, ರಾಜ್ಯ ಸರ್ಕಾರ ನಂತರ ಹಿಂಪಡೆದಿತ್ತು. ಇದನ್ನು ತೀವ್ರವಾಗಿ ಖಂಡಿಸಿದ ಹೈಕೋರ್ಟ್, ಸರ್ಕಾರ ಅಧಿಸೂಚನೆ ಹಿಂಪಡೆಯುವ ಮೂಲಕ ಒತ್ತುವರಿದಾರರ ರಕ್ಷಣೆಗೆ ನಿಂತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ರಾಜ್ಯ ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ನೀಡಿತು.
ಅಲ್ಲದೆ, ಇನ್ನೂ ಒತ್ತುವರಿ ತೆರವುಗೊಳಿಸದಿರುವುದು ಏಕೆ? ಅಧಿಸೂಚನೆ ಹಿಂಪಡೆಯಲು ಕಾರಣವೇನು? ಎಂದು ಪ್ರಶ್ನಿಸಿತು. ಅಕ್ರಮ ಒತ್ತುವರಿದಾರರು ಹಾಗೂ ಅವರ ಜತೆ ಸೇರಿರುವ ಅಧಿಕಾರಿಗಳ ಹಿತ ರಕ್ಷಣೆಗೆ ಸರ್ಕಾರದ ಉದ್ದೇಶವೇ ಎಂದು ಪ್ರಶ್ನಿಸಿದೆ. ಅಕ್ರಮ ನಡೆಯುವಾಗ ಸುಮ್ಮನಿದ್ದ ಬಿಡಿಎ ಧೋರಣೆಗೆ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.