ಪಕ್ಷ ವಿರೋಧಿ ಹೇಳಿಕೆ ನೀಡುವವರ ಉಚ್ಚಾಟನೆಗೆ ಒತ್ತಾಯ
ಬೆಂಗಳೂರು, ಫೆಬ್ರವರಿ 9: ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಕಾರ್ಯಕ್ರಮಗಳ ವಿರುದ್ಧ ರಾಜ್ಯದಲ್ಲಿ ಬಹಿರಂಗ ಹೇಳಿಕೆಗಳನ್ನು ನಿಡುತ್ತಿರುವ ಹಿರಿಯ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಕಾಂಗ್ರಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ಒತ್ತಾಯಿಸಿದರು.
ಹಿರಿಯ ಮುಖಂಡರಾದ ಎಚ್. ವಿಶ್ವನಾಥ್, ಬಿ.ಜನಾರ್ದನ ಪೂಜಾರಿ, ಸಿ.ಕೆ. ಜಾಫರ್ ಷರೀಪ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಅವರು ಪಕ್ಷ ಮತ್ತು ಸರಕಾರದ ಅಧಿಕಾರವನ್ನು ಅನುಭವಿಸಿ, ಈಗ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇಂತಹವರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಎಂದು ಕೆಲವು ಶಾಸಕರು ಶಾಸಕಾಂಗ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು ಎನ್ನಲಾಗಿದೆ.[ಜನಾರ್ದನ ಪೂಜಾರಿಗೆ ಶೋಕಾಸ್ ನೋಟೀಸ್, ಉತ್ತರ ಕೊಡ್ತಿನಿ ಅಂದ್ರು]
ಪಕ್ಷದ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಪಕ್ಷದ ಎಲ್ಲ ಕಾರ್ಯಕರ್ತರಿಗೂ, ಮುಖಂಡರಿಗೂ ತೀವ್ರ ಮುಜುಗರವಾಗುತ್ತಿರುವ ಹಿನ್ನೆಲೆ ಕೆಲ ಶಾಸಕರು ಎಚ್. ವಿಶ್ವನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದು, ಇದಕ್ಕೆ ಧ್ವನಿಗೂಡಿಸಿದ ಇನ್ನೂ ಕೆಲವು ಶಾಸಕರು ಜನಾರ್ದನ ಪೂಜಾರಿ ಮತ್ತು ಜಾಫರ್ ಷರೀಪ್ ಅವರ ಹೆಸರನ್ನೂ ಪ್ರಸ್ತಾಪಿಸಿ ಸಭೆಯಲ್ಲಿ ಜೋರಾಗಿ ಕೂಗಾಡಿದರು ಎನ್ನಲಾಗಿದೆ.
ಇನ್ನು ಈ ಸಂಬಂಧ ಶಾಸಕಾಂಗ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರಿಗೆ ನೋಟಿಸ್ ಜಾರಿ ಮಾಡುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ.