'ಸಾರ್ಥಕ ಸಮಾವೇಶ'ದಲ್ಲಿ ಬಿಜೆಪಿ ವಿರುದ್ಧ ಗುಡುಗಿದ ಕೈ ನಾಯಕರು
ಬೆಂಗಳೂರು, ಅಕ್ಟೋಬರ್, 27: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಾರ್ಥಕ ಸಮಾವೇಶದಲ್ಲಿ ಕೈ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು
ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ನಾಯಕರು ಮೋದಿ ಜಪ ಮಾಡುತ್ತಿದ್ದಾರೆ. ಚುನಾವಣೆಗೆ ಅದು ಹೇಗೆ ಹೋಗುತ್ತಾರೋ ಗೊತ್ತಿಲ್ಲ ಅವರು ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರು ಅಮಾಯಕರಲ್ಲ. ಕೊಲೆಗಾರ ಖುಲಾಸೆಯಾದರೆ ಕೊಲೆ ನಡೆದಿರುವುದು ಸುಳ್ಳೆ, ಎಂದು ಸಿದ್ದರಾಮಯ್ಯ ಅವರು ಕಿಚಾಯಿಸಿದರು. ಯಡಿಯೂರಪ್ಪ ಅವರು ಮಾಡಿರುವ ಭ್ರಷ್ಟಾಚಾರವನ್ನು ಜನ ಮರೆಯಲು ಸಾಧ್ಯವಿಲ್ಲ. ಬಿಜೆಪಿಯನ್ನೇ ನಿರ್ನಾಮ ಮಾಡುತ್ತೇನೆ ಎಂದು ಹೊರಟವರು ಅವರು ಎಂದು ಲೇವಡಿ ಮಾಡಿದರು.
ಪರಮೇಶ್ವರ್ ಅವರು ಕೆಪಿಸಿಸಿಯಲ್ಲಿ ದೀರ್ಘಾವಧಿಯಾಗಿ ಕೆಲಸ ಮಾಡಿದ್ದಾರೆ. 2010ರಿಂದ ಅವರು ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರ ದೀರ್ಘಾವಧಿ ಸೇವೆಯಲ್ಲಿ ಪಕ್ಷ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದರು.
ಕೋಮುಶಕ್ತಿಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಉಡುಪಿಯಿಂದ ಮಂಗಳೂರಿಗೆ ಪಾದಯಾತ್ರೆ ಮಾಡಿ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಯಾವುದಾದರೂ ಯೋಜನೆ ಜಾರಿಮಾಡಬೇಕೆಂದು ಅನುದಾನ ಕೇಳಿದರೂ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ ಪರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಇನ್ನೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಯಡಿಯೂರಪ್ಪ ಅವರು " ನ್ಯಾಯಲಯದಲ್ಲಿ ಉತ್ತಮರು ಎಂದು ಮುದ್ರೆ ಹಾಕಿಸಿಕೊಂಡಿರಬಹುದು ಆದರೆ ಜನತಾ ನ್ಯಾಯಲಯವೊಂದಿದೆ ಅಲ್ಲಿ ಜನ ಅವರಿಗೆ ಪಾಠ ಕಲಿಸುತ್ತಾರೆ" ಎಂದು ಅವರು ಹೇಳಿದರು.
ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮತನಾಡಿ ಪರಮೇಶ್ವರ್ ಅವರು ಉತ್ತಮ ಆಡಳಿತಗಾರರು. ಅವರ ದಕ್ಷತೆಯನ್ನು ಮೆಚ್ಚಿಯೇ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಅವರ ಸೇವೆ ಅಪಾರ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಪಕ್ಷ ಕಾರ್ಯಕರ್ತರನ್ನು ಮರೆಯಬಾರದು ಕಾರ್ಯಕರ್ತರನ್ನು ಕಡೆಗಣಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಪರಮೇಶ್ವರ್ ಅವರಿಗೆ ಆ ಅನುಭವ ಚೆನ್ನಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೆ ಬೆಳ್ಳಿಗದೆ ಮತ್ತು ಬೆಳ್ಳಿ ಕೀರಿಟ ನೀಡಿ ಸಭೆಯಲ್ಲಿ ಸನ್ಮಾನಿಸಲಾಯಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಲೋಕಸಭೇ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಂಮತ್ರಿ ಧರಂಸಿಂಗ್, ಸಂಸದ ವೀರಪ್ಪ ಮೊಯಿಲಿ ಸೇರಿದಂತೆ ಮತ್ತಿತರರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.