ಪರಮೇಶ್ವರ, ದೇವೇಗೌಡ ಭೇಟಿ : ಮಾತುಕತೆ ವಿವರಗಳು
ಬೆಂಗಳೂರು, ಸೆ.02 : ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿದ್ದು ಇಂದು ಪರಮೇಶ್ವರ ಮತ್ತು ದೇವೇಗೌಡರು ಮಾತುಕತೆ ನಡೆಸಿದ್ದಾರೆ. ಕೇರಳದಿಂದ ಬಿಬಿಎಂಪಿ ಸದಸ್ಯರಿಗೆ ವಾಪಸ್ ಬರುವಂತೆ ಜೆಡಿಎಸ್ ಸೂಚನೆ ರವಾನಿಸಿದೆ. ಮೈತ್ರಿ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಅಂತಿಮ ಮಾತುಕತೆ ನಡೆಸಿ ಎಂದು ದೇವೇಗೌಡರು ಸೂಚನೆ ನೀಡಿದ್ದಾರೆ.
ಬುಧವಾರ ಮಧ್ಯಾಹ್ನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ಸಚಿವ ರಾಮಲಿಂಗಾ ರೆಡ್ಡಿ, ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್, ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಈ ಭೇಟಿಗೆ ಸಾಕ್ಷಿಯಾಗಿದ್ದರು. [ಬಿಬಿಎಂಪಿ ಮೈತ್ರಿ : ಕಾಂಗ್ರೆಸ್ ಎರಡು ಬಣ]
ದೇವೇಗೌಡರನ್ನು ಭೇಟಿಯಾಗುವ ಮೊದಲು ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಭೆ ನಡೆಸಿದರು. ಬುಧವಾರ ಬೆಳಗ್ಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಉಪಹಾರಕ್ಕೆ ತೆರಳಿದ್ದ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಪರಮೇಶ್ವರ ಅವರು ಮೈತ್ರಿ ಮಾತುಕತೆಯ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ಆ ಬಳಿಕ ಪರಮೇಶ್ವರ ಅವರು ಗೌಡರ ನಿವಾಸಕ್ಕೆ ಆಗಮಿಸಿದರು. [ಮೇಯರ್ ಹುದ್ದೆ ಮ್ಯಾಜಿಕ್ ನಂಬರ್ 131]
ಸುಮಾರು 45 ನಿಮಿಷಗಳ ಭೇಟಿಯ ನಂತರ ಮೈತ್ರಿ ಮಾತುಕತೆಯ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಅಂತಿಮ ಚರ್ಚೆ ನಡೆಸಿ ಎಂದು ದೇವೇಗೌಡರು ಪರಮೇಶ್ವರ ಅವರಿಗೆ ಸೂಚಿಸಿದರು. ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದೇವೆ ಎಂದು ದೇವೇಗೌಡರು ಹೇಳಿದರು. ಮಾತುಕತೆಯ ವಿವರಗಳು ಚಿತ್ರಗಳಲ್ಲಿ......
ಮೈತ್ರಿ ಸಾಧಕ-ಬಾಧಕಗಳ ಚರ್ಚೆ
ದೇವೇಗೌಡ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ ಅವರು 'ಬಿಬಿಎಂಪಿಯಲ್ಲಿ ಮೈತ್ರಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದೇವೆ' ಎಂದು ಚುಟುಕಾಗಿ ಉತ್ತರ ನೀಡಿದ್ದಾರೆ.
ಯಾವುದೇ ಷರತ್ತು ವಿಧಿಸಿಲ್ಲ
'ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಯಾವುದೇ ಷರತ್ತನ್ನು ವಿಧಿಸಿಲ್ಲ. ಸಂಖ್ಯೆಗೆ ಅನುಗುಣವಾಗಿ ಸಹಜವಾಗಿ ಸಿಗಬೇಕಾಗದ ಸ್ಥಾನ-ಮಾನಗಳು ದೊರೆಯಲಿವೆ' ಎಂದು ಪರಮೇಶ್ವರ ಭೇಟಿ ಬಳಿಕ ದೇವೇಗೌಡರು ಹೇಳಿದರು.
ಕುಮಾರಸ್ವಾಮಿ ಅವರ ಜೊತೆ ಮಾತನಾಡಿ
'ಮೈತ್ರಿ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಅಂತಿಮವಾಗಿ ಮಾತನಾಡಿ ಎಂದು ಪರಮೇಶ್ವರ ಅವರಿಗೆ ಸೂಚನೆ ನೀಡಿದ್ದೇನೆ. ಮೇಯರ್ ಚುನಾವಣೆ ಅಧಿಸೂಚನೆ ಪ್ರಕಟವಾದ ಬಳಿಕ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ' ಎಂದು ದೇವೇಗೌಡರು ಹೇಳಿದರು.
ಬಿಬಿಎಂಪಿ ಮಾತ್ರ ಮೈತ್ರಿ ಸೀಮಿತ
'ಕಾಂಗ್ರೆಸ್ ಜೊತೆಗಿನ ಮೈತ್ರಿ ಬಿಬಿಎಂಪಿಗೆ ಮಾತ್ರ ಸೀಮಿತವಾಗಿದ್ದು' ಎಂದು ದೇವೇಗೌಡರು ಸ್ಪಷ್ಟಪಡಿಸಿದರು. 'ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷವಾಗಿ ನಾವು ನಡೆಸುವ ಹೋರಾಟವನ್ನು ಮುಂದುವರೆಸುತ್ತೇವೆ' ಎಂದು ಅವರು ತಿಳಿಸಿದರು.
ಕೊಚ್ಚಿಯಿಂದ ವಾಪಸ್ ಬರಲು ಸೂಚನೆ
ಕೊಚ್ಚಿಯ ರೆಸಾರ್ಟ್ನಲ್ಲಿರುವ ಜೆಡಿಎಸ್ ಬಿಬಿಎಂಪಿ ಸದಸ್ಯರಿಗೆ ವಾಪಸ್ ಬರುವಂತೆ ಪಕ್ಷ ಸೂಚನೆ ರವಾನಿಸಿದೆ. ಮೇಯರ್ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆ ಮೈತ್ರಿ ಮಾತುಕತೆಯ ಅಂತಿಮ ಚಿತ್ರಣ ಲಭ್ಯವಾಗಲಿದೆ.
ಪಕ್ಷೇತರ ಜೊತೆ ಮಾತುಕತೆ ಬಾಕಿ
ಕಾಂಗ್ರೆಸ್ ಪಕ್ಷಕ್ಕೆ 14 ಸದಸ್ಯರ ಬಲ ಹೊಂದಿರುವ ಜೆಡಿಎಸ್ ಬೆಂಬಲ ಸಿಕ್ಕಿದೆ. ಇನ್ನು 7 ಪಕ್ಷೇತರ ಸದಸ್ಯರ ಜೊತೆ ಪಕ್ಷ ಮಾತುಕತೆ ನಡೆಸಬೇಕಾಗಿದೆ. ಅಲೆಪ್ಪಿಯಲ್ಲಿರುವ ರೆಸಾರ್ಟ್ನಲ್ಲಿ ಪಕ್ಷೇತರ ಸದಸ್ಯರು ವಾಸ್ತವ್ಯ ಹೂಡಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರು ಪಕ್ಷೇತರ ಸದಸ್ಯರ ಜೊತೆಗಿದ್ದಾರೆ.
ಬಿಜೆಪಿಗೆ ಪ್ರತಿಪಕ್ಷ ಸ್ಥಾನ ಖಚಿತ
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸಿದ್ಧವಾದರೆ ಬಿಬಿಎಂಪಿ ಚುನಾವಣೆಯಲ್ಲಿ 100 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ 100 ಸ್ಥಾನಗಳನ್ನು ಹೊಂದಿದ್ದು (ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿ), ಜೆಡಿಎಸ್ 22 ಸ್ಥಾನಗಳನ್ನು ಹೊಂದಿದೆ. 7 ಪಕ್ಷೇತರ ಬಿಬಿಎಂಪಿ ಸದಸ್ಯರು, 2 ಪಕ್ಷೇತರ ವಿಧಾನಪರಿಷತ್ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು ಸೇರಿದರೆ 132 ಸಂಖ್ಯಾಬಲವಾಗುತ್ತದೆ. ಮೇಯರ್ ಆಯ್ಕೆಗೆ ಮ್ಯಾಜಿಕ್ ನಂಬರ್ 131.