ರಾಜ್ಯದಲ್ಲಿರುವುದು ಕಾಂಗ್ರೆಸ್ - ಎಸ್ (ಸಿದ್ದು) ಪಕ್ಷ: ವಿಶ್ವನಾಥ್
ಬೆಂಗಳೂರು, ಜೂನ್ 23: ''ಸದ್ಯದಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಕೇವಲ ಕಾಂಗ್ರೆಸ್ - ಎಸ್. ಎಸ್ ಎಂದರೆ, ಸಿದ್ದರಾಮಯ್ಯ ಎಂದರ್ಥ. ರಾಜ್ಯದಲ್ಲಿ ಸೋನಿಯಾ ಜೀ, ರಾಹುಲ್ ಗಾಂಧಿ ಜೀ ಅವರ ಪ್ರಭಾವವೂ ನಡೆಯದಷ್ಟರ ಮಟ್ಟಿಗೆ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವವನ್ನು ಬೆಳೆಸಿಕೊಳ್ಳಲು ಯತ್ನಿಸಿದ್ದಾರೆ'' ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಟೀಕಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ (ಜೂನ್ 23) ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ''ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಹಿಂದಿದ್ದಂತೆ ಇಲ್ಲ. ಪಕ್ಷದ ಸ್ವರೂಪವೂ ಬದಲಾಗಿದೆ. ಈ ಹಿಂದಿದ್ದಂತೆ ನೆಹರೂ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್, ಸೋನಿಯಾ ಕಾಂಗ್ರೆಸ್ ಎಂಬಂತಿಲ್ಲ'' ಎಂದು ವಿಷಾದಿಸಿದರು.
ಕಾಂಗ್ರೆಸ್ ಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ಎಚ್ ವಿಶ್ವನಾಥ್
ಕಾಂಗ್ರೆಸ್ ಹೈ ಕಮಾಂಡ್ ಈಗ ದುರ್ಬಲವಾಗಿದೆ ಎಂದ ಅವರು, ಸುಮಾರು 40 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದುಕೊಂಡು ರಾಜಕೀಯ ಪಾಠಗಳನ್ನು ಕಲಿತು, ಪಕ್ಷಕ್ಕೆ ನಿಷ್ಠಾವಂತರಾಗಿರುವವರನ್ನೇ ಕಡೆಗಣಿಸಿ ವಲಸೆ ಬಂದವರ ಮಾತಿಗೆ ಜೈ ಎನ್ನುವ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲಿ ನಿರ್ಮಾಣವಾಗಿದೆ ಎಂದರು.
ಇದೇ ವೇಳೆ
ಎಲ್ಲರೂ ಸಿದ್ದರಾಮಯ್ಯ ಅವರ ಪ್ರಭಾವದಲ್ಲಿ
ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ರಾವ್ ಅವರೂ ಅಸಹಾಯಕರಾಗಿದ್ದಾರೆಂದು ಅವರು ತಿಳಿಸಿದರು. ಸಿದ್ದರಾಮಯ್ಯ ಅವರಿಂದ ತಮಗಾದ ಅವಮಾನಗಳನ್ನು ನಾನು ವಿವರಿಸಹೋದರೆ, ಎಲ್ಲವನ್ನೂ ತಾಳ್ಮೆಯಿಂದ ಕೇಳಿದ ನಂತರ ಅವರು ''ನೋಡಿ ವಿಶ್ವನಾಥ್, ನೀವು ಮೈಸೂರಿನವರು. ಸಿದ್ದರಾಮಯ್ಯ ಅವರೂ ಮೈಸೂರಿನವರು. ಮೇಲಾಗಿ, ಇಬ್ಬರ ಜಾತಿಯೂ ಒಂದೇ. ಹಾಗಿರುವಾಗ ನಿಮ್ಮ ಸಮಸ್ಯೆನ್ನು ನೀವೇ ಸರಿಪಡಿಸಿಕೊಳ್ಳಿ'' ಎಂದರು. ಇದರರ್ಥ, ಅವರೂ ಅಸಹಾಯಕರಾಗಿದ್ದಾರೆ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಅವರ ಪ್ರಭಾವ ಅವರ ಮೇಲಿದೆ ಎಂದು ತಿಳಿಸಿದರು.
ಎಲ್ಲವನ್ನೂ ಮರೆತಿರಾ? - ಸಿದ್ದರಾಮಯ್ಯಗೆ ಪ್ರಶ್ನೆ
ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಗುಡುಗಿದರು. ಜೆಡಿಎಸ್ ನಿಂದ ಅಪಮಾನಿತರಾಗಿ, ರಾಜಕೀಯವೇ ಬೇಡ ಎಂದು ಅಲವತ್ತುಕೊಳ್ಳುತ್ತಿದ್ದ ಸಂದರ್ಭದಲ್ಲಿ ನಾನು, ಶ್ರೀನಿವಾಸ್ ಪ್ರಸಾದ್, ಜಾಫರ್ ಷರೀಫ್, ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆಯವರು ನಿಮ್ಮ ಪರವಾಗಿ ಸೋನಿಯಾ ಜೀ ಅವರ ಬಳಿ ವಕಾಲತ್ತು ವಹಿಸಿ ನಿಮ್ಮ ಕಾಂಗ್ರೆಸ್ ಗೆ ಸೇರ್ಪಡೆಗೊಳಿಸಲು ಅವಿರತ ಶ್ರಮಿಸಿದ್ದೆವು. ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಆರೇ ತಿಂಗಳಲ್ಲಿ ನೀವು ಮುಖ್ಯಮಂತ್ರಿಯೂ ಆದಿರಿ. ಸರಿ. ಸಂತೋಷ. ಆದರೆ, ನಿಮ್ಮ ಈ ಏಳ್ಗೆಗೆ ಮೂಲ ಕಾರಣರಾದ ಎಲ್ಲರನ್ನೂ ಮರೆತಿರಲ್ಲಾ? ಇದು ನಿಮಗೆ ಸರಿಯೆನಿಸುತ್ತದೆಯೇ? ನಿಮಗೆ ಕೃತಜ್ಞತೆಯಿದೆಯೇ? ಎಂದರು.
ಸಿದ್ದರಾಮಯ್ಯರನ್ನು ದುಷ್ಯಾಸನನಿಗೆ ಹೋಲಿಸಿದ ವಿಶ್ವನಾಥ್
ನಾನು ಅಧಿಕಾರ ಅನುಭವಿಸಿದ್ದ, ನಿರ್ವಹಿಸಿದ್ದೇನೆ
''ರಾಜ್ಯದಲ್ಲಿ ಸಿದ್ಧರಾಮಯ್ಯ ಅವರ ಸರ್ಕಾರ ಸ್ಥಿರವಾಗಿರಲಿ. ಆದರೆ, ಮೂಲ ಕಾಂಗ್ರೆಸ್ಸಿಗರನ್ನು ಅಪಮಾನ ಮಾಡಿದ್ದು ಸರಿಯೇ?'' ಎಂದ ವಿಶ್ವನಾಥ್, ''ನಾವು ಹಿರಿಯ ತಲೆಗಳು ನಮಗೆ ಅಧಿಕಾರ ಕೊಡಿ ಎಂದು ಕೇಳುತ್ತಿಲ್ಲ. ಆದರೆ, ನಮ್ಮ ಸಲಹೆಗಳನ್ನೂ ಪರಿಗಣಿಸಿ. ನಮಗೂ ಗೌರವಿಸಿ. ಸೌಜನ್ಯದಿಂದ ಕಾಣಿರಿ ಎಂದಷ್ಟೇ ಕೇಳುತ್ತಿದ್ದೇವೆ. ಆದರೆ, ಇದನ್ನೇ ತಪ್ಪು ಎಂದರೆ ಹೇಗೆ ?'' ಎಂದರು. ''ನಾನು ಎಂದಿಗೂ ಅಧಿಕಾರ ಅನುಭವಿಸಿದವನಲ್ಲ, ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಿದವನು. ವಿಶ್ವನಾಥ್ ಒಬ್ಬ ಭ್ರಷ್ಠ, ಅಪ್ರಮಾಣಿಕ ಎಂದು ಯಾರೂ ಹೇಳುವುದಿಲ್ಲ. ಬೇಕಾದರೆ ಕೇಳಿ ನೋಡಿ'' ಎಂದರು.
ದಿಗ್ವಜಯ್ ಜತೆ ಮಾತಿನ ಚಕಮಕಿ
''ನಾನು ಹಿಂದೊಮ್ಮೆ ದೆಹಲಿಯಲ್ಲಿ ಭಾಷಣ ಮಾಡುತ್ತಿದ್ದಾಗ , ಕಾಂಗ್ರೆಸ್ ಪಕ್ಷವು ಸೋನಿಯಾ ಅಥವಾ ರಾಹುಲ್ ಗಾಂಧಿಯವರ ಪಕ್ಷವಲ್ಲ. ಅದು ಜನರ ಪಕ್ಷ. ಹೀಗೆ ಹೇಳಿದ್ದಕ್ಕೆ ನನಗೆ ನೋಟಿಸ್ ನೀಡಲಾಯಿತು. ಇದಕ್ಕೆ ಉತ್ತರ ಕೊಡಲು ನಾನು ಆಗ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿದ್ದ ದಿಗ್ವಿಜಯ ಸಿಂಗ್ ಅವರನ್ನು ಭೇಟಿಯಾದಾಗ, ''ಮಿಸ್ಟರ್ ದಿಗ್ವಿಜಯ ಸಿಂಗ್, ಶತಮಾನದಷ್ಟು ಹಳೆಯದಾದ ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಸಿದ್ದರಾಮಯ್ಯ ಜತೆ ಸೇರಿ ಮಣ್ಣುಪಾಲು ಮಾಡುತ್ತಿದ್ದೀರಿ ಎಂದು ನಿಷ್ಠುರವಾಗಿ ಹೇಳಿದೆ. ಅದಕ್ಕಾಗಿ ಅವರು, ನನ್ನನ್ನುಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲು ಫೈಲ್ ಸಿದ್ಧಗೊಳಿಸಿದರು'' ಎಂದು ವಿಶ್ವನಾಥ್ ಹೇಳಿದರು.
ಮುಂದಿನ ನಿರ್ಧಾರ ಶೀಘ್ರದಲ್ಲೇ ಪ್ರಕಟ
ಕಡೆಯಲ್ಲಿ ಪರಮೇಶ್ವರ್ ಅವರಿಗೆ ತಾವು ನೀಡಬೇಕಿದ್ದ ಕಾಂಗ್ರೆಸ್ ಸದಸ್ಯತ್ವದ ರಾಜಿನಾಮೆ ಪತ್ರವನ್ನು ಓದಿ ಹೇಳಿದ ವಿಶ್ವನಾಥ್, ''ತಮ್ಮ ರಾಜಕೀಯ ಜೀವನದ ಮುಂದಿನ ನಡೆಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದರು. ಮೊದಲು ರಾಜ್ಯವನ್ನು ಸುತ್ತಾಡಿ, ನನ್ನನ್ನು ಬೆಳೆಸಿದ ಹಿರಿಯರನ್ನು ಭೇಟಿ ಮಾಡಿ ಅವರ ಅಭಿಪ್ರಾಯ, ಸಲಹೆಗಳನ್ನು ಪಡೆದ ನಂತರವಷ್ಟೇ ತಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ'' ಎಂದು ಅವರು ತಿಳಿಸಿದರು.