ಬಿಎಸ್ ವೈ ಮನೆಯಲ್ಲೇ ನನ್ನ ವಿರುದ್ಧ ದೂರು ಸಿದ್ಧ: ಎಚ್ ಡಿಕೆ
ಆದಾಯ ತೆರಿಗೆ ಇಲಾಖೆಯಲ್ಲಿ ತಮ್ಮ ವಿರುದ್ಧ ದಾಖಲಿಸಲಾಗಿರುವ ದೂರು ಬಿಎಸ್ ವೈ ಮನೆಯಲ್ಲೇ ತಯಾರಾಗಿದೆ. ಹಾಗಾಗಿ, ದೂರಿನ ಪ್ರತಿಯಲ್ಲಿ ದೂರುದಾರರ ವಿಳಾಸವಿಲ್ಲ ಎಂದು ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು, ಮೇ 24: ತಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿರುವ ದೂರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲೇ ಸೃಷ್ಟಿಯಾಗಿದ್ದು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನನ್ನ ವಿರುದ್ಧ ನೀಡಲಾದ ದೂರಿನಲ್ಲಿ ದೂರುದಾರನ ವಿಳಾಸವೇ ಇಲ್ಲ. ಇದು ನಿಯಮಗಳಿಗೆ ವಿರುದ್ಧ. ಅಲ್ಲದೆ, ಈ ದೂರು ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲೇ ಸಿದ್ಧವಾಗಿದೆ'' ಎಂದು ಆರೋಪಿಸಿದರು.['ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ದೇವೇಗೌಡರಲ್ಲ, ನಾವು']
''ಗೃಹ ಸಚಿವ ಪರಮೇಶ್ವರ್ ಅವರು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ ವೆಂಕಟೇಶ್ ಗೌಡ ಎಂಬುವರಿಂದ ಆದಾಯ ತೆರಿಗೆ ಕಚೇರಿಯಲ್ಲಿ ಕುಮಾರ ಸ್ವಾಮಿ ವಿರುದ್ಧ ದೂರು ಸಲ್ಲಿಕೆಯಾಗಿದೆ ಎಂದು ಹೇಳಿದ್ದಾರೆ. ಆದರೆ, ಆ ದೂರಿನ ಪ್ರತಿಯಲ್ಲಿ ವೆಂಕಟೇಶ್ ಗೌಡ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದಷ್ಟೇ ಇದೆ. ಆದರೆ, ದೂರುದಾರನ ವಿಳಾಸವೇ ಇಲ್ಲ. ಇದು ಹೇಗೆ ಸಾಧ್ಯ. ಇದರಿಂದ ಈ ದೂರು ಪಿತೂರಿಯ ಉದ್ದೇಶದಿಂದ ಸಲ್ಲಿಕೆಯಾಗಿದೆ ಎಂಬುದು ಖಾತ್ರಿಯಾಗುತ್ತದೆ'' ಎಂದು ಅವರು ತಿಳಿಸಿದರು.[ಜಂತಕಲ್ ಗಣಿಗಾರಿಕೆ: ಎಚ್ಡಿಕೆ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಣೆ]
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೇ ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಸುತ್ತಿದ್ದಾರೆಂದು ಅವರು ಆರೋಪಿಸಿದರು.