ಆಧಾರ್ ಮಾಹಿತಿ ಸೋರಿಕೆ, ಬೆಂಗಳೂರಿನ ಕಂಪನಿಯೊಂದರ ವಿರುದ್ಧ FIR
ಬೆಂಗಳೂರು, ಜುಲೈ 28 : ವ್ಯಕ್ತಿಯ ಬಯೋಮೆಟ್ರಿಕ್ ಸೇರಿದಂತೆ ಖಾಸಗಿ ಮಾಹಿತಿ ಒಳಗೊಂಡಿರುವ ಆಧಾರ್ ಸಂಖ್ಯೆಯ ಮಾಹಿತಿಯನ್ನು ಸೋರಿಕೆ ಮಾಡಿರುವ ಆರೋಪದಡಿ 'ಕ್ಯುರ್ಥ್ ಟೆಕ್ನಾಲಜೀಸ್ ಕಂಪನಿ' ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಇಂದಿರಾನಗರದಲ್ಲಿ 'ಕ್ಯುರ್ಥ್ ಟೆಕ್ನಾಲಜೀಸ್ ಕಂಪನಿ'ಯು ಆಪ್ ಮೂಲಕ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುಐಎ ಬೆಂಗಳೂರು ಘಟಕದ ಉಪನಿರ್ದೇಶಕ ಅಶೋಕ್ ಲೆನಿನ್ ಅವರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ಸಬ್ಸಿಡಿ ಸೀಮೆಎಣ್ಣೆ , ಅಟಲ್ ಪಿಂಚಣಿ ಸವಲತ್ತುಗಳಿಗೆ ಆಧಾರ್ ಕಡ್ಡಾಯ
'ಅಭಿನವ ಶ್ರೀವಾಸ್ತವ್ ಎಂಬುವರು ಕ್ಯುರ್ಥ್ ಟೆಕ್ನಾಲಜೀಸ್ ಕಂಪೆನಿ ಹೆಸರಿನಲ್ಲಿ ಆಪ್ ಅಭಿವೃದ್ಧಿಪಡಿಸಿ, ಗೂಗಲ್ ಪ್ಲೇ ಸ್ಟೋರ್ನಲ್ಲಿ ಹರಿಬಿಟ್ಟಿದ್ದಾರೆ. ಜತೆಗೆ ಆಧಾರ್ ವೆಬ್ಸೈಟ್ನಿಂದ ದಾಖಲೆಗಳನ್ನು ಕದ್ದು, ಆ ಆಪ್ ಲ್ಲೇ ಅಪ್ಲೋಡ್ ಮಾಡಿದ್ದಾರೆ'.
'ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಆಪ್ ಮೂಲಕ ಜನರಿಗೆ ಇ-ಕೆವೈಸಿ ಕೊಡುತ್ತಿದ್ದಾರೆ. ಇದಕ್ಕೆ ಆಧಾರ್ ಸಂಸ್ಥೆಯಿಂದ ಅನುಮತಿ ಪಡೆದಿಲ್ಲ' ಎಂದು ದೂರಿನಲ್ಲಿ ಅಶೋಕ್ ಉಲ್ಲೇಖಿಸಿದ್ದಾರೆ.