ಪೊಲೀಸರು ಮಂಗಳದವರೂ ಅಲ್ಲ, ಶುಕ್ರದವರೂ ಅಲ್ಲ!
ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆಯ ಮೌಲ್ಯಗಳನ್ನು ಭಾರತ ಬಿತ್ತಿದ್ದು 1950ರ ಜನವರಿ 26ರಂದು ನಮ್ಮ ಸಂವಿಧಾನ ಅಸ್ವಿತ್ವಕ್ಕೆ ಬಂದಾಗ. ಶತಮಾನಗಳ ಕಾಲ ಮಹಾರಾಜರು ನಮ್ಮನ್ನು ಆಳಿದ್ದಾರೆ. ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಎಂಬ ಪರಿಕಲ್ಪನೆ ನಿಜವಾಗುವುದು ಸ್ವಾತಂತ್ರ್ಯ ಮತ್ತು ಸಮಾನತೆಗಳು ಸಮಾಜದಲ್ಲಿ ಬಲವಾಗಿ ತಳವೂರಿದಾಗ ಮಾತ್ರ.
ಇಲ್ಲದಿದ್ದರೆ, ನಾವಾಡುವ ಮೌಲ್ಯಗಳು ಪುಸ್ತಕದ ಬದನೆಕಾಯಿಗಳಾಗಿಬಿಡುತ್ತವೆ. ನಾವೀಗ ಆಡುತ್ತಿರುವ ಸಮಾನತೆ ಮನೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ ಜಾರಿಯಲ್ಲಿದೆಯೆ? ಅಥವಾ ಪುರುಷರಿಗಾಗಿ ಮತ್ತು ಮಹಿಳೆಯರಿಗಾಗಿ ಅಲಿಖಿತ ನಿಯಮಗಳು ಜಾರಿ ತರಲಾಗಿದೆಯಾ?
ನಾವು ಪ್ರತಿಯೊಬ್ಬರೂ ಪಾಶ್ಚಿಮಾತ್ಯ ಜೀವನಶೈಲಿಯನ್ನು ಕಣ್ಣುಮುಚ್ಚಿಕೊಂಡು ಅಳವಡಿಸಿಕೊಂಡಿದ್ದೇವೆ. ಅವರ ದಿರಿಸು ಧರಿಸುವ ರೀತಿ, ಆಹಾರ ಶೈಲಿ, ರಂಜನೆಯ ಪದ್ಥತಿಯನ್ನು ಇದೇ ಆಧುನಿಕ ಶೈಲಿಯೆಂಬಂತೆ ಅನುಸರಿಸುತ್ತಿದ್ದೇವೆ. ಆದರೆ, ಪಾಶ್ಚಿಮಾತ್ಯರ 'ಸಮಾನತೆ' ಮತ್ತು 'ಸ್ವಾತಂತ್ರ್ಯ'ದ ರೀತಿನೀತಿಗಳನ್ನು ಅನುಸರಿಸುತ್ತಿದ್ದೇವಾ? ನನಗೆ ಅನುಮಾನ. [ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?]
ಒಂದು ವೇಳೆ ಪಾಶ್ಚಿಮಾತ್ಯರ ಸ್ವಾತಂತ್ರ್ಯ ಸಮಾನತೆಯ ರೀತಿನೀತಿಗಳನ್ನು ಅನುಸರಿಸಿದ್ದರೆ, ಮಹಿಳೆಯ ವಿರುದ್ಧ ನಡೆದ ದೌರ್ಜನ್ಯಕ್ಕಾಗಿ ಆಕೆಯನ್ನೇ ದೂರುತ್ತಿರಲಿಲ್ಲ. ಹೊಸವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನಾವಳಿಗಳನ್ನು ನೋಡಿದರೆ ಯಾವುದು ಕಾನೂನು, ಯಾವುದು ಸಂಸ್ಕೃತಿ ಎಂಬ ಬಗ್ಗೆ ನಮಗೇ ಗೊಂದಲವಿರುವಂತೆ ಕಾಣುತ್ತದೆ.
ಹೆಣ್ಣುಮಕ್ಕಳು ಚಿಕ್ಕ ಬಟ್ಟೆ ಧರಿಸುವುದನ್ನು, ರಾತ್ರಿಗಳಲ್ಲಿ ರಸ್ತೆಗಳಲ್ಲಿ ಅಡ್ಡಾಡುವುದನ್ನು, ಮದ್ಯ ಸೇವಿಸುವುದನ್ನು ನಮ್ಮ ಸಂಸ್ಕೃತಿ ಒಪ್ಪಲಿಕ್ಕಿಲ್ಲ. ಆದರೆ, ನಮ್ಮ ಕಾನೂನು ಈ ಯಾವ ನಿಬಂಧನೆಯನ್ನೂ ಮಹಿಳೆಯರ ಮೇಲೆ ಹೇರುವುದಿಲ್ಲ.
ಆದ್ದರಿಂದ, ನಾವಂದುಕೊಂಡಿರುವುದೇ ಸರಿ ಎಂಬ ಸಂಸ್ಕೃತಿಯನ್ನು, ನಮ್ಮ ನಡವಳಿಕೆಗಳನ್ನು ಒಬ್ಬರ ಮೇಲೆ ಬಲವಂತವಾಗಿ ಹೇರುವುದು ಕಾನೂನಿ ಪ್ರಕಾರ ಅಪರಾಧ. ಅಲ್ಲದೆ, 2013ರಲ್ಲಿ ಐಪಿಸಿ ತಿದ್ದುಪಡಿಯಾದ ನಂತರ, ಮಹಿಳೆಯರ ವಿರುದ್ಧ ನಾವು ತೋರುವ ಕೆಲ ನಡವಳಿಕೆಗಳನ್ನು 'ಅಪರಾಧ' ಎಂದು ವರ್ಗೀಕರಿಸಲಾಗಿದೆ.[ಬೆಂಗಳೂರು ಪೊಲೀಸ್ ಆಯುಕ್ತರಾಗಿ ಪ್ರವೀಣ್ ಅಧಿಕಾರ ಸ್ವೀಕಾರ]
ಪೊಲೀಸರ ಬಗ್ಗೆ ಹೇಳುವುದಾದರೆ, ಅವರು ಇನ್ನೂ ಹೆಚ್ಚು ವೃತ್ತಿಪರ, ಕ್ರಿಯಾತ್ಮಕ ಮತ್ತು ಜನಸ್ನೇಹಿ ಮತ್ತು ಹೆಚ್ಚಾಗಿ ಮಹಿಳಾಸ್ನೇಹಿಯಾಗಿರಬೇಕು. ವತ್ತಿಪರತೆ ಎಂದರೆ ತಮ್ಮ ಮನೋಧರ್ಮವನ್ನು, ತಮ್ಮ ನಡವಳಿಕೆಯನ್ನು, ಸಂಸ್ಕೃತಿಯನ್ನು ತರುವುದಲ್ಲ. ಆದರೆ, ಕಾನೂನಿಗೆ ಕಟ್ಟುನಿಟ್ಟಾಗಿ ಬದ್ಧರಾಗಿರಬೇಕು.
ಕೆಲ ಅಹಿತಕರ ಘಟನೆಗಳು ನಡೆದಾಗ, ಕಿಡಿಗೇಡಿಗಳ ಬಗ್ಗೆ ಮೃದುಧೋರಣೆ ತಾಳದೆ, ಯಾರ ಮಧ್ಯಸ್ಥಿಕೆಗೂ ಬಗ್ಗದೆ, ಯಾರಿಗೂ ಕನಿಕರ ತೋರದೆ ನಿಷ್ಕಾರುಣದಿಂದ ಕಾನೂನು ಜಾರಿಗೆ ತರಬೇಕು. ಇಂಥ ಘಟನೆಗೆ ಮಹಿಳೆಯರೇ ಕಾರಣ ಎಂಬ ಧೋರಣೆ ತಾಳದೆ ಕರ್ತವ್ಯ ನಿರ್ವಹಿಸಬೇಕು.
ಪೊಲೀಸರು ಮಾಹಿತಿಯನ್ನು ಕಲೆಹಾಕಿ, ಸೂಕ್ತವಾದ ತನಿಖೆ ನಡೆಸಿ ಅಹಿತಕರ ಘಟನೆಗಳನ್ನು ಮೊದಲೇ ಊಹಿಸಿಕೊಂಡು ಕೆಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವಶ್ಯಕತೆ ಬಿದ್ದರೆ, ಯಾರು ದೂರು ನೀಡದಿದ್ದರೂ ತಾವೇ ಸ್ವತಃ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಬೇಕು. [ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ, ಎಲ್ಲಿಗೆ ಯಾರು?]
ಜನರ ಸಂಕಷ್ಟಗಳಿಗೆ, ಅದರಲ್ಲೂ ಮಹಿಳೆಯರ ತೊಂದರೆಗಳಿಗೆ ಪೊಲೀಸರು ಕೂಡಲೆ ಸ್ಪಂದಿಸಬೇಕು. ಯಾವುದೇ ಸಂದಿಗ್ಧ ಪರಿಸ್ಥಿತಿ ತಲೆದೋರಿದಾಗ ಜನರು ಏನು ಮಾಡಬೇಕು, ಏನು ಮಾಡಬಾರದು ಎಂದು ಮೊದಲೇ ತಿಳಿಸಬೇಕು. ಜನಸ್ನೇಹಿಯಾಗಿ ವರ್ತಿಸಬೇಕು ಮತ್ತು ಅಪರಾಧ ತಡೆಗಟ್ಟಲು ಅವರ ಸಹಾಯವನ್ನೂ ಯಾಚಿಸಬೇಕು.
ಸಮಾಜ ತನಗೆ ಎಂಥ ಪೊಲೀಸ್ ಬೇಕೋ ಅಂಥ ಪೊಲೀಸನ್ನೇ ಆಯ್ದುಕೊಳ್ಳುತ್ತದೆ. ಪೊಲೀಸರೇನು ಮಂಗಳ ಗ್ರಹದವರೂ ಅಲ್ಲ, ಶುಕ್ರದವರೂ ಅಲ್ಲ. ಅವರು ಇತರ ಎಲ್ಲರಂತೆ ಇದೇ ಗ್ರಹದವರು. ಆದರೆ, ಪೊಲೀಸ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಸಮಾಜದ ಬೆಂಬಲವೂ ಅಗತ್ಯ. ಅಂತೆಯೇ, ಸಮಾಜವೂ ಆರೋಗ್ಯಕರವಾಗಿರಬೇಕಿದ್ದರೆ ಪೊಲೀಸರ ಪಾತ್ರವನ್ನೂ ತೆಗೆದುಹಾಕುವಂತಿಲ್ಲ. [ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮೈದುನ ನಾದಿನಿ ಜೋಡಿ]