'ಟ್ಯಾಗೋರ್ ಬಿಟ್ಟರೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಸೃಷ್ಟಿಯಾಗಿಲ್ಲ'
ಬೆಂಗಳೂರು, ಡಿಸೆಂಬರ್. 26 : ಗುರುದೇವ ರವೀಂದ್ರನಾಥ ಟ್ಯಾಗೋರ್ ನಂತರ ಭಾರತದಲ್ಲಿ ಇನ್ನೊಬ್ಬ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಸೃಷ್ಟಿಯಾಗಿಲ್ಲ. ಇದು ಟ್ಯಾಗೋರ್ ಪ್ರತಿಭೆಯ ಅಗಾಧತೆ ಬಿಂಬಿಸುತ್ತದೆ ಎಂದು ಮುಂಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಐಟಿಐ ವಿದ್ಯಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ನಿಖಿಲ್ ಭಾರತ ಬಂಗಾ ಸಾಹಿತ್ಯ ಸಮ್ಮೇಳನದ 89ನೇ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯ ಉತ್ಕೃಷ್ಟವಾಗಿರುವ ನಾಡಿನಲ್ಲಿ ಬದುಕಿನ ಮಟ್ಟವು ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಸರಳ ಜೀವನ, ಉನ್ನತ ಚಿಂತನ ಬಂಗಾಳಿಗಳ ವೈಶಿಷ್ಟ್ಯವೆಂದು ಶ್ಲಾಘಿಸಿದರು.
'ಕುವೆಂಪು ಹಾಗೂ ದ.ರಾ.ಬೇಂದ್ರೆ ಅವರು ಟ್ಯಾಗೋರರ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಟ್ಯಾಗೋರರ ಗೀತಾಂಜಲಿ ಕೃತಿಯ 28 ಅನುವಾದಗಳು ಕನ್ನಡದಲ್ಲಿವೆ ಎಂಬುದು ಹೆಮ್ಮೆಯ ವಿಷಯ.
ಇದು ಬಂಗಾಳಿ ಮತ್ತು ಕನ್ನಡ ಸಾಹಿತ್ಯದ ನಡುವಣ ಸುದೀರ್ಘ ಅವಧಿಯ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿ ಬಂಗಾಳಿ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಹಾಡ ಹೊಗಳಿದರು.
ಬೆಂಗಳೂರಿನಲ್ಲಿ ನಾಲ್ಕನೇ ಬಾರಿ ಈ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.