ರವಿ ಬೆಳಗೆರೆ ಬಂಧನ ಆದೇಶ ಹಿಂಪಡೆಯುವಂತೆ ಸಿಎಂ ಮನವಿ
ಪತ್ರಕರ್ತ ರವಿ ಬೆಳಗೆರೆ ಬಂಧನದ ಆದೇಶ ಹಿಂಪಡೆಯುವಂತೆ ವಿಧಾನಸಭಾ ಸ್ಪೀಕರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ. ಹಕ್ಕು ಚ್ಯುತಿ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಬಂಧನಕ್ಕೆ ಜೂನ್ 22ರಂದು ಆದೇಶ ಹೊರಡಿಸಿದ್ದ ವಿಧಾಸಭೆ ಸ್ಪೀಕರ್ ಕೆ.ಬಿ. ಕೋಳಿವಾ
ಬೆಂಗಳೂರು, ಜೂನ್ 27: ಹಕ್ಕು ಚ್ಯುತಿ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯವರ ಬಂಧನಕ್ಕೆ ಆದೇಶಿಸಿದ್ದ ತಮ್ಮ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಸಭಾಪತಿ ಕೆ.ಬಿ. ಕೋಳಿವಾಡ ಅವರಿಗೆ ಮನವಿ ಮಾಡಿದ್ದಾರೆ.
ಶಾಸಕ ನಾಗರಾಜ್ ಹಾಗೂ ಕೆ.ಬಿ. ಕೋಳಿವಾಡ ವಿರುದ್ಧ ಅವಹೇಳನಕಾರಿ ಲೇಖನವೊಂದನ್ನು ಬರೆದಿದ್ದ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಹಾಗೂ ಮತ್ತೊಂದು ಪತ್ರಿಕೆಯ ಸಂಪಾದಕ ಅನಿಲ್ ರಾಜ್ ಅವರ ವಿರುದ್ಧ ಹಕ್ಕು ಬಾಧ್ಯತಾ ಸಮಿತಿಯಲ್ಲಿ ದೂರು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ, ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ವಿರುದ್ಧ ಹಕ್ಕು ಬಾಧ್ಯತಾ ಸಮಿತಿಯು 1 ವರ್ಷ ಜೈಲು ಹಾಗೂ 10 ಸಾವಿರ ರು. ದಂಡ ವಿಧಿಸಲಾಗಿತ್ತು. ಈ ಶಿಕ್ಷೆಗೆ ವಿಧಾನಸಭೆಯಲ್ಲಿನ ಎಲ್ಲಾ ಶಾಸಕರೂ ಪಕ್ಷಬೇಧ ಮರೆತು ಒಪ್ಪಿಗೆ ನೀಡಿದ್ದರಿಂದಾಗಿ, ಜೂನ್ 22ರಂದು ಶಿಕ್ಷೆಯು ಜಾರಿಗೊಂಡಿತ್ತು. ಆಮೇಲೇನಾಯಿತು, ಇದೀಗ ಸಿಎಂ ಅವರೇ ಖುದ್ದಾಗಿ ಮನವಿ ಸಲ್ಲಿಸಲು ಕಾರಣವೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.
ಧಾರವಾಡದ ಆಸ್ಪತ್ರೆಗೆ ದಾಖಲು
ಇದರಿಂದಾಗಿ ಬಂಧನದ ಭೀತಿಯಲ್ಲಿದ್ದ ರವಿ ಬೆಳಗೆರೆ, ಧಾರವಾಡದ (ಬಂಧನ ಶಿಕ್ಷೆ ಜಾರಿಯಾದಾಗ ಅವರು ಧಾರವಾಡದ ಸಮೀಪದಲ್ಲಿದ್ದರು) ಎಸ್ ಡಿಎಂ ಆಸ್ಪತ್ರೆಗೆ ಎದೆನೋವಿನಿಂದ ದಾಖಲಾಗಿದ್ದರು.
ಆದೇಶದ ವಿರುದ್ಧ ವ್ಯಾಪಕ ಆಕ್ಷೇಪ
ಬೆಂಗಳೂರು ಪೊಲೀಸರು ಅವರ ಬಂಧನಕ್ಕಾಗಿ ಕಾಯುವಂತಾಗಿತ್ತು. ಇತ್ತ ಬೆಂಗಳೂರಿನಲ್ಲಿ ರವಿ ಬೆಳಗೆರೆಯವರ ವಿರುದ್ಧ ಬಂಧನ ಶಿಕ್ಷೆ ಜಾರಿಯಾಗಿದ್ದರ ವಿರುದ್ಧ ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಸದನದ ಈ ನಡೆಯನ್ನು ಆಕ್ಷೇಪಿಸಿದರು.
ಆದೇಶ ಹಿಂಪಡೆಯುವಂತೆ ಮನವಿ
ಏತನ್ಮಧ್ಯೆ, ಬೆಂಗಳೂರಿನ ಪ್ರೆಸ್ ಕ್ಲಬ್ ನ ವರದಿಗಾರರ ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ವಿರುದ್ಧದ ಶಿಕ್ಷೆಯನ್ನು ಹಿಂಪಡೆಯಬೇಕೆಂದು, ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬೇಕೆಂದೂ ಆಗ್ರಹಿಸಿದರು.
ಖಾಲಿ ಕೈಯ್ಯಲ್ಲಿ ಹಿಂದಿರುಗಿದ ಅಧಿಕಾರಿಗಳು
ಅತ್ತ, ಧಾರವಾಡದಲ್ಲಿ ರವಿ ಬೆಳಗೆರೆ ಬಂಧನಕ್ಕಾಗಿ ಜೂನ್ 25ರವರೆಗೂ ಕಾಯ್ದ ಪೊಲೀಸರು ಕೊನೆಗೆ ಸರ್ಕಾರದ ಸೂಚನೆ ಮೇರೆಗೆ ಖಾಲಿ ಕೈಯ್ಯಲ್ಲಿ ಬೆಂಗಳೂರಿಗೆ ಹಿಂದಿರುಗಿದರು.
ಸ್ಪೀಕರ್ ಗೆ ಮನವಿ
ಇದೀಗ, ಸಿದ್ದರಾಮಯ್ಯ ಅವರು, ಸ್ಪೀಕರ್ ಅವರಿಗೆ ಶಿಕ್ಷೆಯ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿರುವುದು ಈ ಪ್ರಕರಣ ಸುಖಾಂತ್ಯ ಕಾಣುವ ಸೂಚನೆಗಳನ್ನು ನೀಡಿದೆ.