ಸಂಶಯ ಬಿಡಿ, ಉಕ್ಕು ಸೇತುವೆ ಯೋಜನೆ ಪಾರದರ್ಶಕ
ಉಕ್ಕು ಸೇತುವೆ ನಿರ್ಮಾಣ ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ. ಈ ಕುರಿತು ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರು, ಅಕ್ಟೋಬರ್ 17: ಉಕ್ಕು ಸೇತುವೆ ನಿರ್ಮಾಣ ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ. ಈ ಕುರಿತು ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾರ್ವಜನಿಕರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಯೋಜನೆ ರೂಪಿಸಿದೆ. ಸಂಚಾರದ ಒತ್ತಡದಿಂದ ಜನ ಅನುಭವಿಸುತ್ತಿರುವ ಕಷ್ಟ ಕಡಿಮೆ ಮಾಡುವುದು ಯೋಜನೆಯ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪರಿಶೀಲನೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.[ಉಕ್ಕಿನ ಮೇಲ್ಸೇತುವೆ ಪರ್ಯಾಯವಾಗಿ ಏನ್ಮಾಡ್ಬಹುದು?]
ಸುಮಾರು 1,791 ಕೋಟಿ ರು ವೆಚ್ಚದ ಈ ಯೋಜನೆ ವಿರುದ್ಧ ಭಾನುವಾರ ಬೃಹತ್ ಮಾನವ ಸರಪಳಿ ಪ್ರತಿಭಟನೆ ಯಶಸ್ವಿಯಾಗಿತ್ತು. ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ದಾರ್ಶನಿಕ ಸಮಿತಿ ಹಾಗೂ ನಾಗರಿಕರ ಸಮಿತಿ ಮನವಿ ಮಾಡಿತ್ತು.[ಸೇತುವೆ ಪರಿಕಲ್ಪನೆ ಬಿಜೆಪಿಯದ್ದು, ಅನುಷ್ಠಾನ ಕಾಂಗ್ರೆಸಿನದ್ದು :ಸಿಎಂ]
* ಉಕ್ಕು ಸೇತುವೆ ನಿರ್ಮಾಣ ವಿಚಾರ 2010ರಲ್ಲೇ ಪ್ರಸ್ತಾಪವಾಗಿತ್ತು.[ಚುನಾವಣೆ ಖರ್ಚಿಗೆ ಸ್ಟೀಲ್ ಮೇಲ್ಸೇತುವೆ?: ಸುರೇಶ್ ಕುಮಾರ್]
* 2014-15ನೇ ಸಾಲಿನ ಬಜೆಟ್ ನಲ್ಲಿ ಯೋಜನೆ ಘೋಷಿಸಲಾಗಿತ್ತು. ಬಳಿಕ ಯೋಜನಾ ವರದಿ ಸಿದ್ಧಪಡಿಸಿ ವೆಬ್ಸೈಟ್ಗೂ ಹಾಕಲಾಗಿದೆ. ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ. ಮುಖ್ಯ ಕಾರ್ಯದರ್ಶಿಗಳು ಈ ಕುರಿತು ನಾಲ್ಕು ಮತ್ತು ನಾನು ಎರಡು ಸಭೆಗಳನ್ನು ನಡೆಸಿದ್ದೇನೆ.[ವಿಮಾನ ನಿಲ್ದಾಣಕ್ಕೆ ಸಂರ್ಪಕ ಕಲ್ಪಿಸುವ ಮಾರ್ಗ ನೀವೇ ಸೂಚಿಸಿ!]
* ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಬಿಎಂಪಿ 2010ರಲ್ಲಿ ಖಾಸಗಿ ಸಂಸ್ಥೆಗೆ ವಹಿಸಿತ್ತು. ಬಳಿಕ ಅದೇ ವರ್ಷ ಬಿಡಿಎಗೆ ಯೋಜನೆಯನ್ನು ವರ್ಗಾಯಿಸಲಾಗಿದೆ.
* ಉಕ್ಕು ಸೇತುವೆ ನಿರ್ಮಾಣ ಸಂಬಂಧ 2013ರಲ್ಲಿ ಮೊದಲ ಯೋಜನಾ ವರದಿ ಸಿದ್ಧವಾಯಿತು. ಅಂತಿಮ ಯೋಜನಾ ವರದಿ ತಯಾರಾಗಿದ್ದು 2015ರಲ್ಲಿ. ಜೊತೆಗೆ ಸಾಧ್ಯಾಸಾಧ್ಯತೆ ವರದಿಯೂ ವೆಬ್ಸೈಟ್ನಲ್ಲಿದೆ.[ಮೇಲ್ಸೇತುವೆ ವಿರುದ್ಧದ ಪ್ರತಿಭಟನೆ ಭರ್ಜರಿ ಯಶಸ್ವಿ]
* ಯೋಜನೆಗೆ ಸಂಬಂಧಿಸಿದಂತೆ ಸರಾಸರಿ ದರ 2014ರಲ್ಲಿ ಕಡಿಮೆ ಇತ್ತು. ಎರಡು ವರ್ಷದ ಬಳಿಕ ಟೆಂಡರ್ ಕರೆದಿರುವುದರಿಂದ ವೆಚ್ಚದ ಪ್ರಮಾಣ ಕೊಂಚ ಏರಿಕೆಯಾಗಿದೆ. ಉಕ್ಕು ಮಾರಾಟದ ಮೇಲಿನ ಮೌಲ್ಯವರ್ಧಿತ ತೆರಿಗೆ 5ರಿಂದ 14ಕ್ಕೆ ಏರಿಕೆಯಾಗಿರುವುದೂ ವೆಚ್ಚ ಹೆಚ್ಚಲು ಕಾರಣವಾಗಿದೆ.
* ವೆಬ್ಸೈಟ್ನಲ್ಲಿ ಎಲ್ಲರ ಅಭಿಪ್ರಾಯ ಕೇಳಲಾಗಿದೆ. ಯೋಜನೆಗೆ ಜಾಗತಿಕ ಟೆಂಡರ್ ಕರೆದಾಗ ನವಯುಗ ಮತ್ತು ಎಲ್ ಅಂಡ್ ಟಿ ಕಂಪನಿ ಭಾಗವಹಿಸಿತ್ತು. ಕಡಿಮೆ ಬಿಡ್ ದಾಖಲು ಮಾಡಿದ್ದು ಎಲ್ ಆಂಡ್ ಟಿ ಕಂಪನಿಯವರು. ಅವರು ದಾಖಲು ಮಾಡಿದ್ದ ಬಿಡ್ನಲ್ಲೂ ಮಾತುಕತೆ ನಡೆಸಿ ಕೊಂಚ ಕಡಿಮೆ ಮಾಡಲಾಗಿದೆ.
* ಉಕ್ಕು ಸೇತುವೆ ಜೊತೆಗೆ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕವನ್ನೂ ಕಲ್ಪಿಸಲಾಗುವುದು. ಅದಕ್ಕಾಗಿ 9 ಮಾರ್ಗಗಳನ್ನು ಗುರುತಿಸಿ ವೆಬ್ಸೈಟ್ಗೆ ಹಾಕಲಾಗಿದೆ. ಅದಕ್ಕೂ ಜನಾಭಿಪ್ರಾಯ ಕೇಳಲಾಗುವುದು.
* ಬೆಂಗಳೂರಿನಲ್ಲಿ ಹತ್ತು ಲಕ್ಷ ಗಿಡಗಳನ್ನು ನೆಡಲು ಬಿಬಿಎಂಪಿಗೆ ಸೂಚಿಸಲಾಗಿದೆ. ನಮಗೂ ಪರಿಸರದ ಬಗ್ಗೆ ಕಾಳಜಿ ಇದೆ. ಪರಿಸರ ಉಳಿಸುವ ಬಗ್ಗೆ ಬದ್ಧತೆ ಇದೆ. ಪರಿಸರ ನಾಶವಾಗಲಿ ಎಂದು ನಾವು ಹೇಳುವುದಿಲ್ಲ.
* ಎಸ್ಟೀಮ್ ಮಾಲ್ ಬಳಿ ಸ್ಕೈ ವಾಕ್ ನಿರ್ಮಾಣದಲ್ಲಿ ವಿಳಂಬವಾಗಿದೆ. ಭೂ ಸ್ವಾಧೀನದಲ್ಲಿ ಸಮಸ್ಯೆ ಉಂಟಾಗಿದ್ದು ಇದಕ್ಕೆ ಕಾರಣ. ಈಗ ಸಮಸ್ಯೆ ನಿವಾರಣೆಯಾಗಿದ್ದು, ಕಾಮಗಾರಿ ಆರಂಭವಾಗಲಿದೆ.