ಸಿಎಂರಿಂದ ಬಂಪರ್ ಕೊಡುಗೆ: 11 ಸಾವಿರ ಪೊಲೀಸರಿಗೆ ಬಡ್ತಿ
ಬೆಂಗಳೂರು, ಡಿಸೆಂಬರ್,7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪೊಲೀಸರಿಗೆ ಹೊಸ ವರ್ಷದ ಬಂಪರ್ ಕೊಡುಗೆ ನೀಡಿದ್ದಾರೆ. ರಾಜ್ಯದ 11 ಸಾವಿರ ಪೊಲೀಸ್ ಸಿಬ್ಬಂದಿಗೆ ಬಡ್ತಿ ಅವಕಾಶ ಸಿಗಲಿದೆ. ಪೇದೆಯಿಂದ ಮುಖ್ಯಪೇದೆ, ಮುಖ್ಯ ಪೇದೆಯಿಂದ ಎಎಸ್ ಐ, ಎಎಸ್ ಐ ಹುದ್ದೆಯಿಂದ ಪಿಎಸ್ ಐ ಹುದ್ದೆಗೆ ಬಡ್ತಿ ಪಡೆಯಲಿರುವ ಸಿಬ್ಬಂದಿ. ಬಡ್ತಿ ಆದೇಶ ಏಕ ಕಾಲಕ್ಕೆ ಹೊರ ಬೀಳಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಅವರ ಆದೇಶದ ಹಿನ್ನೆಲೆಯಲ್ಲಿ 11 ಸಾವಿರ ಪೊಲೀಸ್ ಸಿಬ್ಬಂದಿ ಕೆಲವೇ ದಿನಗಳಲ್ಲಿ ಬಡ್ತಿ ಪಡೆಯಲಿದ್ದಾರೆ. ಬಡ್ತಿ ಆದೇಶ ಪತ್ರಗಳನ್ನು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಸಿಬ್ಬಂದಿಗೆ ನೇರವಾಗಿ ವಿತರಿಸಲಿರುವುದು ಈ ಬಾರಿಯ ವಿಶೇಷ.[ಪೊಲೀಸರಿಗೆ ಇನ್ನು ಮುಂದೆ ವಾರದ ರಜೆ ಕಡ್ಡಾಯ: ಸಿದ್ದರಾಮಯ್ಯ]
ಸಕಾರಣ ಇಲ್ಲದೆ ಪೊಲೀಸ್ ಸಿಬ್ಬಂದಿಯ ಬಡ್ತಿ ತಡೆ ಹಿಡಿಯಬಾರದು ಎಂದು ಮುಖ್ಯಮಂತ್ರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದರು.
ಬಡ್ತಿ ಜೊತೆಗೆ ಸರ್ಕಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೇದೆಗಳು ಸೇರಿದಂತೆ 26702 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ ಹೆಗ್ಗಳಿಕೆಗೂ ಪೊಲೀಸ್ ಇಲಾಖೆ ಪಾತ್ರವಾಗಿದೆ. ಜೊತೆಗೆ ಕಳೆದ ಮೂರು ವರ್ಷದ ಅವಧಿಯಲ್ಲಿ ಹಲವಾರು ಸೌಲಭ್ಯಗಳನ್ನು ಇಲಾಖೆ ಪಡೆದುಕೊಂಡಿದೆ.