ಶುರುವಾಗುತ್ತಿದೆ ಬೆಂಗಳೂರು ಕೆರೆ ಉಳಿಸುವ ಅಭಿಯಾನ
ಸ್ಟೀಲ್ ಬ್ರಿಡ್ಜ್ ಬೇಡ (#SteelFlyoverBeda) ಅಭಿಯಾನ ಆರಂಭಿಸಿದ್ದ ತಂಡವೇ ಇದೀಗ ಯುನೈಟೆಂಡ್ ಬೆಂಗಳೂರು ಎಂಬ ಫೋರಮ್ ಅಡಿಯಲ್ಲಿ ಬೆಂಗಳೂರಿನ ಕೆರೆಗಳ ಸುಧಾರಣೆಗೆ ಹೋರಾಟ ನಡೆಸಲಿದೆ.
ಬೆಂಗಳೂರು, ಮೇ 12: ಕರ್ನಾಟಕ ಸರ್ಕಾರ ಉದ್ದೇಶಿಸಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆ ಬೆಂಗಳೂರಿಗರ ಹೋರಾಟದಿಂದಾಗಿ ಆರಂಭಕ್ಕೂ ಮುನ್ನವೇ ಮುರಿದುಬಿದ್ದಿರುವುದು ಹಳೇ ವಿಷಯ. ಸ್ಟೀಲ್ ಬ್ರಿಡ್ಜ್ ಬೇಡ (#SteelFlyoverBeda) ಅಭಿಯಾನ ಆರಂಭಿಸಿದ್ದ ತಂಡವೇ ಇದೀಗ ಯುನೈಟೆಂಡ್ ಬೆಂಗಳೂರು ಎಂಬ ಫೋರಮ್ ಅಡಿಯಲ್ಲಿ ಬೆಂಗಳೂರಿನ ಕೆರೆಗಳ ಸುಧಾರಣೆಗೆ ಹೋರಾಟ ನಡೆಸಲಿದೆ.
ಬೆಂಗಳೂರಿನ ಟೌನ್ ಹಾಲ್ ನಲ್ಲಿ ಮೇ 13 ಶನಿವಾರ ಈ ಕುರಿತು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ನಮ್ಮ ಕೆರೆಗಳನ್ನು ಮರುಪಡೆಯುವುದು ಮತ್ತು ಅವುಗಳ ರಕ್ಷಣೆ (Reclaiming and Protecting Our Lakes) ಎಂಬುದು ಈ ಕಾರ್ಯಕ್ರಮದಲ್ಲಿ ಚರ್ಚಿಸಲಿರುವ ವಿಷಯ.
ಸಿಟಿಜನ್ ಆಕ್ಷನ್ ಫೋರಮ್, ಸಿಟಿಜನ್ಸ್ ಫಾರ್ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್, ಫಾರ್ವರ್ಡ್ ಫೌಂಡೇಶನ್, ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್, ಪ್ರಜಾ ಮುಂತಾದ ನಾಗರಿಕ ಸಂಘಟನೆಗಳು ಯುನೈಟೆಂಡ್ ಬೆಂಗಳೂರು ಎಂಬ ಫೋರಮ್ ಅಡಿಯಲ್ಲಿ ಒಂದೆಡೆ ಸೇರಿ ಬೆಂಗಳೂರಿನ ಕೆರೆಗಳನ್ನು ಸಮಸ್ಯೆಯಿಂದ ಮುಕ್ತಗೊಳಿಸಲು ಪಣತೊಟ್ಟಿದ್ದಾರೆ.
ಮಾಲಿನ್ಯಗೊಂಡು, ಹಂತ ಹಂತವಾಗಿ ಸಾಯುತ್ತಿರುವ ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆಯನ್ನು ಉಳಿಸುವುದಕ್ಕೆ ಸರ್ಕಾರದ ಸಹಕಾರ ನಿರೀಕ್ಷಿಸುತ್ತ ಕೂತರೆ ಪ್ರಯೋಜನವಿಲ್ಲ ಎಂಬುದನ್ನು ಮನಗಂಡಿರುವ ಬೆಂಗಳೂರಿನ ಜನರು ಸ್ವ ಇಚ್ಛೆಯಿಂದ ಕೆರೆಗಳ ಅಭಿವೃದ್ಧಿಯತ್ತ ಚಿಂತಿಸುತ್ತಿದ್ದಾರೆ.
ಸ್ಟೀಲ್ ಬ್ರಿಡ್ಜ್ ಬೇಡ ಅಭಿಯಾನದ ಪ್ರಮುಖ ನಾಯಕರಾಗಿದ್ದ ಎನ್.ಎಸ್.ಮುಕುಂದ, ಪ್ರಕಾಶ್ ಬೆಳವಾಡಿ, ನರೇಶ್ ನರಸಿಂಹ, ಯಲ್ಲಪ್ಪ ರೆಡ್ಡಿ ಮತ್ತು ಶ್ರೀಧರ್ ಪಬ್ಬಿಶೆಟ್ಟಿ ಸೇರಿ ಬೆಂಗಳೂರು ಕೆರೆಗಳನ್ನು ಉಳಿಸುವ ಅಭಿಯಾನದ ಕುರಿತು ಜನರಿಗೆ, ಬೇರೆ ಬೇರೆ ಸಂಸ್ಥೆಗಳಿಗೆ ಮಾಹಿತಿ ನೀಡಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೇಸ್ವಾಮಿ ಸಹ ಇದರ ಭಾಗವಾಗುವ ನಿರೀಕ್ಷೆ ಇದೆ.