ಬೆಂಗಳೂರು ಸ್ಫೋಟ : ಮೆಹದಿ ಬಂಧನಕ್ಕೆ ಪ್ರತೀಕಾರವೆ?
ಬೆಂಗಳೂರು, ಡಿ. 29 : ಡಿಸೆಂಬರ್ 28ರಂದು ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹಿಂದೆ ಯಾರ ಕೈವಾಡವಿದೆ? ಇದಕ್ಕೂ ಮಲ್ಲೇಶ್ವರ ಸ್ಫೋಟಕ್ಕೂ ಹೋಲಿಕೆಯಿದೆಯೆ? ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಂಧಿತನಾದ ಐಎಸ್ಐಎಸ್ ಬೆಂಬಲಿಗ ಮೆಹದಿ ಮಸ್ರೂರ್ ಬಿಸ್ವಾಸ್ ಬಂಧನಕ್ಕೆ ಪ್ರತೀಕಾರವಾಗಿ ಬಾಂಬ್ ಸ್ಫೋಟ ಮಾಡಲಾಗಿದೆಯೆ?
ಈ ಎಲ್ಲ ಪ್ರಶ್ನೆಗಳನ್ನು ಮುಂದೆ ಇಟ್ಟುಕೊಂಡು ಹಲವಾರು ಸಾಧ್ಯತೆಗಳ ಬಗ್ಗೆ ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾಕತಾಳೀಯವೆಂದರೆ ಡಿಸೆಂಬರ್ 28ರಂದೇ 2005ರಲ್ಲಿ ಐಐಎಸ್ಸಿ ಮೇಲೆ ಉಗ್ರರ ದಾಳಿ ನಡೆಸಲಾಗಿತ್ತು. 1998ರಲ್ಲಿ ಕೋಯಮತ್ತೂರಿನಲ್ಲಿ ಮತ್ತು 2013ರ ಏಪ್ರಿಲ್ 17ರಂದು ಮಲ್ಲೇಶ್ವರದಲ್ಲಿ ನಡೆಸಲಾದ ಸ್ಫೋಟದ ಹಿಂದಿರುವವರೇ ಚರ್ಚ್ ಸ್ಟ್ರೀಟ್ ಸ್ಫೋಟದ ಹಿಂದಿರಬಹುದೆ ಎಂದು ಕೂಡ ಶಂಕಿಸಲಾಗಿದೆ.
ಚರ್ಚ್ ಸ್ಟ್ರೀಟ್ ನಲ್ಲಿ ಭಾನುವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆ ಭವಾನಿ ದೇವಿ ಅವರು ಅಂದು ರಾತ್ರಿಯೇ ಮಲ್ಯ ಆಸ್ಪತ್ರೆಯಲ್ಲಿ ಅಸುನೀಗಿದರು. ಅವರ ಸಂಬಂಧಿ ಕಾರ್ತಿಕ್ ಮತ್ತು ಗಾಯಗೊಂಡಿದ್ದ ಸಂದೀಪ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭವಾನಿ ಅವರ ದೇಹವನ್ನು ಪಡೆಯಲು ಅವರ ಪತಿ ಬಾಲನ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. [ಚರ್ಚ್ ಸ್ಟ್ರೀಟ್ ಸ್ಫೋಟಕ್ಕೆ ಮಹಿಳೆ ಬಲಿ]
ಬಂದಿತ್ತು ಉಗ್ರರಿಂದ ಬೆದರಿಕೆ : ಮೆಹದಿ ಮಸ್ರೂರ್ ಬಿಸ್ವಾಸ್ ಬಂಧನವಾದ ಮರುದಿನವೇ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಗೋಯೆಲ್ ಅವರಿಗೆ, 'ಬೆಂಗಳೂರಿನ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುತ್ತೇವೆ' ಎಂದು ಬೆದರಿಕೆ ಕರೆ ಬಂದಿತ್ತು. ಬೆದರಿಕೆ ಕರೆ ಬಂದ ನಂತರ ಎಲ್ಲೆಡೆ ಭದ್ರತೆಯನ್ನು ಬಿಗಿಪಡಿಸಲಾಗಿದೆ ಬೆಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದರು. ಆದರೂ, ಸ್ಫೋಟ ಸಂಭವಿಸಿದೆ.
ಆ ಸಮಯದಲ್ಲಿ, ಅಂತಹ ಯಾವುದೇ ಘಟನೆ ನಡೆಯುವ ಸಂಭವನೀಯತೆಯಿಲ್ಲ. ಜನರು ಯಾವುದೇ ಗಾಳಿಸುದ್ದಿಗಳಿಗೆ ಕಿವಿ ಕೊಡಬಾರದು ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದರು. ತನಿಖೆಯ ದಾರಿತಪ್ಪಿಸಲು ಮತ್ತು ಅನಗತ್ಯ ಪ್ರಚಾರ ಗಿಟ್ಟಿಸಲು ಇಂಥ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದರು. ಆದರೆ, ಚರ್ಚ್ ಸ್ಟ್ರೀಟ್ ಸ್ಫೋಟ ಸಂಭವಿಸಿದ ದಿನವೇ, ಮೆಹದಿ ಬಂಧನದ ನಂತರ ಬೆದರಿಕೆ ಬಂದಿದ್ದನ್ನು ಸಿದ್ದರಾಮಯ್ಯನವರೇ ದೃಢಪಡಿಸಿದ್ದರು. [ಈವರೆಗೆ ಐದು ಬಾರಿ ಬೆಂಗಳೂರಿನಲ್ಲಿ ಸ್ಫೋಟ]
ಸಿಮಿ ಉಗ್ರ ಕೈವಾಡವೆ? : ನಿಷೇಧಿತ ಉಗ್ರ ಸಂಘಟನೆಯಾದ ಸಿಮಿಗೆ ಸೇರಿದ ಮೆಹಬೂಬ್, ಅಬು ಫೈಸಲ್, ಅಮ್ಜದ್, ಅಸಲಮ್, ಏಜಾಜ್ ಮತ್ತು ಝಾಕಿರ್ ಮಧ್ಯಪ್ರದೇಶದ ಖಾಂಡ್ವಾ ಜೈಲಿನಿಂದ ಕಳೆದ ವರ್ಷ ತಪ್ಪಿಸಿಕೊಂಡಿದ್ದಾರೆ. ಚೆನ್ನೈ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದ ಹಿಂದೆ ಇವರ ಕೈವಾಡವಿತ್ತು. ಬೆಂಗಳೂರು ವಿಧ್ವಂಸಕ ಕೃತ್ಯದ ಹಿಂದೆಯೂ ಇವರ ಕೈವಾಡವಿರಬಹುದೆ ಎಂದು ಶಂಕಿಸಲಾಗಿದೆ. ಹಲವಾರು ದುರ್ಘಟನೆಗಳಿಗೆ ಇವರು ಕಾರಣವಾಗಿದ್ದರೂ ಇನ್ನೂ ಇವರನ್ನು ಬಂಧಿಸಲು ಸಾಧ್ಯವಾಗಿಲ್ಲ.
ಅಲ್ ಉಮಾಹ್ ಕೈವಾಡ? : ಮಲ್ಲೇಶ್ವರದ ಬಿಜೆಪಿ ಕಚೇರಿಯ ಮುಂದೆ 2013ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟಕ್ಕೂ ಚರ್ಚ್ ಸ್ಟ್ರೀಟ್ ಸ್ಫೋಟಕ್ಕೆ ಸಾಮ್ಯತೆ ಕಂಡುಬಂದಿದೆ. ಮಲ್ಲೇಶ್ವರ ಸ್ಫೋಟದ ಹಿಂದೆ ತಮಿಳುನಾಡು ಮೂಲದ ಅಲ್ ಉಮಾಹ್ ಕೈವಾಡವಿರುವುದು ಸಾಬೀತಾಗಿತ್ತು. ಅಷ್ಟೊಂದು ಪ್ರಬಲವಲ್ಲದ ಅಲ್ ಉಮಾಹ್ ಸಂಘಟನೆ ತನ್ನ ಅಸ್ತಿತ್ವವನ್ನು ತೋರಿಸಲು ಮತ್ತು ತಾನೆಷ್ಟ ಬಲಿಷ್ಠ ಎಂದು ತೋರಿಸಲು ಇಂಥ ಸ್ಫೋಟಗಳನ್ನು ನಡೆಸುತ್ತಿರುವ ಸಂಭವನೀಯತೆಯಿದೆ. [ಭಾನುವಾರ ಸಂಜೆ ಬೆಂಗಳೂರಲ್ಲಿ ಸ್ಫೋಟ]