ಫಾ. ಚಸರಾ ಸಾವಿಗೆ ಕೊಲೆ ಪ್ರಕರಣದ ಸುಳ್ಳು ಆರೋಪವೇ ಕಾರಣ
ಬೆಂಗಳೂರು, ಮಾರ್ಚ್,17: ಚಾಮರಾಜಪೇಟೆ ಚರ್ಚಿನ ಫಾದರ್ ಚಸರಾ ಅವರ ಅಂತಿಮ ದರ್ಶನ ಪಡೆದ ಅಭಿಮಾನಿಗಳು ಫಾದರ್ ಕೆ.ಜೆ ಥಾಮಸ್ ಕೊಲೆ ಪ್ರಕರಣದ ಮರುತನಿಖೆಗೆ ಅನುಮತಿ ನೀಡುವವರೆಗೂ ಶವಸಂಸ್ಕಾರಕ್ಕೆ ಆಸ್ಪದ ಕೊಡುವುದಿಲ್ಲ ಎಂದು ಪ್ರತಿಭಟನೆ ಕೈಗೊಂಡಿದ್ದು, ಕೊನೆಗೂ ಗುರುವಾರ ಮಧ್ಯಾಹ್ನ ಚಸರಾ ಅವರ ಅಂತ್ಯ ಸಂಸ್ಕಾರ ನಡೆಸಲು ಕ್ರೈಸ್ತ ಸಂಘ ನಿರ್ಧರಿಸಿದೆ.
ಚಾಮರಾಜಪೇಟೆ ಚರ್ಚಿನ ಧರ್ಮಗುರುಗಳಾದ ಫಾದರ್ ಚಸರಾ (ಚೌರಪ್ಪ ಸೆಲ್ವರಾಜ್) ಅವರು ಮಲ್ಲೇಶ್ವರದ ಸೆಮಿನಾರ್ ಹಾಲ್ ರೆಕ್ಟರ್ ಕೆ.ಜೆ ಥಾಮಸ್ ಕೊಲೆ ಪ್ರಕರಣದ ಆರೋಪಕ್ಕೆ ಬೇಸತ್ತು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರ ಅಭಿಮಾನಿಗಳು ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ಕೈಗೊಂಡಿದ್ದರು.[ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಫಾದರ್ ಚಸರಾ ನಿಧನ]
ಏನಿದು ಪ್ರಕರಣ?
2013ರ ಮಾರ್ಚ್ 31 ರಂದು ಮಲ್ಲೇಶ್ವರದ ಸೆಮಿನಾರ್ ಹಾಲ್ ರೆಕ್ಟರ್ ಕೆ.ಜೆ ಥಾಮಸ್ ಕೊಲೆ ನಡೆದಿತ್ತು. ಈ ಸಂಬಂಧ ಕೆಲವು ತಿಂಗಳ ಹಿಂದೆ ಫಾದರ್ ಚಸರಾ ಅವರ ಹೆಸರು ಸೇರಿದಂತೆ 7 ಮಂದಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅಲ್ಲದೇ ಕನ್ನಡದಲ್ಲಿ ಪ್ರಾರ್ಥನೆ ಹಾಗೂ ಅನುದಾನ ಹಣದ ದುರುಪಯೋಗ ಇವುಗಳನ್ನು ವಿರೋಧಿಸಿದ ಚಸರಾ ಅವರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಬಿಷಪ್ ಬರ್ನಾರ್ಡ್ ಮೊರಾಸ್ ಹಾಗೂ ಸಚಿವ ಕೆ.ಜೆ ಜಾರ್ಜ್ ಅವರ ಕುತಂತ್ರವೇ ಇದಕ್ಕೆ ಕಾರಣ ಎಂದು ಚಸರಾ ಅಭಿಮಾನಿ ಬಳಗದ ಮುಖಂಡ ಬಿ. ಪಾರ್ವತೇಶ್ ಆರೋಪಿಸಿದ್ದಾರೆ.
ಫಾದರ್ ಚಸರಾ ಬರೆದ ಪತ್ರದಲ್ಲೇನಿದೆ?
ಚಸರಾ ಅವರು ತಾವು ಸಾಯುವ ಮುನ್ನ ಧರ್ಮಗುರು ಬರ್ನಾರ್ಡ್ ಮೊರಾಸ್ ಗೆ ನನ್ನ ಮೃತದೇಹವನ್ನು ನೋಡುವ ಅವಕಾಶ ಕೊಡಬೇಡಿ. ಸುಳ್ಳು ಆರೋಪ ಎದುರಿಸುತ್ತಿರುವ ಎಲ್ಲರನ್ನು ದೇವರು ಕಾಪಾಡಲಿ ಎಂದು ಬರೆದಿದ್ದಾರೆ.