ತರಕಾರಿ ಕೊಳ್ಳುವ ಮುನ್ನ ಚಿಲ್ರೆ ಇದೆಯಾ ನೋಡ್ಕೊಳ್ಳಿ!
ಬೆಂಗಳೂರು, ನವೆಂಬರ್ 09 : ಬೆಳಿಗ್ಗೆ ಮನೇಲಿ ತಿಂಡಿ ಮಾಡಿಲ್ಲ ಅಂತ ಶಿಸ್ತಾಗಿ ಹೋಟೆಲಿಗೆ ಹೋಗ್ತೀರಿ, ಒಂದು ಕೇಸರು ಬಾತು, ಒಂದು ಗರಮಾಗರಂ ಮಸಾಲೆ ದೋಸೆ, ಒಂದು ಸ್ಟ್ರಾಂಗ್ ಕಾಫಿ ಹೀರಿ... ವೇಟರ್ ಅಂತ ಕರೀತೀರಿ... ವೇಟರ್ ಮಟ್ಟಸವಾಗಿ ನೂರಾಇಪ್ಪತ್ತೈದು ರುಪಾಯಿ ಬಿಲ್ ತಂದು ಇಡ್ತಾನೆ... ನೀವು ಐನೂರು ರುಪಾಯಿ ತೆಗೆದು ಆತನ ಕೈಗಿಡ್ತೀರಿ!
ಐನೂರಕ್ಕೂ ಹೊರತಾಗಿ ಬೇರೆ ಚಿಲ್ಲರೆ ಇದ್ದರೆ ನೀವು ಬದುಕಿದಿರಿ, ಇಲ್ಲದಿದ್ದರೆ ನಿಮ್ಮ ಗ್ರಹಚಾರ ನೆಟ್ಟಗಿರಲ್ಲ ಅಂತಾನೇ ಅರ್ಥ. ಒಂದು ಬೇರೆ ಎಲ್ಲಾದರೂ ಚಿಲ್ಲರೆ ಹುಡುಕಿ ಹೋಟೆಲಿಗೆ ನೀಡಬೇಕು, ಅಥವಾ ಹೋಟೆಲಿಗೆ ಕಾಲಿಡುವ ಮುನ್ನವೇ ಚಿಲ್ಲರೆ ಕಾಸಿಟ್ಟುಕೊಂಡು ಹೋಗಬೇಕು!
ಇದು ಉತ್ಪ್ರೇಕ್ಷೆ ಅನ್ನಿಸಿದರೂ ಸತ್ಯ. ಐನೂರು ಮತ್ತು ಸಾವಿರ ರುಪಾಯಿ ನಿಷೇಧಿಸಿದ್ದರಿಂದ ಬೆಂಗಳೂರಿನ ಜನತೆ ಸಾಕಷ್ಟು ಪ್ರಾಕ್ಟಿಕಲ್ ಪ್ರಾಬ್ಲಂಗಳನ್ನು ಅನುಭವಿಸುತ್ತಿದ್ದಾರೆ. ಊರಿಂದ ಬಂದವರು, ಪೆಟ್ರೋಲಿಗಾಗಿ ಕ್ಯೂ ನಿಂತವರು, ತರಕಾರಿ ತರಲು ಕೈಚೀಲ ಹಿಡಿದು ಬಂದವರು, ಸಿಗರೇಟಿಗೆ ಕೈಚಾಚಿದವರು... ಇವರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ.
ಜಯನಗರ ಶಾಪಿಂಗ್ ಕಾಂಪ್ಲೆಕ್ಸಿನಲ್ಲಿ ಬುಧವಾರ ಬೆಳಿಗ್ಗೆ ಕಂಡುಬಂದ ದೃಶ್ಯವಿದು. ವ್ಯಾಪಾರಿಯಿಂದ ಒಂದೂವರೆ ಕೆಜಿ ಈರುಳ್ಳಿ, ಅರ್ಧ ಕೆಜಿ ಕ್ಯಾರೆಟ್, ನೂರು ಗ್ರಾಂ ಮೆಣಸಿನಕಾಯಿ ಕೊಂಡವರು, ಚಿಲ್ಲರೆ ಇಲ್ಲದ್ದರಿಂದ ಕೊಂಡದ್ದನ್ನೆಲ್ಲ ಅಲ್ಲಿಯೇ ಪಿಶಿವಿಯಲ್ಲಿಟ್ಟು ಹೋಗಿದ್ದಾರೆ. ಐನೂರು ರುಪಾಯಿ ವ್ಯಾಪಾರಿ ಪಡೆಯಲ್ಲ, ಇವರ ಬಳಿ ಚಿಲ್ಲರೆ ಇರಲ್ಲ.
ವ್ಯಾಪಾರಿ ಮುನಿಸ್ವಾಮಿ, "ಮೋದಿ ಮಾಡಿದ್ದು ಒಳ್ಳೇದೇ. ಆದರೆ, ಇದರಿಂದ ಸದ್ಯಕ್ಕೆ ಎಲ್ಲರಿಗೂ ತೊಂದರೆಯಾಗಿದೆ. ವ್ಯಾಪಾರವೇ ನಡೆಯುತ್ತಿಲ್ಲ. ತರಕಾರಿ ತಂದು ಹಾಕಿದವನಿಗೆ ದುಡ್ಡನ್ನು ನೀಡಲೂ ಆಗುತ್ತಿಲ್ಲ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ತುಂಬಾ ತೊಂದರೆ" ಎಂದು ಒನ್ಇಂಡಿಯಾ ಜೊತೆ ಅಳಲು ತೋಡಿಕೊಂಡರು.
ಇನ್ನು ಪೆಟ್ರೋಲ್ ಬಂಕಿನಲ್ಲಿಯೂ ಜನರು ಪರದಾಡುತ್ತಿದ್ದಾರೆ.