ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ತರವಲ್ಲ: ಜೆಡಿಎಸ್
ಬೆಂಗಳೂರು ಫೆ. 25 : ಯಾವುದೇ ಧರ್ಮವನ್ನು ಟೀಕಿಸಿ ಅವರ ಭಾವನೆಗಳಿಗೆ ಧಕ್ಕೆ ತರುವಂಥ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಜಾತ್ಯತೀತ ಜನತಾದಳ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದು ಧರ್ಮದ ಭಗವದ್ಗೀತೆಯ ಕುರಿತಾದ ಕೆಲ ಅಭಿಪ್ರಾಯಗಳು ಸಮಾಜ ಶಾಂತಿ ಕದಡುವತ್ತ ಸಾಗುತ್ತಿದೆ. ಪ್ರತಿಯೊಂದು ಧರ್ಮದವರಿಗೆ ಆಯಾ ಧರ್ಮದ ಗ್ರಂಥಗಳು ಭಾವನಾತ್ಮಕವಾಗಿ ಮುಖ್ಯವಾಗಿರುತ್ತದೆ. ಹಾಗಾಗಿ ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದೆ.[ಭಗವದ್ಗೀತೆ ಸುಡಲೆತ್ನಿಸಿದ ಪ್ರೊ. ಭಗವಾನ್ ವಿರುದ್ಧ ದೂರು]
ಸಂವಿಧಾನದ ಎಲ್ಲ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಕೇವಲ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವಿಕೆ ಮಾತ್ರವಲ್ಲ. ಇತರರ ಹಕ್ಕನ್ನು ಗೌರವಿಸುವುದಾಗಿದೆ ಎಂದು ಹೇಳಿದೆ.
ಧರ್ಮದ ಆಯ್ಕೆ ವ್ಯಕ್ತಿಯ ಸ್ವಾತಂತ್ರ್ಯವಾಗಿರುತ್ತದೆ. ಆದರೆ ಧರ್ಮದ ಹೆಸರಿನಲ್ಲಿ ಇನ್ನೊಂದು ಧರ್ಮವನ್ನು ಟೀಕಿಸುವ ಅಥವಾ ಅವರ ಭಾವನೆಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಬಾರದು. ಯಾವುದೇ ಗ್ರಂಥಗಳನ್ನು ಒಪ್ಪುವುದು ಬಿಡುವುದು ಅವರ ವ್ಯಕ್ತಿಗತ ವಿಚಾರಗಳು. ಯಾವುದೇ ಒಂದು ಗ್ರಂಥದಲ್ಲಿ ನಾವು ಒಪ್ಪಲಾಗದ ವಿಚಾರಗಳಿದ್ದಾಕ್ಷಣ ಅದನ್ನು ತೆಗಳುವ ಅಥವಾ ಸುಡುವ ವಿಚಾರಗಳು ಸಮರ್ಥನೀಯವಲ್ಲ. ಇದು ಸಮಾಜದ ಅಶಾಂತಿಗೆ ಕಾರಣವಾಗಬಹುದು ಎಂದು ಹೇಳಿದೆ.[ರಾಜ್ಯ ರಾಜಕಾರಣಕ್ಕೆ ವಾಮಾಚಾರ ಕಳಂಕ ತಾಗಿದ್ದು ಹೇಗೆ?]
ವಿಚಾರವಾದಿಗಳು ತಮ್ಮ ಅನಿಸಿಕೆಗಳಿಗೆ ಇತಿಮಿತಿಗಳನ್ನು ಹಾಕಿಕೊಳ್ಳುವುದು ಒಳ್ಳೆಯದು. ಯಾವುದೇ ಒಂದು ಚರ್ಚೆ ಆರೋಗ್ಯಕರವಾದಂತಹ ವಾತಾವರಣದಲ್ಲಿ ನಡೆಯಬೇಕು. ಸುಡುವಿಕೆ, ಹೊಡೆಯುವಿಕೆ ಮತ್ತು ಕೊಲ್ಲುವಿಕೆ ಮಾನವೀಯ ಧರ್ಮಗಳನ್ನು ಮೀರಿದಂತಹ ಆಚಾರಗಳು. ಯಾವ ಧರ್ಮವೂ ಬಲಪ್ರಯೋಗಕ್ಕೆ ಒತ್ತನ್ನು ನೀಡುವುದಿಲ್ಲ. ಸಾಮಾಜಿಕ ಚಿಂತನೆ ಹೆಚ್ಚಿಸುವಂಥ ವಿಚಾರಧಾರೆಗಳು ಹರಿದು ಬರಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ರಮೇಶ್ ಬಾಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.