ಬಸವನಗುಡಿ ಅನಂತವನದಲ್ಲಿ 56 ವಿಭಿನ್ನ ಸಸ್ಯಗಳು
ಬೆಂಗಳೂರು, ಸೆಪ್ಟೆಂಬರ್. 24: ಬಸವನಗುಡಿಯ ಸರ್ಕಾರಿ ಶಾಲೆಯ ಆವರಣದಲ್ಲಿ 56 ವಿಶೇಷ ಜಾತಿಯ ಗಿಡಗಳನ್ನು ನೆಟ್ಟು ಅನಂತವನ ನಿರ್ಮಾಣ ಮಾಡಲಾಯಿತು. ಗಿಡ ನೆಡುವ ಮೂಲಕ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಿಕೊಂಡರು.
ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಪ್ರತಿ ವರ್ಷ 20 ಲಕ್ಷದಂತೆ ಒಟ್ಟು 1 ಕೋಟಿ ಗಿಡಗಳನ್ನು ನೆಟ್ಟು ಪೋಷಿಸಬೇಕಾಗಿದೆ. ಆಗ ಬೆಂಗಳೂರು 50 ರ ದಶಕದ 60 ರ ದಶಕದ ತಂಪಾದ ಬೆಂಗಳೂರು ಆಗಬಹುದು. ಪಶು-ಪಕ್ಷಿಗಳು ಎಲ್ಲ ಜೀವಜಂತುಗಳು ಸಹ ಆನಂದಪಡಬಹುದು ಎಂದು ಕೇಂದ್ರ ಸಚಿವರು ಹೇಳಿದರು.[ಹಸಿರು ತೇರು ಎಳೇಯೋಣ ಬನ್ನಿ]
ನಮ್ಮ ಮುಂದಿನ ಪೀಳಿಗೆ ಬೆಂಗಳೂರಿನಲ್ಲಿ 40 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಬದುಕುವಂತಾಗಬಾರದು, ಹೊಗೆ, ಧೂಳನ್ನು ಸೇವಿಸಿ ಅನಾರೋಗ್ಯಪೀಡಿತರಾಗಬಾರದು ಎಂಬ ಬಯಕೆ ಇದ್ದರೆ ನಾವು 1 ಕೋಟಿ ಮರ ಬೆಳೆಸುವ ಕಾರ್ಯದಲ್ಲಿ ಕೈಜೋಡಿಸಬೇಕು. ಇದು ಬಹುದೊಡ್ಡ ಅಭಿಯಾನವಾಗಿ ಬೆಳೆಯಬೇಕು ಎಂದು ಹೇಳಿದರು.[ಪ್ರಕೃತಿ ವಿಸ್ಮಯ : ಬೇವಿನ ಮರ ಹಾಲು ಸುರಿಸುತ್ತಿದೆ?]
ನಾನು ವಾನಪ್ರಸ್ಥದ ಬದಲು ಜನಪ್ರಸ್ಥನಾಗಲು ಇಚ್ಛಿಸುತ್ತೇನೆ. ಅಂದರೆ ವನಕ್ಕೆ ಹೋಗಿ ಜೀವಿಸುವುದಲ್ಲ, ಬದಲಾಗಿ ಜನರ ನಡುವೆ ಅವರ ಸೇವೆ ಮಾಡುತ್ತ ಜೀವಿಸಬೇಕು. 57 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಒಂದು ಸಂಕಲ್ಪ ತೊಡಲು ಬಯಸುತ್ತೇನೆ. ಈಗ ನನ್ನ ವೈಯಕ್ತಿಕ ಕನಸು, ಆಸೆ, ಆಕಾಂಕ್ಷೆಗಳೆಂಬುದು ಯಾವುದೂ ಇಲ್ಲ ಜನರ ಒಳಿತಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.ಗಿಡನೆಡುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಅವರ ಮಾತುಗಳನ್ನು ಒಂದೊಂದಾಗಿ ಆಲಿಸೋಣ..
ಆರ್.ಅಶೋಕ್
ಅನಂತಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಸದಾ ದುಡಿಯುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು, ಮೆಟ್ರೋ ಕಾಮಗಾರಿ ಶೀಘ್ರವಾಗಲು ಅವರು ನೀಡಿದ ಕೊಡುಗೆ ಸ್ಮರಿಸಬೇಕಿದೆ.
ಮಾಜಿ ಸಚಿವ ವಿ.ಸೋಮಣ್ಣ
ಆದಿಚುಂಚನಗಿರಿಯ ಹಿರಿಯ ಸ್ವಾಮಿಗಳಾದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ದೊಡ್ಡ ಪ್ರಮಾಣದಲ್ಲಿ ರಾಜ್ಯದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಾಕಿಕೊಂಡಾಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರು ಹಣಕಾಸು ನೆರವು ನೀಡಿದ್ದನ್ನು ಯಾರೂ ಮರೆಯುವುದಿಲ್ಲ.
ಕಾಂಗ್ರೆಸ್ ನಾಯಕ ಎಂ.ವಿ.ರಾಜಶೇಖರನ್
ನಾನು ಕಾಂಗ್ರೆಸ್, ಅನಂತಕುಮಾರ್ ಅವರು ಬಿಜೆಪಿಗೆ ಸೇರಿದವರು. ಎರಡೂ ಪಕ್ಷಗಳು ಎಣ್ಣೆ-ಸೀಗೇಕಾಯಿ ಇದ್ದಂತೆ. ಆದರೆ ನಾನು ಅನಂತಕುಮಾರ್ ಅವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಲು ಬಂದಿದ್ದೇನೆ. ಅವರ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಮೆಚ್ಚುತ್ತೇನೆ. ಗುಣಕ್ಕೆ ಮತ್ಸರವೇಕೆ ಎಂದರು.
ವಿಧಾನಪರಿಷತ್ ಸದಸ್ಯ ಪ್ರೊ.ಪಿ. ವಿ. ಕೃಷ್ಣಭಟ್
ಅರಂಭದ ದಿನಗಳಿಂದಲೂ ಅನಂತಕುಮಾರ್ ಅವರು ಅತ್ಯಂತ ಕ್ರಿಯಾಶೀಲರು ಮತ್ತು ಪ್ರತಿಭಾವಂತರು. ಅಂದಿನಿಂದ ಇಂದಿನವರೆಗೂ ಅವರು ಅದನ್ನು ಉಳಿಸಿಕೊಂಡು ಬಂದಿದ್ದಾರೆ. ಅವರು ಕೈಗೊಂಡಿರುವ ಸಾಮಾಜಿಕ ಕೆಲಸಕ್ಕೆ ಅವರ ಪತ್ನಿ ತೇಜಸ್ವಿನಿಯವರೂ ಕೈಜೋಡಿಸಿದ್ದಾರೆ.
ಭಾರತಿ ವಿಷ್ಣುವರ್ಧನ್
ಅನಂತಕುಮಾರ್ ಅವರು ನಮ್ಮ ಕುಟುಂಬಕ್ಕೆ ಬಹಳ ಹತ್ತಿರದವರು. ಅವರು ಹಸಿರು ಬೆಂಗಳೂರಿಗಾಗಿ ಪ್ರಯತ್ನ ನಡೆಸಿರುವುದು ಶ್ಲಾಘನೀಯ ಸಂಗತಿ. ನಾವೂ ರೋಟರಿ ಕ್ಲಬ್ ಮೂಲಕ ಒಂದು ಲಕ್ಷ ಗಿಡ ನೆಡುವ ತೀರ್ಮಾನ ತೆಗೆದುಕೊಂಡಿದ್ದೇವೆ.