ಉಗ್ರ ದಾಳಿ : ಶಾಲೆ ಅಳವಡಿಸಬೇಕಾದ ಸುರಕ್ಷತಾ ಕ್ರಮ
ಬೆಂಗಳೂರು, ಡಿ. 19: ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆಯ ನೂರಾರು ಮಕ್ಕಳನ್ನು ತಾಲಿಬಾನ್ ಅಮಾನುಷವಾಗಿ ಹತ್ಯೆಗೈದ ಪ್ರಕರಣದಿಂದ ಭಾರತ ಸರ್ಕಾರ ಎಚ್ಚೆತ್ತುಕೊಂಡಿದೆ.
ಉಗ್ರವಾದಿಗಳು ಅಥವಾ ಉಗ್ರ ಸಂಘಟನೆಗಳ ಪರ ಒಲವು ಹೊಂದಿರುವ ಯುವಕರಿಗೆ ಶಾಲೆ ಮಕ್ಕಳು ಸುಲಭದ ಗುರಿಯಾಗಿದ್ದಾರೆ. ಭಾರತದ ಕೆಲವೆಡೆ ನಕ್ಸಲೀಯರು ಶಾಲೆಗಳನ್ನೇ ಗುರಿಯಾಗಿಸಿಕೊಂಡಿದ್ದು ಕಂಡುಬಂದಿದೆ. ಆದ್ದರಿಂದ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಂಟೆಲಿಜೆನ್ಸ್ ಬ್ಯೂರೊ ವರದಿಯಲ್ಲಿ ಹೇಳಿದೆ. [ಮಕ್ಕಳ ಸುರಕ್ಷೆಗೆ ಸರ್ಕಾರದ ಮಾರ್ಗಸೂಚಿ]
ಇಂಟೆಲಿಜೆನ್ಸ್ ಬ್ಯೂರೊ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸ್ಪಷ್ಟ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಈ ಕೆಳಗಿನಂತಿವೆ. [ಪೊಲೀಸ್ ಆಯುಕ್ತರು ಸೂಚಿಸಿದ ಖಡಕ್ ಮಾರ್ಗಸೂಚಿ]
- ಎಲ್ಲ ಶಾಲೆಗಳಲ್ಲೂ ಕಾಂಪೌಂಡ್ ಗೋಡೆ ಇರಲೇಬೇಕು
- ಕನಿಷ್ಠ ಮೂರು ಗೇಟ್ಗಳಿರಬೇಕು. ಪ್ರತಿ ಗೇಟ್ನಲ್ಲೂ ಗಾರ್ಡ್ ಇರಬೇಕು.
- ಪ್ರತಿ ಗೇಟ್ನಿಂದ ಶಾಲೆಗೆ ಸಂಪರ್ಕ ಹೊಂದಿರುವ ಟೆಲಿಫೋನ್ ಇರಬೇಕು.
- ವೈರ್ಲೆಸ್ ಸಂಪರ್ಕ ಸಾಧವನ್ನು ಗಾರ್ಡ್ಗಳಿಗೆ ನೀಡಬೇಕು. [ಉಗ್ರರ ದಾಳಿಗೆ ನೂರಾರು ಮಕ್ಕಳು ಬಲಿ]
- ಪ್ರತಿ ಶಾಲೆಗಳಲ್ಲಿಯೂ ಸಿಸಿಟಿವಿ ಅಳವಡಿಸುವುದು ಕಡ್ಡಾಯ. ಸಿಸಿಟಿವಿಯನ್ನು ಶಾಲೆ ಒಳಗೆ ಹಾಗೂ ಹೊರಗೆ, ಇದಕ್ಕಿಂತ ಮುಖ್ಯವಾಗಿ ಪ್ರವೇಶ ದ್ವಾರದಲ್ಲಿ ಅಳವಡಿಸಬೇಕು.
- ಸಾರ್ವಜನಿಕ ಘೋಷಣೆ ಸೌಲಭ್ಯ ಅಳವಡಿಸಬೇಕು.
- ನಿರಂತರವಾಗಿ ಅಣಕು ಕಾರ್ಯಾಚರಣೆಗಳನ್ನು ನಡೆಸಬೇಕು.
- ಅಪಹರಣ ಸಂದರ್ಭಗಳನ್ನು ನಿಭಾಯಿಸುವ ಕುರಿತು ಗಾರ್ಡ್ಗಳಿಗೆ ತರಬೇತಿ ನೀಡಬೇಕು.
- ಆಕ್ರಮಣ ನಡೆದಾಗ ಮಕ್ಕಳನ್ನು ಸ್ಥಳಾಂತರಿಸುವುದು ಹಾಗೂ ಶಾಲೆಯ ಗೇಟ್ ಮುಚ್ಚುವುದು ಕಡ್ಡಾಯ.
- ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿದ ಅಲಾರ್ಮ್ಗಳನ್ನು ಅಳವಡಿಸಬೇಕು.
- ಇಂತಹ ಪರಿಸ್ಥಿತಿಗಳನ್ನು ನಿಯಂತ್ರಿಸುವ ಕುರಿತು ಶಿಕ್ಷಕರಿಗೆ ತರಬೇತಿ ನೀಡಬೇಕು. [ಪಾಲಕರ ಮೇಲಿನ ಸೇಡಿಗೆ ಮಕ್ಕಳನ್ನು ಕೊಂದರಂತೆ]
- ಆಕ್ರಮಣ ನಡೆದಾಗ ಮಕ್ಕಳನ್ನು ಕಾಪಾಡುವುದು ಮುಖ್ಯ. ಈ ಸಂದರ್ಭದಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿ ಕುರಿತು ಶಿಕ್ಷಕರಿಗೆ ತರಬೇತಿ ನೀಡಬೇಕು.
- ಗುಂಡಿನ ದಾಳಿ ನಡೆದಾಗ ಮಕ್ಕಳಿಗೆ ನೆಲದ ಮೇಲೆ ಮಲಗಲು ತಿಳಿಸಬೇಕು.
- ಮಕ್ಕಳಿಗೆ ತಪ್ಪಿಸಿಕೊಳ್ಳಲು ಸುರಕ್ಷಾ ಮಾರ್ಗಗಳನ್ನು ನಿರ್ಮಿಸಬೇಕು.