ಸಿಸಿಬಿ ಪೊಲೀಸರ ಮುಂದೆ ಕಾಶಪ್ಪನವರ್ ಹೇಳಿದ್ದೇನು?
ಬೆಂಗಳೂರು, ಜು. 8 : ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಸೋಮವಾರ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಅತ್ತ ಸೆಷನ್ ನ್ಯಾಯಾಲಯ ಶಾಸಕರ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದ ಹಿನ್ನಲೆಯಲ್ಲಿ ಶಾಸಕರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಆಗಮಿಸಿದ್ದರು. ಸಿಸಿಬಿ ಎಸಿಪಿ ರವಿಕುಮಾರ್ ನೇತೃತ್ವದ ತಂಡ ಸುಮಾರು ನಾಲ್ಕುವರೆ ತಾಸು ಶಾಸಕರ ವಿಚಾರಣೆ ನಡೆಸಿ, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದರು.
ಗಲಾಟೆ ನಡೆದ ದಿನ ನನ್ನ ಹುಟ್ಟುಹಬ್ಬವಿತ್ತು. ಆದ್ದರಿಂದ, ಕುಟುಂಬದ ಸದಸ್ಯರೊಂದಿಗೆ ಸ್ಕೈಬಾರ್ ಗೆ ಹೋಗಿದ್ದೆವು. ಬಾರ್ ನ ಮತ್ತೂಂದು ಟೇಬಲ್ ನಲ್ಲಿ ಸೋಮಶೇಖರಗೌಡ ಇದ್ದರು. ಸೋಮಶೇಖರ ಗೌಡ ರೌಡಿಶೀಟರ್ ಎಂಬುದು ನನಗೆ ಗೊತ್ತಿಲ್ಲ. ಅವರ ಪರಿಚಯವೂ ಇಲ್ಲ. ಆ ಸಂದರ್ಭದಲ್ಲಿ ನಡೆದ ಗಲಾಟೆಗೂ ನನಗೂ ಸಂಬಂಧವಿಲ್ಲ ಎಂದು ಶಾಸಕರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. [ಕೂಡಲ ಸಂಗಮನ ಆಣೆ ತಪ್ಪೇ ಮಾಡಿಲ್ಲ]
70 ಪ್ರಶ್ನೆಗಳು : ಸುಮಾರು ನಾಲ್ಕುವರೆ ತಾಸಿನ ವಿಚಾರಣೆ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ 70 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ ಶಾಸಕರು, ತಮ್ಮದೇನು ತಪ್ಪಿಲ್ಲ, ಪೊಲೀಸರ ಮೇಲೆ ತಾವು ಹಲ್ಲೆ ಮಾಡಿಲ್ಲ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. [ಸೋಮೇಗೌಡ ಯಾರು?]
ನ್ಯಾಯ ಸಿಗುವ ಭರವಸೆ ಇದೆ : ಸಿಸಿಬಿ ಪೊಲೀಸರ ವಿಚಾರಣೆ ನಂತರ ವಿಧಾನಸೌಧಕ್ಕೆ ಆಗಮಿಸಿದ ಕಾಶಪ್ಪನರ್ ಮಾಧ್ಯಮಗಳೊಂದಿಗೆ ಮಾತನಾಡಿದರು. "ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿತ್ತು. ಆ ಕಾರಣದಿಂದ ಹಾಜರಾಗಿದ್ದೇನೆ. ತನಿಖಾಧಿಕಾರಿಗಳ ತಂಡ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ನನಗೆ ನ್ಯಾಯ ಸಿಗುವ ಭರವಸೆ ಇದೆ" ಎಂದು ಹೇಳಿದರು.
ಜಾಮೀನು ಅರ್ಜಿ ಇಂದು ವಿಚಾರಣೆ : ಸೋಮವಾರ ವಿಜಯಾನಂದ ಕಾಶಪ್ಪನವರ್ ಅವರ ನಿರೀಕ್ಷಣಾ ಜಾಮೀನಿನ ವಿಚಾರಣೆಯನ್ನು ಕೈಗೆತ್ತಿಕೊಂಡ ಸೆಷನ್ ನ್ಯಾಯಾಲಯ, ಆರೋಪಿ ಪರ ವಕೀಲರ ವಾದ ಕೇಳಿದ ಬಳಿಕ ಸರ್ಕಾರಿ ಅಭಿಯೋಜಕರ ವಾದ ಮಂಡನೆಗಾಗಿ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.