ಕಾವೇರಿ: ಬೆಂಗಳೂರು ಪ್ರಕ್ಷುಬ್ದ, ಪೊಲೀಸರ ಗುಂಡಿಗೆ ಯುವಕ ಬಲಿ
ಬೆಂಗಳೂರು, ಸೆ 12: ಸುಪ್ರೀಂಕೋರ್ಟಿನ ತೀರ್ಪಿನ ನಂತರ ರಾಜಧಾನಿ ಬೆಂಗಳೂರಿನಲ್ಲಿ ಕಾನೂನು, ಸುವ್ಯವಸ್ಥೆ ಹದೆಗೆಟ್ಟಿದ್ದು, ಪೊಲೀಸರ ಫೈರಿಂಗ್ ನಲ್ಲಿ ಉಮೇಶ್ (25) ಎನ್ನುವ ಯುವಕ ಸಾವನ್ನಪ್ಪಿದ್ದಾನೆ.
ರಾಜಗೋಪಾಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆಯ ಪಡೆಯ ಪೊಲೀಸರು ನಡೆಸಿದ ಫೈರಿಂಗ್ ನಲ್ಲಿ ಒಬ್ಬ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. (ಬೆಂಗಳೂರು ಹೊತ್ತಿ ಉರಿಯಲು ಮೂಲ ಕಾರಣ ಇದು)
ಮಾಗಡಿ ರಸ್ತೆ, ರಾಜಗೋಪಾಲ ನಗರ ಠಾಣೆಯ ವ್ಯಾಪ್ತಿಯ ಹೆಗ್ಗನಹಳ್ಳಿಯಲ್ಲಿ ಹೊಯ್ಸಳ ವಾಹನಕ್ಕೆ ಪ್ರತಿಭಟನಾಕಾರರು ಬೆಂಕಿಯಿಟ್ಟ ನಂತರ ಪರಿಸ್ಥಿತಿ ಬಿಗಡಾಯಿಸಿದ್ದರಿಂದ, ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಈ ಮಧ್ಯೆ, ವಿಜಯನಗರದ ಎಂ ಸಿ ಲೇಔಟ್ ನಲ್ಲಿರುವ ಸಿಎಂ ಮನೆಯ ಮೇಲೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಮೈಸೂರು ರಸ್ತೆಯ ಟಿಂಬರ್ ಯಾರ್ಡ್ ಲೇಔಟ್ ನಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು, ಸಿದ್ದರಾಮಯ್ಯನವರ ಜೊತೆಗೆ ನಾವಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಸಿಎಂ ಸಿದ್ದರಾಮಯ್ಯ ವಸ್ತುಸ್ಥಿತಿಯ ವಿವರಣೆಯನ್ನು ನೀಡಿದ್ದಾರೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮೀಸಲು ಪಡೆಯನ್ನು ಕಳುಹಿಸಲು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ (ಸೆ 13) ತುರ್ತು ಸಂಪುಟ ಸಭೆಯನ್ನು ಕರೆದಿದ್ದಾರೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ರಾಜಕೀಯ ನಾಯಕರು ಶಾಂತಿಯಿಂದ ಇರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.