ಉಮೇಶ್ ಕುಟುಂಬಕ್ಕೆ ಪರಿಹಾರ 10 ಲಕ್ಷ ರು.ಗೆ ಏರಿಕೆ
ಬೆಂಗಳೂರು, ಸೆಪ್ಟೆಂಬರ್ 13 : ಉದ್ರಿಕ್ತ ಜನರನ್ನು ಚೆದುರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾದ ತುಮಕೂರು ಜಿಲ್ಲೆಯ ಉಮೇಶ್ ಕುಟುಂಬಕ್ಕೆ ರಾಜ್ಯ ಸರಕಾರ 5 ಲಕ್ಷ ರು. ಪರಿಹಾರ ಘೋಷಿಸಿದೆ.
ಇದೀಗ ಬಂದ ಸುದ್ದಿ : ಘೋಷಣೆ ಮಾಡಿದ 5 ಲಕ್ಷ ರು.ಯನ್ನು ಉಮೇಶ್ ಕುಟುಂಬ ತಿರಸ್ಕರಿಸಿದ್ದರಿಂದ, ಅದನ್ನು ಪರಿಷ್ಕರಣೆ ಮಾಡಿ 10 ಲಕ್ಷ ರು.ಗೆ ಏರಿಸಲಾಗಿದೆ. ಈ ಸುದ್ದಿಯನ್ನು ಡಾ. ಪರಮೇಶ್ವರ ಘೋಷಣೆ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಸಿಂಗೋನಹಳ್ಳಿಯ ಮೂಲದವನಾದ 25 ವರ್ಷದ ಉಮೇಶ್, ಹೆಗ್ಗನಹಳ್ಳಿಯಲ್ಲಿ ನಡೆದ ಗೋಲಿಬಾರ್ ನಲ್ಲಿ ದುರಂತ ಸಾವಿಗೀಡಾದ ದುರ್ದೈವಿ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಮನೆಗೆ ಮರಳುತ್ತಿರುವಾಗ ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾಗಿದ್ದ.
ಆದರೆ, ಉಮೇಶ್ ಕುಟುಂಬಸ್ಥರು ಐದು ಲಕ್ಷ ರು. ಪರಿಹಾರವನ್ನು ಪಡೆಯಲು ಒಪ್ಪುತ್ತಿಲ್ಲ. ಉಮೇಶ್ ಕುಟುಂಬಕ್ಕೆ 15 ಲಕ್ಷ ರು. ಪರಿಹಾರ ನೀಡಬೇಕು. ಆತನ ಪತ್ನಿಗೆ ಸರಕಾರಿ ಕೆಲಸ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉಮೇಶ್ ನಿಗೆ ಎರಡು ವರ್ಷದ ಹೆಣ್ಣುಮಗುವಿದ್ದು, ಆತನ ಹೆಂಡತಿ 6 ತಿಂಗಳ ಗರ್ಭಿಣಿ ಕೂಡ.
ಆತನ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಯಾವುದೇ ಗಲಭೆಯಲ್ಲಿ ಭಾಗವಹಿಸದಿದ್ದರೂ ಬಲಿಯಾದ ಉಮೇಶನ ಕುಟುಂಬಕ್ಕೆ ಪರಿಹಾರ ನೀಡದೆ ಮರಣೋತ್ತರ ಪರೀಕ್ಷೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಉಮೇಶ್ ಸಂಬಂಧಿಕರು ಪಟ್ಟು ಹಿಡಿದಿದ್ದರು.
ಕಾವೇರಿ ನೀರು ಹಂಚಿಗೆ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದರಿಂದ ಬೆಂಗಳೂರಿನಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಸೋಮವಾರ ಹಿಂಸಾರೂಪಕ್ಕೆ ತಿರುಗಿತ್ತು. ಸುಮಾರು ನೂರಕ್ಕೂ ಹೆಚ್ಚು ತಮಿಳುನಾಡಿನ ವಾಹನಗಳು ಬೆಂಕಿಗಾಹುತಿಯಾದವು. ಹೆಗ್ಗನಹಳ್ಳಿಯಲ್ಲಿ ಗಲಭೆನಿರತ ಜನರು ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಉಮೇಶ್ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ, ಆತನ ಹಳ್ಳಿಯಲ್ಲಿ ಸ್ಮಶಾನಮೌನ ಆವರಿಸಿದೆ. ನಾವು ಕೂಲಿನಾಲಿ ಮಾಡಿ ಮಗನನ್ನು ಬೆಳೆಸಿದ್ದೆವು. ಆತನೇ ನಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ, ಈಗ ನಮಗೆ ಗತಿಯಾರು ಎಂದು ಉಮೇಶ್ ತಾಯಿ ಮತ್ತು ತಂದೆ ಕಣ್ಣೀರುಗರೆಯುತ್ತಿದ್ದಾರೆ.