ಕಾವೇರಿಗಾಗಿ ಕೋಪ ಮರೆತು ಗೌಡ್ರ ಮನೆಗೆ ಬಂದ ಸಿದ್ದರಾಮಯ್ಯ
ಬೆಂಗಳೂರು, ಸೆ. 21: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಮಾಜಿ ಪ್ರಧಾನಿ ದೇವೇಗೌಡರನ್ನು ಹುಡುಕಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಹತ್ತಾರು ವರ್ಷಗಳ ಬಳಿಕ ಪದ್ಮನಾಭ ನಗರ ನಿವಾಸದಲ್ಲಿ ಈ ಇಬ್ಬರು ಹಿರಿಯ ರಾಜಕಾರಣಿಗಳ ಸಮಾಗಮಕ್ಕೆ ಕಾವೇರಿ ಸಾಕ್ಷಿಯಾಗಿದೆ.
ಸೆಪ್ಟೆಂಬರ್ 21 ರಿಂದ 27ರ ವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಆದೇಶಿಸಿದೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]
ಹಾಗೂ ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ. ಈ ಬಗ್ಗೆ ಸಾಧಕ ಬಾಧಕಗಳನ್ನು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ದೇವೇಗೌಡರ ಸಲಹೆ ಕೇಳಲು ಬಂದಿದ್ದಾರೆ. [ಬಂಗಾರಪ್ಪ ಬಗ್ಗೆ ಮಾತನಾಡ್ತೀರಿ, 1995ರಲ್ಲಿ ಪರಿಸ್ಥಿತಿ ಗೊತ್ತೇನ್ರಿ']
ಸಿದ್ದರಾಮಯ್ಯ ಅವರ ಜತೆ ಲೋಕೋಪಯೋಗಿ ಸಚಿವ ಡಾ.ಎಚ್ ಸಿ ಮಹದೇವಪ್ಪ, ರಾಜ್ಯದ ಪರ ವಕೀಲ ಮೋಹನ್ ಕಾತರಿಕಿ ಅವರು ಉಪಸ್ಥಿತರಿದ್ದಾರೆ.
ಸುಪ್ರೀಂಕೋರ್ಟಿನಿಂದ ಎರಡು ಬಾರಿ ಮಧ್ಯಂತರ ತೀರ್ಪು ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಒಮ್ಮೆ ಬಂದಿರುವ ತೀರ್ಪಿನಿಂದ ಮತ್ತೊಮ್ಮೆ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದ ತೀರ್ಪಿನ ಅನ್ವಯ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕ ರಾಜ್ಯಕ್ಕೆ ಮರಣ ಶಾಸನವಾಗಲಿದೆ ಎಂಬ ಕೂಗೆದ್ದಿದೆ.
ನೀರು ಬೀಡಬೇಡಿ: ಈಗಾಗಲೇ ತಮಿಳುನಾಡಿಗೆ 1.60 ಲಕ್ಷ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ. ನಮ್ಮ ಜಲಾಶಯದ ಸ್ಥಿತಿಗತಿ ನೋಡಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಂತೆ ಕಾಣುತ್ತಿಲ್ಲ. ಜನರಿಗೆ ಕುಡಿಯುವ ನೀರು ಮುಖ್ಯವೋ ಅಲ್ಲಿನ(ತಮಿಳುನಾಡಿಗೆ) ಬೆಳೆಗೆ ನೀರು ಮುಖ್ಯವೋ ಎಂದು ದೇವೇಗೌಡರು ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿದರೆ ಒಳ್ಳೆಯದು ಇಲ್ಲದಿದ್ದರೆ, ಅಣೆಕಟ್ಟುಗಳ ಮೇಲೆ ಕರ್ನಾಟಕ ಸರ್ಕಾರ ನಿಯಂತ್ರಣ ಕಳೆದುಕೊಳ್ಳಲಿದೆ ಎಂದು ದೇವೇಗೌಡರು ಹೇಳಿದ್ದಾರೆ.