ಪಿಎಸ್ಐ ರೂಪಾ ತಂಬದ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜುಲೈ 26 : ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಬೆಂಗಳೂರಿನ ವಿಜಯನಗರ ಠಾಣೆ ಪಿಎಸ್ಐ ರೂಪಾ ತಂಬದ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ 309 ಪ್ರಕಾರ ಆತ್ಮಹತ್ಯೆ ಯತ್ನ ಪ್ರಕರಣ ದಾಖಲು ಮಾಡಲಾಗಿದೆ.
ಜುಲೈ 19ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಪಿಎಸ್ಐ ರೂಪಾ ಅವರು ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ. ಸದ್ಯ, ಚೇತರಿಸಿಕೊಳ್ಳುತ್ತಿರುವ ರೂಪಾ ಅವರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.[ಕಿರುಕುಳದ ಬಗ್ಗೆ ಹೇಳಿಕೆ ಕೊಟ್ಟ ರೂಪಾ ತಂಬದ]
ಆತ್ಮಹತ್ಯೆಗೆ ಯತ್ನಿಸಿದವರ ವಿರುದ್ಧ ಐಪಿಸಿ ಸೆಕ್ಷನ್ 309ರ ಅನ್ವಯ ಪ್ರಕರಣ ದಾಖಲು ಮಾಡಲು ಅವಕಾಶವಿದೆ. ಒಂದು ವೇಳೆ ಅವರ ಮೇಲಿನ ಆರೋಪ ಸಾಬೀತಾದರೆ 1 ವರ್ಷದ ತನಕ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ರಾಜಾಜಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತನಿಖೆ ನಡೆಸಿ ವರದಿ ನೀಡಲಿದ್ದಾರೆ.[ಕರ್ನಾಟಕದ ಪೊಲೀಸರು ಸಮೂಹಸನ್ನಿಗೊಳಗಾಗಿದ್ದಾರಾ?]
ಆತ್ಮಹತ್ಯೆಗೆ ಯತ್ನಿಸಿದ ಹಾಸನ ಉಪವಿಭಾಗಾಧಿಕಾರಿ ವಿಜಯಾ ಅವರ ವಿರುದ್ಧವೂ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ರಾಜಕೀಯ ನಾಯಕರ ಕಿರುಕುಳದಿಂದ ಬೇಸತ್ತು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.[ಆತ್ಮಹತ್ಯೆಗೆ ಯತ್ನಿಸಿದ ಹಾಸನ ಎಸಿ ವಿರುದ್ಧ ಎಫ್ ಐಆರ್]
ಆಯುಕ್ತರ ಆದೇಶದಂತೆ ಪ್ರಕರಣ
ಬೆಂಗಳೂರು ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರ ಆದೇಶದಂತೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ರೂಪಾ ತಂಬದ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಠಾಣೆಯ ಇನ್ಸ್ಪೆಕ್ಟರ್ ಈ ಕುರಿತು ತನಿಖೆ ನಡೆಸಿ, ವರದಿ ನೀಡಲಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದರು
ಜುಲೈ 19ರಂದು ರಾಜಾಜಿನಗರದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಮಾತ್ರೆಗಳನ್ನು ಸೇವಿಸಿ ರೂಪಾ ಅವರು ಆತ್ಮಹತ್ಯೆ ಯತ್ನಿಸಿದ್ದರು. ನಂತರ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಕಿರುಕುಳದಿಂದಾಗಿ ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ರೂಪಾ ತಂಬದ ಅವರು ಹೇಳಿಕೆ ನೀಡಿದ್ದಾರೆ. ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಅರುಣ್ ನಾಯಕ್ ಅವರು ರೂಪಾ ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. 'ಇನ್ಸ್ಪೆಕ್ಟರ್ ಸಂಜೀವ್ ಗೌಡ ಅವರು ಕರ್ತವ್ಯವ ವಿಚಾರದಲ್ಲಿ ತೊಂದರೆ ಕೊಡುತ್ತಿದ್ದರು' ಎಂದು ರೂಪಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 309ರ ಪ್ರಕಾರ ಪ್ರಕರಣ
'ರೂಪಾ ತಂಬದ ಅವರ ವಿರುದ್ಧ ಐಪಿಸಿ ಸೆಕ್ಷನ್ 309ರ ಪ್ರಕಾರ ಆತ್ಮಹತ್ಯೆ ಯತ್ನ ಪ್ರಕರಣ ದಾಖಲು ಮಾಡಲಾಗಿದೆ. ರಾಜಾಜಿನಗರ ಇನ್ಸ್ಪೆಕ್ಟರ್ ಅವರು ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ' ಎಂದು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಹೇಳಿದ್ದಾರೆ.
ಸಂಜೀವ್ ಗೌಡ ಅಮಾನತು
ಸೋಮವಾರ ಸಂಜೆ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ವಿಜಯ ನಗರ ಠಾಣೆ ಇನ್ಸ್ಪೆಕ್ಟರ್ ಸಂಜೀವ್ ಗೌಡ ಅವರನ್ನು ಅಮಾನತು ಮಾಡಿದ್ದಾರೆ. ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ 2 ಕೊಲೆ ನಡೆದಿತ್ತು. ರೌಡಿಶೀಟರ್ ಹರ್ಷ ಹಾಗೂ ಮೋಟು ಮಹೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಕಾರಣ ಸಂಜೀವ್ ಗೌಡ ಅವರನ್ನ ಅಮಾನತು ಮಾಡಲಾಗಿದೆ.