ಬಿಜೆಪಿ ಬೆದರಿಕೆಯಿಂದ ಬೆಂಗಳೂರಿಗೆ ಬಂದಿದ್ದೇವೆ : ಗುಜರಾತ್ ಶಾಸಕರ ಅಳಲು
ಬೆಂಗಳೂರು, ಜುಲೈ 30: ಬೆಂಗಳೂರಿನ 'ಈಗಲ್ಟನ್-ದಿ ಗಾಲ್ಫ್ ವಿಲೇಜ್' ರೆಸಾರ್ಟ್ ನಲ್ಲಿರುವ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಇಂದು ಮಾಧ್ಯಮಗಳ ಮುಂದೆ ಪೆರೇಡ್ ಮಾಡಲಾಯಿತು. ಈ ವೇಳೆ ಶಾಸಕರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ
"ನಾವು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಬೆಂಗಳೂರಿಗೆ ಬಂದಿದ್ದೇವೆ," ಎಂದು ಕಾಂಗ್ರೆಸ್ ಹಿರಿಯ ನಾಯಕ ಶಕ್ತಿ ಸಿನ್ಹಾ ಗೋಹಿಲ್ ತಮ್ಮ ಬೆಂಗಳೂರು ರೆಸಾರ್ಟ್ ರಾಜಕಾರಣವನ್ನು ಸಮರ್ಥಿಸಿಕೊಂಡರು.
"ಇವರಿಗೆ ಯಾವ ರೀತಿಯಲ್ಲಿ ಬಿಜೆಪಿ ಬೆದರಿಕೆ ಹಾಕಿದೆ ಎಂಬುದನ್ನು ಅವರ (ಕಾಂಗ್ರೆಸ್ ಶಾಸಕರು) ಬಳಿಯಲ್ಲೇ ಕೇಳಿ. ತಮಗೆ 15 ಕೋಟಿ ಆಫರ್ ನೀಡಿದಾಗಲೂ ಈ ಶಾಸಕರು ಪಕ್ಷದ ಜತೆ ನಿಂತುಕೊಂಡಿದ್ದಾರೆ," ಎಂದು ಶಕ್ತಿ ಸಿನ್ಹಾ ಗೋಹಿಲ್ ಹೇಳಿದರು.
ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ. 22 ಶಾಸಕರನ್ನು ರಾಜೀನಾಮೆ ಕೊಡಿಸುವ ಬಿಜೆಪಿ ಯತ್ನ ಸಫಲವಾಗುವುದಿಲ್ಲ ಎಂದು ಹೇಳಿದ ಗೋಹಿಲ್, "ರಾಜೀನಾಮೆ ನೀಡಿದ 7 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ. ಅವರಿಗೆ ಆತ್ಮಸಾಕ್ಷಿ ಜಾಗೃತವಾಗಿದೆ. ನಾನು ಅವರಲ್ಲಿ ಜನರ ಕುತಂತ್ರಕ್ಕೆ ಮಣಿಯಬೇಡಿ. ನಿಷ್ಠೆಗೆ ಅಂಟಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ," ಎಂದು ಹೇಳಿದರು.
ನಾವು ಸಿಂಗಾಪುರ ಅಥವಾ ವಿದೇಶಕ್ಕೆ ಹೋಗುವ ಯೋಚನೆಯಲ್ಲಿದ್ದೆವು. ಆದರೆ ಇಲ್ಲಿ ಸ್ವೀಕರಿಸಿದ ಪ್ರೀತಿಯಿಂದಾಗಿ ಇಲ್ಲಿಗೆ ಬಂದೆವು ಎಂದ ಗೋಹಿಲ್, "ನಮಗೆ ಸಂಖ್ಯೆ ಬೇಕಾಗಿದೆ. ಅವರು ಬೆದರಿಕೆ ಹಾಕುವುದಿಲ್ಲ ಎಂದಾದರೆ ನಮಗೆ ಒಂದು ಕ್ಷಣವೂ ಇಲ್ಲಿ (ಬೆಂಗಳೂರಿನಲ್ಲಿ) ಉಳಿಯಬೇಕಾದ ಅಗತ್ಯವಿಲ್ಲ," ಎಂದರು.
ಇನ್ನು ಶಾಸಕರಿಂದ ಮೊಬೈಲ್ ಫೋನ್ ಗಳನ್ನು ಕಿತ್ತುಕೊಳ್ಳಲಾಗಿದೆ ಎಂಬ ವಾದವನ್ನು ಕಾಂಗ್ರೆಸ್ ಶಾಸಕರು ತಳ್ಳಿ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿಯ ಪ್ರತಿಭಟನಾಕಾರರಿಗೆ ಪ್ರತ್ಯುತ್ತರ ನೀಡಿದ ಗೋಹಿಲ್ "ಬನಸ್ಕಾಂತದಲ್ಲಿ ಪ್ರವಾಹ ಬಂದಾಗ ನನ್ನ ಶಾಸಕರು ಎಲ್ಲರೂ ಜನರ ಜತೆ ಇದ್ದರು. ಆದರೆ ಯಾವ ಬಿಜೆಪಿ ಸಚಿವರು, ನಾಯಕರು, ಮುಖ್ಯಮಂತ್ರಿಗಳು ಅಲ್ಲಿರಲಿಲ್ಲ," ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಗುಜರಾತ್ ನ 40 ಕಾಂಗ್ರೆಸ್ ಶಾಸಕರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಪ್ರವಾಹ ಪೀಡಿತ ಗುಜರಾತಿಗೆ ಮರಳಿ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರು ರೆಸಾರ್ಟ್ ಮುಂಭಾಗ ಪ್ರತಿಭಟನೆ ನಡೆಸಿದರು.