ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದ ಒಪ್ಪಿಗೆ
ಬೆಂಗಳೂರು, ಆಗಸ್ಟ್ 11 : ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಮೊದಲ ಹಂತದಲ್ಲಿ ಪ್ರಾಧಿಕಾರ ಸ್ಥಾಪನೆ ಮಾಡಲು 5 ಕೋಟಿ ರೂ.ಗಳ ಅನುದಾನ ನೀಡಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಒಪ್ಪಿಗೆ ಸಿಕ್ಕಿದೆ. 15 ಸದಸ್ಯರನ್ನು ಒಳಗೊಂಡ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ.[ಕೆಂಪೇಗೌಡರ ಸಮಾಧಿ ಅಭಿವೃದ್ಧಿ]
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಸಚಿವರು ಹಾಗೂ 25 ಶಾಸಕರು ಸದಸ್ಯರಾಗಿರುವ ಪ್ರಾಧಿಕಾರ ರಚಿಸಬೇಕು ಎಂಬ ಬೇಡಿಕೆ ಇತ್ತು. ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದ ಬಳಿಕ ಸದಸ್ಯರ ಸಂಖ್ಯೆಯನ್ನು 15ಕ್ಕೆ ಮಿತಿಗೊಳಿಸಲು ತೀರ್ಮಾನಿಸಲಾಯಿತು.[ನಮ್ಮ ಮೆಟ್ರೋ ಇನ್ನು ಮುಂದೆ ಕೆಂಪೇಗೌಡ ಮೆಟ್ರೋ?]
'ಕೆಂಪೇಗೌಡರ ಹೆಸರು ಶಾಶ್ವತವಾಗಿ ಉಳಿಯಲು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ, ಸಂಶೋಧನೆ ಮಾಡಿಸಬೇಕು' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಒತ್ತಾಯಿಸಿದ್ದರು. ಸರ್ಕಾರ ಮೊದಲ ಹಂತದಲ್ಲಿ ಪ್ರಾಧಿಕಾರ ರಚನೆಗೆ 5 ಕೋಟಿ ಅನುದಾನ ನೀಡಲಿದೆ.[ಬ್ರಿಟಿಷರ ಕಾಲದಲ್ಲಿ ಕೆಂಪೇಗೌಡ್ರು ಇದ್ದಿದ್ದರೆ ಟಿಪ್ಪು ಆಗುತ್ತಿದ್ದರು, ಎಚ್ಡಿಕೆ]
ಸಮಾಧಿ ಅಭಿವೃದ್ಧಿ : ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಪಾಪುರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಸಮಾಧಿ ಪತ್ತೆಯಾಗಿದ್ದು, ರಾಜ್ಯ ಪುರಾತತ್ವ ಇಲಾಖೆ ಅದನ್ನು ಅಭಿವೃದ್ಧಿಗೊಳಿಸಲಿದೆ. ಸಮಾಧಿ ಅಭಿವೃದ್ಧಿಗೆ 2.36 ಕೋಟಿ ರೂ.ಗಳ ಯೋಜನೆಯನ್ನು ತಯಾರಿಸಲಾಗಿದೆ.
ಸಮಾಧಿ ಕೆಂಪೇಗೌಡರಿಗೆ ಸೇರಿದ್ದು ಎಂಬುದು ಖಚಿತವಾದ ನಂತರ ಪುರಾತತ್ವ ಇಲಾಖೆ ಅಭಿವೃದ್ಧಿಗೆ ಮುಂದಾಗಿದೆ. ಸಮಾಧಿ ಅಭಿವೃದ್ಧಿಗೆ 2 ಎಕರೆ ಜಾಗ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಜಿಲ್ಲಾಧಿಕಾರಿಗಳು ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶ ನೀಡಿದ್ದಾರೆ.