ಮಾತು ಮುರಿದರು ಬಿಎಸ್ ವೈ ಎಂದು ಮೌನ ಮುರಿದ ಈಶ್ವರಪ್ಪ
ಹೈಕಮಾಂಡ್ ಸೂಚನೆಯಂತೆ ನಾನೇನೋ ನಡೆದುಕೊಂಡೆ. ಅದರೆ ಯಡಿಯೂರಪ್ಪನವರು ಮಾತು ತಪ್ಪಿದರು ಎಂದು ಬೆಂಗಳೂರಿನಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬೆಂಗಳೂರು, ಮಾರ್ಚ್ 4: ವಿಧಾನಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅಂತೂ ಮೌನ ಮುರಿದಿದ್ದಾರೆ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮಾತು ಕೊಟ್ಟಂತೆ ನಾನು ರಾಯಣ್ಣ ಬ್ರಿಗೇಡ್ ನ ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದೇನೆ. ಆದರೆ ಯಡಿಯೂರಪ್ಪನವರು ತಮ್ಮ ಮಾತು ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಕೆಲ ಮುಖಂಡರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯಬೇಕಿತ್ತು. ಕೆಲವು ಕಡೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಆಗಬೇಕಿತ್ತು. ಮುಖಂಡರನ್ನು ಕರೆಸಿ ಮಾತನಾಡಬೇಕಿತ್ತು. ಆದರೆ ಯಡಿಯೂರಪ್ಪನವರು ಯಾವುದನ್ನೂ ಮಾಡಿಲ್ಲ. ಶುಕ್ರವಾರ ತುಮಕೂರಿನಲ್ಲಿ ಸೊಗಡು ಶಿವಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದು ನಿಜ ಎಂದು ಹೇಳಿದ್ದಾರೆ.['ಹೈಕಮಾಂಡ್ ಸಲಹೆ ಪಾಲಿಸದ ಬಿಎಸ್ ವೈ, ಮೂಲ ಕಾರ್ಯಕರ್ತರಿಗೆ ಅನ್ಯಾಯ']
ಡಿ ವೆಂಕಟೇಶ್ ಮೂರ್ತಿ, ಮಾಜಿ ಸಚಿವ ಸೊಗಡು ಶಿವಣ್ಣ, ಎಂಬಿ ನಂದೀಶ್ ಸೇರಿದಂತೆ ಇತರರಿಗೆ ನೋಟಿಸ್ ನೀಡಲಾಗಿತ್ತು. ಕೆಲವು ಕಡೆ ಆಯ್ಕೆ ಮಾಡಿದ್ದ ಪಕ್ಷದ ಜಿಲ್ಲಾಧ್ಯಕ್ಷರ ಬಗ್ಗೆ ಅಸಮಾಧಾನವಿತ್ತು. ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ರಾಜೀ ಸೂತ್ರ ಮಾಡಿ, ಬಿಎಸ್ ವೈ-ಈಶ್ವರಪ್ಪ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುವಂತೆ ಸೂಚಿಸಲಾಗಿತ್ತು.[ನಿಮಗೆ ಗುರಾಣಿಯಂತೆ ಬಳಕೆಯಾದ ಮುಖಂಡರ ಗತಿಯೇನು ಈಶ್ವರಪ್ಪನವರೆ?]
ಅದರಂತೆ ರಾಯಣ್ಣ ಬ್ರಿಗೇಡ್ ನಿಂದ ಈಶ್ವರಪ್ಪ ಅವರು ಅಂತರ ಕಾಯ್ದುಕೊಂಡರು. ಯಡಿಯೂರಪ್ಪನವರ ಜತೆಗೆ ಒಟ್ಟೊಟ್ಟಾಗಿ ರಾಜ್ಯ ಪ್ರವಾಸಗಳಲ್ಲಿ ಕಾಣಿಸಿಕೊಂಡರು. ಆದರೆ ಯಡಿಯೂರಪ್ಪನವರು ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರದಲ್ಲಾಗಲಿ, ನೋಟಿಸ್ ವಾಪಸ್ ಪಡೆಯುವ ವಿಚಾರದಲ್ಲಿ ಒಂದು ಹೆಜ್ಜೆ ಕೂಡ ಮುಂದಿಡಲಿಲ್ಲ. ಇದೇ ಕಾರಣಕ್ಕೆ ಮಾರ್ಚ್ 3ರಂದು ತುಮಕೂರಿನಲ್ಲಿ ಅಸಮಾಧಾನಗೊಂಡವರ ಸಭೆ ನಡೆದಿತ್ತು.